ಬೆಂಗಳೂರು ಸೇರಿ ಹಲವೆಡೆ SMS ನಿಷೇಧ ಇಲ್ಲ
ಮೊಬೈಲ್ ಎಸ್ಎಂಎಸ್ ನಿಷೇಧ ಹಿಂತೆಗೆತ ಕುರಿತಂತೆ ಕೇಂದ್ರ ಗೃಹ ಸಚಿವಾಲಯವು ಹೇಳಿಕೆಯೊಂದನ್ನು ನೀಡಿ, ಸಗಟು ಎಸ್ಎಂಎಸ್ ಹಾಗೂ ಎಂಎಂಎಸ್ಗಳ ಮೇಲೆ ಹೇರಲಾಗಿದ್ದ ನಿಷೇಧವನ್ನು ತಕ್ಷಣದಿಂದಲೇ ಗುರುವಾರ(ಆ.30) ಜಾರಿಗೆ ಬರುವಂತೆ ಹಿಂದೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ.
ಬೆಂಗಳೂರು, ಚೆನ್ನೈ, ಮುಂಬೈ ಹಾಗೂ ಪುಣೆಯಲ್ಲಿ ಎಸ್ ಎಂಎಸ್ ಮೇಲೆ ವಿಧಿಸಿದ್ದ ನಿರ್ಬಂಧವನ್ನು ಹಿಂಪಡೆಯಲಾಗಿದೆ. ಉಳಿದ ರಾಜ್ಯಗಳಲ್ಲಿ ನಿರ್ಬಂಧ ಮುಂದುವರೆಯಲಿದೆ ಎಂದು ಗೃಹ ಸಚಿವಾಲಯ ಹೇಳಿದೆ.
ಕಿಡಿಗೇಡಿಗಳು ಎಸ್ಎಂಎಸ್ಗಳ ಮೂಲಕ ವದಂತಿಗಳನ್ನು ಹರಡಿದ ಹಿನ್ನೆಲೆಯಲ್ಲಿ ಬೆಂಗಳೂರು, ಪುಣೆ, ಹೈದರಾಬಾದ್ ಮತ್ತಿತರ ನಗರಗಳಿಂದ ಈಶಾನ್ಯ ರಾಜ್ಯಗಳ ಭಾರತೀಯರು ಭಯಗ್ರಸ್ತರಾಗಿ ಗುಳೆ ಹೋಗ ತೊಡಗಿದ್ದಾರೆಂದು ಪ್ರಧಾನಿ ಮನಮೋಹನ್ಸಿಂಗ್ ಹೇಳಿಕೆ ನೀಡಿದ ಬಳಿಕ ಈ ನಿಷೇಧವನ್ನು ಜಾರಿಗೊಳಿಸಲಾಗಿತ್ತು. ಕೇಂದ್ರ ಗೃಹ ಸಚಿವಾಲಯವು ಇಂದು ಹೇಳಿಕೆಯೊಂದನ್ನು ನೀಡಿ, ಸಗಟು ಎಸ್ಎಂಎಸ್ ಹಾಗೂ ಎಂಎಂಎಸ್ಗಳ ಮೇಲಿನ ನಿಷೇಧವನ್ನು ತಕ್ಷಣದಿಂದಲೇ ರದ್ದುಪಡಿಸಲಾಗಿದೆಯೆಂದು ತಿಳಿಸಿದೆ.
ಈಶಾನ್ಯ ಭಾರತದಲ್ಲಿ ಗಲಭೆಗೆ ಕಾರಣವಾಗಿರುವ ರಾಶಿಗಟ್ಟಲೆ ಎಸ್ ಎಂಎಸ್, ಎಂಎಂಎಸ್ ಗೆ ವಿಧಿಸಿದ್ದ ಕಡಿವಾಣವನ್ನು ಕೇಂದ್ರ ಸರ್ಕಾರ ಸಡಿಲಿಸಿದೆ. ದಿನಕ್ಕೆ 5 ಎಸ್ ಎಂಎಸ್ ಮಿತಿಯನ್ನು 20 ಎಸ್ ಎಂಎಸ್ ಕ್ಕೇರಿಸಲಾಗಿತ್ತು. ಸುಮಾರು 930 ಮಿಲಿಯನ್ ಗೂ ಅಧಿಕ ಗ್ರಾಹಕರು ಮೊಬೈಲ್ ಫೋನ್ ಬಳಕೆ ಮಾಡುತ್ತಿದ್ದಾರೆ. ದಿನಕ್ಕೆ 20 ಎಸ್ ಎಂಎಸ್ ಕಳಿಸಬಹುದಾದರೂ 25 KB ಗಿಂತ ಅಧಿಕ ತೂಕದ ಮಾಹಿತಿ ಒಳಗೊಂಡಿರಬಾರದು ಎಂಬ ನಿರ್ಬಂಧ ಕೂಡಾ ಹೇರಲಾಗಿತ್ತು.
ವದಂತಿಗಳನ್ನು ಹರಡುವ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪ್ರಧಾನಿ ಮನಮೋಹನ್ಸಿಂಗ್ ತಿಳಿಸಿದ್ದಾರೆ. ವದಂತಿಗಳನ್ನು ಹರಡುವವರು ದೇಶದ ಏಕತೆ ಹಾಗೂ ಸಮಗ್ರತೆಯನ್ನು ಮಾತ್ರವಲ್ಲ ಕೋಮು ಸೌಹಾರ್ದತೆಯನ್ನು ಪಣಕ್ಕಿಟ್ಟಿದ್ದಾರೆಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಭದ್ರತೆಗೆ ಧಕ್ಕೆ ತರುವ ಸಂದೇಶ ಹರಡಲು ವೇದಿಕೆಯಾಗಿ ಗಲಭೆ ಹಬ್ಬಲು ಕಾರಣವಾಗಿರುವ ಸಾಮಾಜಿಕ ಜಾಲ ತಾಣಗಳಾದ ಫೇಸ್ ಬುಕ್, ಟ್ವಿಟರ್ ಗಳನ್ನು ಕೆಲ ದಿನಗಳ ಮಟ್ಟಿಗೆ ನಿಷೇಧಿಸುವಂತೆ ಸಂಸದರು ಆಗ್ರಹಿಸಿದ್ದರು.
ಮೊಬೈಲ್ ಸಂದೇಶಗಳ ನಿಷೇಧದ ಮುಂದಿನ ಭಾಗವಾಗಿ ಸಾಮಾಜಿಕ ಜಾಲ ತಾಣಗಳಾದ ಫೇಸ್ ಬುಕ್ ಹಾಗೂ ಟ್ವಿಟರ್ ಗಳು ಸೇರಿದಂತೆ ಸುಮಾರು 250 ವೆಬ್ ಪುಟಗಳನ್ನು ಕೆಲ ದಿನಗಳ ಮಟ್ಟಿಗೆ ಸರ್ಕಾರ ನಿಷೇಧ ಹೇರಿದೆ.