ಸಿಎಂ ಆದೇಶಕ್ಕೆ ಡೋಂಟ್ ಕೇರ್ ಎಂದ ಶಾಸಕರು
ಸದ್ಯ ಪೆರು ಮತ್ತು ಬ್ರೆಜಿಲ್ ಪ್ರವಾಸದಲ್ಲಿರುವ 12 ಶಾಸಕರು ಏಕಾಏಕಿ ಪ್ರವಾಸದ ವೇಳಾ ಪಟ್ಟಿಯನ್ನು ಬದಲು ಮಾಡಲು ಸಾಧ್ಯವಿಲ್ಲ. ಹಾಗಾಗಿ ನಮ್ಮ ಯೋಜಿತ ವೇಳಾಪಟ್ಟಿಯಂತೆ ಸ್ವದೇಶಕ್ಕೆ ವಾಪಾಸ್ ಆಗುತ್ತೇವೆ ಎಂದಿದ್ದಾರೆ. ಸಿಎಂ ಆದೇಶಕ್ಕೆ ಕ್ಯಾರೇ ಅನ್ನದ ಶಾಸಕರ ಈ ನಡೆಯಿಂದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮುಖಭಂಗ ಅನುಭವಿಸಿದ್ದಾರೆ.
ಮುಂದಿನ ದಿನಗಳಲ್ಲಿ ಮೋಜಿನ ಪ್ರವಾಸಕ್ಕೆ ಕಡಿವಾಣ ಹಾಕಲಾಗುವುದು ಎಂದು ಬಳ್ಳಾರಿ ಜಿಲ್ಲೆ ಹೂವಿನ ಹಡಗಲಿಯಲ್ಲಿ ಮುಖ್ಯಮಂತ್ರಿಗಳು ಮಂಗಳವಾರ (ಸೆ 4) ಹೇಳಿಕೆ ನೀಡಿದ್ದರು.
ಶಾಸಕರ ಪ್ರವಾಸದಿಂದ ಪ್ರಪಂಚವೇನೂ ಮುಳುಗಿ ಹೋಗೋಲ್ಲಾ ಎನ್ನುವ ಅಸಂಬಂದ್ದ ಹೇಳಿಕೆ ನೀಡಿದ್ದ ಹಿರೇಕೆರೂರು ಕಾಂಗ್ರೆಸ್ ಶಾಸಕ ಬಿ ಸಿ ಪಾಟೀಲ್ ನೇತೃತ್ವದಲ್ಲಿ 12 ಮಂದಿ ಶಾಸಕರು ಆಗಸ್ಟ್ 30ರಿಂದ ಸೆಪ್ಟಂಬರ್ 14ರ ವರೆಗೆ ವಿದೇಶ ಪ್ರವಾಸ ಕೈಗೊಂಡಿದ್ದಾರೆ.
ಈ ನಡುವೆ ಯೋಗೀಶ್ ಭಟ್ ನೇತೃತ್ವದಲ್ಲಿ ಇನ್ನೊಂದು ತಂಡ ಸೆಪ್ಟಂಬರ್ 26ರಿಂದ ಅಕ್ಟೋಬರ್ 14ರ ವರೆಗೆ ಸದ್ದಿಲ್ಲದೇ ಪ್ರವಾಸಕ್ಕೆ ಸಜ್ಜಾಗುತ್ತಿದೆ. ಆದರೆ ಸ್ಪೀಕರ್ ಬೋಪಯ್ಯ ವಿದೇಶ ಪ್ರವಾಸಕ್ಕೆ ಹಸಿರು ನಿಶಾನೆ ತೋರಿಸುವ ಸಾಧ್ಯತೆ ಕಮ್ಮಿ ಎನ್ನಲಾಗಿದೆ.