ಮಂಜೇಶ್ವರ: ಪುತ್ತೂರು ವಿದ್ಯಾರ್ಥಿನಿ ಸೋನಾಲಿ ಶವ ಪತ್ತೆ
ಸೋನಾಲಿ ವ್ಯಾಸಂಗದಲ್ಲಿ ಹಿಂದೆಬಿದ್ದಿದ್ದಳು. ಗಣಿತ ಅವಳಿಗೆ ಕಬ್ಬಿಣದ ಕಡಲೆಯಾಗಿತ್ತು. ಈ ಬಗ್ಗೆ ಶಿಕ್ಷಕಿ ಸಹ ಗದರಿಕೊಂಡಿದ್ದರು. ಸೋನಾಲಿ ಆತ್ಮಹತ್ಯೆಗೆ ಇದೇ ಕಾರಣ ಎನ್ನಲಾಗಿದೆ. ಮೂಲತಃ ಗುಜರಾತ್ ನಿವಾಸಿಯಾಗಿರುವ ಸೋನಾಲಿಯ ಕುಟುಂಬವು ಕಳೆದ 10 ವರ್ಷಗಳಿಂದ ಪುತ್ತೂರಿನಲ್ಲಿ ವಾಸಿಸುತ್ತಿದೆ.
ಪುತ್ತೂರಿನ ಸುದಾನ ಶಾಲೆಯ ಹತ್ತನೆ ತರಗತಿಯ ವಿದ್ಯಾರ್ಥಿಯಾಗಿದ್ದ ಈಕೆ, ಕಳೆದ ಆ. 27ರ ಸಂಜೆ ಪಾಣೆಮಂಗಳೂರು ಸಮೀಪದ ಗೂಡಿನ ಬಳಿಯ ಪಾಣೆಮಂಗಳೂರು ಹಳೆ ಸೇತುವೆಯಿಂದ ನೇತ್ರಾವತಿ ನದಿಗೆ ಹಾರಿದ್ದಳು. ಇದನ್ನು ಪ್ರತ್ಯಕ್ಷದರ್ಶಿಯೊಬ್ಬರು ಗಮನಿಸಿದ್ದರು. ತಕ್ಷಣ ಅವರು ಸ್ಥಳೀಯರು ಮತ್ತು ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದರು.
ಹುಡುಕಾಟಕ್ಕಿಟ್ಟ ಅಗ್ನಿಶಾಮಕ ದಳದವರಿಗೆ ನೇತ್ರಾವತಿ ಉಕ್ಕಿ ಹರಿಯುತ್ತಿದ್ದು ಅಡಚಣೆಯಾಗಿತ್ತು. ಆದ್ದರಿಂದ ಈಕೆಯ ಸುಳಿವು ಸುಲಭವಾಗಿ ಲಭ್ಯವಾಗಿರಲಿಲ್ಲ. ನಿನ್ನೆ ಸಂಜೆ ಏಳು ಗಂಟೆಯ ಸುಮಾರಿಗೆ ಮಂಜೇಶ್ವರ ಕಡಲ ಕಿನಾರೆಯ ಬಳಿ ಮೃತದೇಹವೊಂದು ತೇಲುತ್ತಿರುವುದು ಕಂಡು ಬಂದಿದ್ದು, ಸ್ಥಳೀಯರು ಮಂಜೇಶ್ವರ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಬಳಿಕ ಮಂಜೇಶ್ವರ ಪೊಲೀಸರು ಪುತ್ತೂರು ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದರಂತೆ ನಿನ್ನೆಯೇ ಪುತ್ತೂರು ಪೊಲೀಸರು ಹಾಗೂ ಸೋನಾಲಿಯ ಕುಟುಂಬದವರು ಮಂಜೇಶ್ವರಕ್ಕೆ ಆಗಮಿಸಿದ್ದು, ಮೃತದೇಹದ ಗುರುತು ಪತ್ತೆ ಹಚ್ಚಿದ್ದಾರೆ.
ಸೋನಾಲಿ ಪಟೇಲ್ ತನ್ನ ಸಹೋದರರಾದ ಪ್ರಗತಿ ಮತ್ತು ಸುಜಲ್ ಜತೆ ಎಂದಿನಂತೆ ಆ. 27ರಂದು ಮಂಜಲಪಡ್ಪುವಿನ ಸುದಾನ ಶಾಲೆಗೆ ರಿಕ್ಷಾದಲ್ಲಿ ತೆರಳಿದ್ದು, ಶಾಲೆ ಬಿಟ್ಟ ಬಳಿಕ ಸಹೋದರೊಂದಿಗೆ ರಿಕ್ಷಾದಲ್ಲಿ ತೆರಳದೆ ತಾನು ಮಂಗಳ ಸ್ಟೋರ್ಗೆ ಹೋಗಿ ಬರುವುದಾಗಿ ತಿಳಿಸಿದ್ದಳು ಎನ್ನಲಾಗಿದೆ. ಅಂದು ಸಂಜೆ ಪಾಣೆಮಂಗಳೂರಿಗೆ ಬಂದ ಅವಳು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಳೆನ್ನಲಾಗಿದೆ.