ಲಂಚ ತಡೆಗೆ ಸೇನಾಡಳಿತವೇ ಸೂಕ್ತ: ಬೋಪಯ್ಯ ರೂಲಿಂಗ್
ಎಲ್ಲೆಡೆಯೂ ಭ್ರಷ್ಟಾಚಾರ ತಾಂಡವಾಡುತ್ತಿದೆ. ಇದನ್ನು ನಿಯಂತ್ರಿಸಲು ಸೇನಾಡಳಿತವೇ ಸೂಕ್ತ ಎಂದು ಸ್ಪೀಕರ್ ಕೆಜಿ ಬೋಪಯ್ಯ ಅಭಿಪ್ರಾಯಪಟ್ಟಿದ್ದಾರೆ.
ಪೊನ್ನಂಪೇಟೆ ಶಾರದಾದಾಶ್ರಮ, ವಿರಾಜಪೇಟೆ ತಾಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ, ಮೈಸೂರು ವಿವೇಕಾನಂದ ನಾಯಕತ್ವ ತರಬೇತಿ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಪೊನ್ನಂಪೇಟೆಯಲ್ಲಿ ನಡೆದ ನಾಯಕತ್ವ ಮತ್ತು ನೈತಿಕತೆ ಕುರಿತ ಕಾರ್ಯಾಗಾರವನ್ನು ಗುರುವಾರ ಉದ್ಘಾಟಿಸಿ, ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಎಲ್ಲೆಲ್ಲಿಯೂ ಭ್ರಷ್ಟಾಚಾರ ತಾಂಡವಾಡುತ್ತಿದೆ. ಇದರಿಂದ ಜನರಲ್ಲಿ ಕೆಟ್ಟ ಭಾವನೆ ಮನೆ ಮಾಡಿದೆ. ಇದನ್ನು ನಿಯಂತ್ರಿಸಲು ಸೇನಾಡಳಿತವೇ ಸೂಕ್ತ. ತನ್ಮೂಲಕ ಭ್ರಷ್ಟಾಚಾರ ತಡೆಗಟ್ಟಬಹುದು ಎಂಬುದು ಬೋಪಯ್ಯನವರ ಅಭಿಮತ.
ಚುನಾವಣೆ ಎಂಬುದು ಭ್ರಷ್ಟಾಚಾರಕ್ಕೆ ಮುನ್ನುಡಿಯಾಗಿದೆ. ಇದರಿಂದ ಪ್ರತಿಯೊಬ್ಬರಲ್ಲಿಯೂ ಜನಪ್ರತಿನಿಧಿಯ ಮೇಲೆ ಕೆಟ್ಟ ಮನೋಭಾವನೆ ಮೂಡುತ್ತಿದೆ. ಇಂದು ಸಹಕಾರ ಸಂಘಗಳಲ್ಲಿಯೂ ಚುನಾವಣೆ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು ಜನರು ಚುನಾವಣೆಯ ಬಗ್ಗೆ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.