ಬರಗೆಟ್ಟ ನಾಯಕರು ಅರ್ಜೆಂಟಾಗಿ ಅರ್ಜೆಂಟೈನಾಗೆ ಗುಳೆ
ಇದೇ ವಾರಾಂತ್ಯ ಬ್ಯೂನಸ್ ಐರಿಸ್ ಎಂಬ ಸುಂದರ ನಾಡಿಗೆ ಶಾಸಕರು ಹೊರಡುವುದು ಆಖೈರಾಗಿದೆ. ಇದರಿಂದ ಹಿರಿಯರ ಮಾತಿಗೆ, ನಾಡಿನ ದುರ್ಭರ ಪರಿಸ್ಥಿತಿಗೆ ಕರಗಿ ಕೊನೆ ಕ್ಷಣದಲ್ಲಿ ಪ್ರವಾಸ ಹೋಗದೆ ವಾಪಸಾಗುತ್ತಾರೆ ಎಂಬ ನಿರೀಕ್ಷೆ ಹುಸಿಯಾಗಿದೆ.
ವ್ಯಾಪಕ ಟೀಕೆಗಳ ಸುರಿಮಳೆಯ ನಡುವೆಯೇ 20 ಬರಗೆಟ್ಟ ಜನನಾಯಕರ ಮೊದಲ ತಂಡ ಇಂದು ಅರ್ಜೆಂಟಾಗಿ ಅರ್ಜೆಂಟೈನಾ ಮತ್ತಿತರ ದಕ್ಷಿಣ ಅಮೆರಿಕ ಸಂಸ್ಥಾನಗಳಿಗೆ ಗುಳೆ ಹೊರಡಲಿದ್ದಾರೆ. ಮತ್ತೂ ಗಮನಾರ್ಹ ಸಂಗತಿಯೆಂದರೆ ಸರಕಾರಿ ವೆಚ್ಚದಲ್ಲೇ ಇವರೆಲ್ಲ ವಿದೇಶಕ್ಕೆ ಹೊರಟಿದ್ದಾರೆ. ಸನ್ಮಾನ್ಯ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಇಂತಹ 100 ಶಾಸಕರ ಪ್ರವಾಸ ಕಡತಕ್ಕೆ ಸೈಲೆಂಟಾಗಿ ಸಹಿ ಹಾಕಿದ್ದಾರೆ.
ಕುತೂಹಲದ ಸಂಗತಿಯೆಂದರೆ ಶಾಸಕರು ಹೀಗೆ ವಿದೇಶಗಳಿಗೆ ಗುಳೆ ಹೋಗುವುದರ ವಿರುದ್ಧ ಹೈಕೋರ್ಟಿನಲ್ಲಿ ಅರ್ಜಿ ದಾಖಲಾಗಿದೆ. ಅದಿನ್ನೂ ವಿಚಾರಣೆಗೆ ಬರಬೇಕಾಗಿದೆ. ಆಗಲೇ ಶಾಸಕರು...ಅರ್ಜೆಂಟಾಗಿ ಅರ್ಜೆಂಟೈನಾಗೆ ಹೊರಟಿದ್ದಾರೆ.
ರಷ್ಯಾ, ಸ್ಕಾಂಡಿನೇವಿಯಾ ಮತ್ತು ದಕ್ಷಿಣ ಅಮೆರಿಕಾ ರಾಜ್ಯಗಳಿಗೆ ಸಾಮೂಹಿಕ ಅಧ್ಯಯನಕ್ಕಾಗಿ ಹೊರಟಿದ್ದೇವೆ ಎಂದು ಘನವೆತ್ತ ಪ್ರವಾಸಿ ಶಾಸಕರು ಹೇಳಿಕೊಂಡಿದ್ದಾರೆ. ಸರಿ, ಇದರಿಂದ ಸರಕಾರಕ್ಕೆ ತಗಲುತ್ತಿರುವ ವೆಚ್ಚ ಪ್ರತಿ ಪ್ರವಾಸಕ್ಕೆ ಆರೇಳು ಕೋಟಿ ರೂಪಾಯಿ.
'ಏನು, ನಾವು ಟೂರು ಹೋಗೊಲ್ಲಾ ಅಂದ್ರೆ ಬರ ನಿಂತುಹೋಗಿ ಎಲ್ಲಾ ಸರಿ ಹೋಗುತ್ತಾ? ಹಾಗೇನಾದರೂ ಆಗುತ್ತದೆ ಎಂಬ ಖಾತ್ರಿ ಇದ್ದರೆ ನಾನು ಖಂಡಿತ ಪ್ರವಾಸಕ್ಕೆ ಹೋಗೋದನ್ನು ನಿಲ್ಲಿಸುತ್ತೇನೆ' ಎಂದು ಕೈಯಲ್ಲಿ ವಿಮಾನದ ಟಿಕೆಟ್ ಇಟ್ಟುಕೊಂಡಿದ್ದ ಶಾಸಕ ಮಹಾಶಯರೊಬ್ಬರು ಪತ್ರಕರ್ತರ ಪ್ರಶ್ನೆಗೆ ಉದ್ದಟತನದಿಂದ ಉತ್ತರಿಸಿದ್ದಾರೆ.