ದೇವರಿಗೇ ನಾಮ: ನಂಜುಂಡೇಶ್ವರನಾ, ಶ್ರೀಕಂಠೇಶ್ವರಾನ!?
ಮೈಸೂರು, ಸೆ.7: ಹೌದು ನಂಜನಗೂಡಿನಲ್ಲಿರುವ ವಿಶ್ವವಿಖ್ಯಾತ ದೇವ ನಂಜುಂಡೇಶ್ವರನೋ ಅಥವಾ ಶ್ರೀಕಂಠೇಶ್ವರನೋ !? ಎಂಬ ಜಿಜ್ಞಾಸೆ ಈಗ ಮೂಡಿದೆ. ಇದನ್ನು ಇತ್ಯರ್ಥಪಡಿಸಿಕೊಳ್ಳಲು ಹೈಕೋರ್ಟಿಗೆ ಅರ್ಜಿಯನ್ನೂ ಹಾಕಿಕೊಳ್ಳಲಾಗಿದೆ. ವಕೀಲ ಎಚ್ ಆರ್ ವಿಶ್ವನಾಥ್ ಎಂಬುವವರು ಈ ಅರ್ಜಿ ಸಲ್ಲಿಸಿದ್ದಾರೆ.

'ಮೂಲತಃ ಈ ಐತಿಹಾಸಿಕ ದೇಗುಲದ ದೇವರು ನಂಜುಂಡೇಶ್ವರ. ಆದರೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ದೇವರಿಗೇ ನಾಮ ಹಾಕಿ ಶ್ರೀಕಂಠೇಶ್ವರ ಎಂದೂ ಬದಲಾಯಿಸಿಬಿಟ್ಟಿವೆ. ಇದರಿಂದ ಭಕ್ತಾದಿಗಳ ಭಾವನೆಗೆ ಘಾಸಿಯಾಗಿದೆ' ಎಂದು ಆಕ್ಷೇಪಿಸಿ ಹೈಕೋರ್ಟಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಗಮನಾರ್ಹವೆಂದರೆ ನಂಜುಂಡೇಶ್ವರ ಹಾಗೂ ಶ್ರೀಕಂಠೇಶ್ವರ ವಿಭಿನ್ನ ಇತಿಹಾಸವುಳ್ಳ ದೇವರುಗಳು
ತಕರಾರು ಏನು?: ನಂಜುಂಡೇಶ್ವರನ ಭಕ್ತರೂ ಆದ ಅರ್ಜಿದಾರ ವಿಶ್ವನಾಥ್ ಹೇಳುವಂತೆ ಶತಮಾನದ ಇತಿಹಾಸವುಳ್ಳ ನಂಜುಂಡೇಶ್ವರನ ಇತಿಹಾಸವನ್ನೇ ತಿರುಚುವ ಪ್ರಯತ್ನ ನಡೆದಿದೆ. ಹಲವಾರು ವರ್ಷಗಳ ಹಿಂದೆ ದೇಗುಲಕ್ಕೆ ಭೇಟಿ ನೀಡಿದ್ದಾಗ ಅಲ್ಲಿ ನಂಜುಂಡೇಶ್ವರನ ಹೆಸರಿನಲ್ಲೇ ಪೂಜೆ ನಡೆಯುತ್ತಿತ್ತು.
ಆದರೆ ಇತ್ತೀಚೆಗೆ ಅಲ್ಲಿ ಎಲ್ಲವೂ ಶ್ರೀಕಂಠೇಶ್ವರಮಯವಾಗಿದೆ. ಅಲ್ಲಿನ ಅರ್ಚಕರೂ ಶ್ರೀಕಂಠೇಶ್ವರನ ಹೆಸರಿನಲ್ಲೇ ಪೂಜೆ ಪುನಸ್ಕಾರ ನಡೆಸುತ್ತಿದ್ದಾರೆ. ಮಂತ್ರ ಪಠನ ವೇಳೆ ಅಪ್ಪಿತಪ್ಪಿಯೂ ನಂಜುಂಡೇಶ್ವರನ ಹೆಸರು ಕೇಳಿಬರುವುದಿಲ್ಲ. ಜತೆಗೆ ಇಲ್ಲಿನ ನಾಮ ಫಲಕಗಳಲ್ಲೂ ಶ್ರೀಕಂಠೇಶ್ವರನ ಹೆಸರೇ ರಾರಾಜಿಸುತ್ತಿದೆ. ಇದು ಕಾನೂನುಬಾಹಿರ ಎಂಬುದು ಅರ್ಜಿದಾರ ವಿಶ್ವನಾಥರ ಅಭಿಪ್ರಾಯ.
ಇತಿಹಾಸ ಏನು ಹೇಳುತ್ತದೆ?: ಅಮೃತಕ್ಕಾಗಿ ರಾಕ್ಷಸರು ಮತ್ತು ದೇವತೆಗಳು ನಡೆಸಿದ ಸಮುದ್ರ ಮಥನದಲ್ಲಿ ಹೊರಬಂದ ವಿಷವನ್ನು ಸೇವಿಸಿದ್ದಕ್ಕಾಗಿ ಶಿವನಿಗೆ ನಂಜುಂಡೇಶ್ವರ ಎಂಬ ಹೆಸರು ಬಂದಿತು. ಅದರ ಸೂಚಕವಾಗಿ ಗಂಗರ ಆಳ್ವಿಕೆಯಲ್ಲಿ (9ನೇ ಶತಮಾನ) ದೇವಾಲಯ ಸ್ಥಾಪಿತವಾಯಿತು.
ನಂತರ ಹೊಯ್ಸಳರ ಕಾಲದಲ್ಲಿ ನವೀಕರಿಸಲಾಗಿತ್ತು. ಅಂದಿನಿಂದ ಇದನ್ನು ನಂಜುಂಡೇಶ್ವರನ ದೇವಸ್ಥಾನ ಎಂದು ಕರೆಯಲಾಗುತ್ತಿದೆ. ಟಿಪ್ಪು ಸುಲ್ತಾನ್ ತನ್ನ ಅವಧಿಯಲ್ಲಿ ಈ ದೇಗುಲಕ್ಕೆ 'ಹಕೀಂ ನಂಜುಂಡೇಶ್ವರ' ಎಂಬ ಬಿರುದು ನೀಡಿದ್ದ. ಈ ದೇವಾಲಯದಿಂದಲೇ ಈ ಪಟ್ಟಣಕ್ಕೆ ನಂಜನಗೂಡು ಎಂಬ ಹೆಸರು ಬಂದಿದೆ.
ವಿವಾದ ಏಕೆ?: ನಂಜುಂಡೇಶ್ವರ ಶ್ರಮಿಕ ವರ್ಗವನ್ನು ಪ್ರತಿನಿಧಿಸುವವನು. ಶ್ರೀಕಂಠೇಶ್ವರ ಶ್ರೀಮಂತ ವರ್ಗವನ್ನು ಪ್ರತಿನಿಧಿಸುವವನು. ಆದ್ದರಿಂದ ಹೆಸರು ಬದಲಾವಣೆಯಲ್ಲಿ ಮೇಲ್ವರ್ಗದ ಜನರ ಕೈವಾಡವಿದೆ. ಇದರಲ್ಲಿ ದೇವಾಲಯದ ಪುರೋಹಿಯ ವರ್ಗ ಮತ್ತು ಅಧಿಕಾರಿಗಳೂ ಶಾಮೀಲಾಗಿದ್ದಾರೆ ಎಂಬುದು ಅರ್ಜಿದಾರರ ವಾದದ ತಿರುಳು.
ಪಾರಂಪರಿಕವಾಗಿ ಬಂದಿರುವ ನಂಜುಂಡೇಶ್ವರನ ಹೆಸರನ್ನು ಬದಲಾಯಿಸಿ, ಮಂತ್ರ ಶ್ಲೋಕಗಳನ್ನು ಬದಲಾಯಿಸಿರುವುದು ಕ್ರಿಮಿನಲ್ ಅಪರಾಧ. ಆದ್ದರಿಂದ ತಕ್ಷಣ ದೇಗುಲದಲ್ಲಿರುವ ನಾಮ ಫಲಕಗಳು ಹಾಗೂ ಶ್ಲೋಕಗಳನ್ನು ಮತ್ತೆ ಮಾರ್ಪಡಿಸಿ ನಂಜುಂಡೇಶ್ವರನನ್ನೇ ಪಠಿಸುವಂತೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ನ್ಯಾಯಾಲಯವನ್ನು ಕೋರಿದ್ದಾರೆ. ಮುಂದಿನ ವಾರ ಕೋರ್ಟ್ ಈ ಕುತೂಹಲದ ಅರ್ಜಿಯನ್ನು ಕೈಗೆತ್ತಿಕೊಳ್ಳಲಿದೆ.
ಅಂದಹಾಗೆ, ನಂಜುಂಡೇಶ್ವರ ಅಲ್ಲಲ್ಲ ಶ್ರೀಕಂಠೇಶ್ವರನ ದೇವಸ್ಥಾನ ಮೈಸೂರಿನಿಂದ 30 ಕಿಮೀ ದೂರದಲ್ಲಿ ಮತ್ತು ಬೆಂಗಳೂರಿನಿಂದ 3 ಗಂಟೆ ಪ್ರಯಾಣ ದೂರದಲ್ಲಿದೆ.












Click it and Unblock the Notifications