ಕುಕ್ಕೆ ಸುಬ್ರಮಣ್ಯ ಕಾಡಲ್ಲಿ ಸತ್ತ ನಕ್ಸಲ್ ನಾಯಕ ಯಾರು?
ಯಸಳೂರು ಅರಣ್ಯ ಭಾಗದ ಗಡಿಯಲ್ಲಿ ಮಂಗಳವಾರ ರಾತ್ರಿ 7.45ರ ಸುಮಾರಿಗೆ ನಕ್ಸಲ್ ಎನ್ಕೌಂಟರ್ ಆದ ನಕ್ಸಲ್ ನಾಯಕನ ಶವ ಸದ್ಯಕ್ಕೆ ಮಂಗಳೂರಿನ ವೆನ್ ಲಾಕ್ ಶವಾಗಾರದಲ್ಲಿದೆ. ಎಎನ್ ಎಫ್ ಕಮಾಂಡರ್ ಅಲೋಕ್ ಕುಮಾರ್, ಜಿಲ್ಲಾ ಎಸ್ ಪಿ ಸುಭಾಷ್, ಅರಣ್ಯಾಧಿಕಾರಿ ದಾವೋದರ್ ನೇತೃತ್ವದ 'ಗ್ರೇ ಹೌಂಡ್' ತಂಡ ಭಾರಿ ದೊಡ್ಡ ಮಾವೋವಾದಿ ನಕ್ಸಲ್ ನಾಯಕನನ್ನೇ ಕೊಂದಿದ್ದಾರೆ.
ಬುಧವಾರ ರಾತ್ರಿ ವರೆಗೂ ನಕ್ಸಲ್ ಸದಸ್ಯ ಸತ್ತ ಬಗ್ಗೆ ಅಲೋಕ್ ಕುಮಾರ್ ಅವರು ಮಾಹಿತಿ ನೀಡಿರಲಿಲ್ಲ. ಆದರೆ, ಗುರುವಾರ ಬೆಳಗ್ಗೆ ಸತ್ತ ನಕ್ಸಲ್ ನಾಯಕನ ಪೂರ್ಣ ವಿವರವನ್ನು ಗುಪ್ತದಳದ ಸಹಾಯದಿಂದ ಪಡೆಯಲಾಗಿದೆ. ಆದರೆ,ಸತ್ತ ವ್ಯಕ್ತಿಯ ವಯಸ್ಸನ್ನು ಗಮನಿಸಿದರೆ, ಸತ್ತಿರುವುದು ಕುಪ್ಪುಸ್ವಾಮಿ ಅಲ್ಲ ದಿನೇಶ್ ಅಲಿಯಾಸ್ ಗೋಪಾಲ ಎಂಬ ಶಂಕೆ ವ್ಯಕ್ತವಾಗಿದೆ.
ತಮಿಳು ನಾಯಕ : ರಮೇಶ್ ಅಲಿಯಾಸ್ ಕುಪ್ಪುಸ್ವಾಮಿಯು ಕರ್ನಾಟಕ, ಕೇರಳ, ತಮಿಳುನಾಡು ರಾಜ್ಯಗಳನ್ನೊಳಗೊಂಡ ಸೌತ್ವೆಸ್ಟರ್ನ್ ರೀಜನಲ್ ಬ್ಯೂರೋ(ಎಸ್ಡಬ್ಲ್ಯುಆರ್ಬಿ)ದ ನಾಯಕತ್ವವನ್ನು ಒಂದೂವರೆ ವರ್ಷದ ಹಿಂದೆ ವಹಿಸಿಕೊಂಡಿದ್ದ.
ಆ. 22ರಂದು ನಕ್ಸಲರ ತಂಡ ಬಿಸಿಲೆ ಕಾಡಿನಂಚಿನಲ್ಲಿರುವ ಎರ್ಮಾಯಿಲ್ನ ಮನೆಯೊಂದರಲ್ಲಿ ಊಟ ಮಾಡಿ ತೆರಳಿದೆ. ಟ್ರೆಕ್ಕಿಂಗ್ ಬಂದಿರುವವರ ರೀತಿಯಲ್ಲಿ ನಟಿಸಿದ್ದಾರೆ. ಆದರೆ, ಮರುದಿನ ಚೇರುವಿನ ಮನೆಯೊಂದಕ್ಕೆ ಬಂದವರು 2.ಕೆ.ಜಿ ಅಕ್ಕಿ,2 ತೆಂಗಿನ ಕಾಯಿ ಪಡೆದುಕೊಂಡು ಹೋದಾಗ ಸ್ಥಳೀಯರಿಗೆ ಅನುಮಾನ ಬಂದಿದೆ. ಜೊತೆಗೆ ಮತ್ತೊಂದು ಮನೆಯಿಂದ ಸೀಮೆಎಣ್ಣೆ ಪಡೆದಿದ್ದಾರೆ.
ಎಲ್ಲಾ ಸಾಮಾನು ಸರಂಜಾಮು ಸಿದ್ಧವಾದ ಮೇಲೆ ನೇರ ಕುಕ್ಕೆ ಸುಬ್ರಮಣ್ಯ ಬಳಿ ಹೋಂ ಸ್ಟೇನಲ್ಲಿ ರೂಮ್ ಪಡೆದು ಅಲ್ಲಿ ತಮ್ಮ ಲ್ಯಾಪ್ ಟಾಪ್, ಮೊಬೈಲ್ ಫೋನ್ ಚಾರ್ಚ್ ಮಾಡಿಕೊಂಡಿದ್ದಾರೆ.
ನಂತರ ಕುಲ್ಕುಂದ ಪಳ್ಳಿಗದ್ದೆ ಪರಿಸರದ ಮನೆಗಳಿಗೆ ನಕ್ಸಲರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ತೆರಳಿದ್ದಾರೆ. ಈ ಸಂದರ್ಭದಲ್ಲಿ ಕಾಡಿನಲ್ಲಿ ಸುತ್ತಾಡುತ್ತಿರುವುದು 7-8 ಜನರಿರುವ ನಕ್ಸಲ್ ತಂಡ ಎಂಬುದು ಎಎನ್ ಎಫ್ ತಂಡ ಖಾತ್ರಿ ಪಡೆಸಿಕೊಂಡಿದೆ.
ಎರ್ಮಾಯಿಲ್ ಕಡೆಯಿಂದ ದಾಳಿ ನಡೆಸಿದರೆ ಅಡ್ಡಹೊಳೆ ಮತ್ತು ಕೋಟೆಸಾರು ಹೊಳೆಯ ಮಧ್ಯೆ ನಕ್ಸಲರು ಸಿಕ್ಕಿಕೊಂಡು ತಪ್ಪಿಸಿಕೊಳ್ಳಲು ಅಸಾಧ್ಯ ಎಂಬ ಯೋಜನೆ ಹಾಕಿಕೊಂಡ ಎಎನ್ ಎಫ್ ತಂಡ ಸಮರ್ಥವಾಗಿ ಯೋಜನೆಯನ್ನು ಕಾರ್ಯಗತಗೊಳಿಸಿ ನಕ್ಸಲ್ ನಾಯಕನನ್ನು ನೆಲಕ್ಕುರಳಿಸಿದೆ.
ನಕ್ಸಲ್ ಬಿ.ಜಿ. ಕೃಷ್ಣಮೂರ್ತಿ ಶೃಂಗೇರಿ ಸಮೀಪ ಕಿಗ್ಗದಲ್ಲಿ ನಡೆದ ಎನ್ಕೌಂಟರ್ನಲ್ಲಿ ಮೃತಪಟ್ಟ ಬಳಿಕ ಚೆರ್ಕುರಿ ರಾಜ್ಕುಮಾರ್ ಅಲಿಯಾಸ್ ಅಝಾದ್ ಎಂಬಾತ ಈ ಘಟಕದ ನಾಯಕತ್ವ ವಹಿಸಿದ್ದು 2010 ಆತನ ಹತ್ಯೆಯಾದ ಬಳಿಕ ಕುಪ್ಪುಸ್ವಾಮಿ ನಾಯಕತ್ವ ವಹಿಸಿಕೊಂಡಿದ್ದ ಎಂದು ತಿಳಿದುಬಂದಿದೆ.
ಪಶ್ಚಿಮ ಮತ್ತು ಪೂರ್ವ ಘಟ್ಟದ ಮಧ್ಯೆ ರೆಡ್ ಕಾರಿಡಾರ್ ನಿರ್ಮಿಸುವುದು ಇವರ ಉದ್ದೇಶವಾಗಿತ್ತು. ಕಪ್ಪುಸ್ವಾಮಿ ಈ ಮೂರು ರಾಜ್ಯಗಳಲ್ಲಿ ಎಸ್ಡಬ್ಲ್ಯುಆರ್ಬಿ ಘಟಕವನ್ನು ಬಲಪಡಿಸಲು ಸಿದ್ಧತೆ ನಡೆಸಿದ್ದ. ವೀರಪ್ಪನ್ ಅಡಗುದಾಣ ಈ ತಂಡದ ಮೂಲ ನೆಲೆಯಾಗಿತ್ತು ಎನ್ನಲಾಗಿದೆ.