ಬಿಎಸ್ ವೈ, ಕುಮಾರ್ 136 ಸೈಟು ಹಂಚಿಕೆ ಮೇಲೆ ಕಣ್ಣು

ಮುಖ್ಯಮಂತ್ರಿಗಳ ವಿವೇಚನಾ(ಜಿ) ಕೋಟಾದಡಿ 316 ನಿವೇಶನ ಪಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಹೈಕೋರ್ಟ್ ನ್ಯಾಯಮೂರ್ತಿಗಳು ಹಾಗೂ ನಿವೃತ್ತ ಮುಖ್ಯ ಕಾರ್ಯದರ್ಶಿಯೊಬ್ಬರ ನೇತೃತ್ವದ ಮೂವರು ಸದಸ್ಯರ ಸಮಿತಿ ರಚಿಸಿ ತನಿಖೆ ನಡೆಸುವಂತೆ ಹೈಕೋರ್ಟ್ ಆದೇಶಿಸಿದೆ.
ನ್ಯಾಯಮೂರ್ತಿ ಕೆ.ಎಲ್. ಮಂಜುನಾಥ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದ್ದು, ಎರಡು ವಾರಗಳೊಳಗಾಗಿ ಸಮಿತಿ ರಚಿಸಿ, ನಾಲ್ಕು ವಾರಗಳೊಳಗಾಗಿ ವರದಿ ನೀಡುವಂತೆ ನ್ಯಾಯಪೀಠ ಆದೇಶಿಸಿದೆ.
ಒಟ್ಟು 316 ಪ್ರಕರಣಗಳಿಗೆ ಸಂಬಂಧಿಸಿದಂತೆ ಬಿಡಿಎ ನಿಯಮಗಳು ಉಲ್ಲಂಘನೆಯಾಗಿದೆಯೇ ಇಲ್ಲವೆ ಎನ್ನುವ ಕುರಿತಂತೆ ಸಮಿತಿ ಪರಿಶೀಲನೆ ನಡೆಸಬೇಕು. ಪ್ರತಿಯೊಂದು ಪ್ರಕರಣವನ್ನೂ ಸಮಿತಿ ಪರಿಗಣಿಸಿ ವರದಿ ನೀಡಬೇಕೆಂದು ನ್ಯಾಯಪೀಠ ಆದೇಶಿಸಿದೆ.
ನಿವೇಶನ ಪಡೆದವರು ನಿಜಕ್ಕೂ ಅರ್ಹರಾಗಿದ್ದರೆ ಅವರ ನಿವೇಶನ ಉಳಿಯಲಿದೆ. ಇಲ್ಲವಾದಲ್ಲಿ ಅದು ರದ್ದಾಗಲಿದೆ ಎಂದು ನ್ಯಾಯಪೀಠ ಹೇಳಿದೆ.
ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ. ಕುಮಾರಸ್ವಾಮಿ ಹಾಗೂ ಬಿ.ಎಸ್. ಯಡಿಯೂರಪ್ಪ ಅವರ ಅವಧಿಯಲ್ಲಿ ನಿಯಮ ಬಾಹಿರವಾಗಿ ನಿವೇಚನಾ ಕೋಟಾದಡಿ ನಿವೇಶನ ಹಂಚಿಕೆಯಾಗಿದೆ ಎಂದು ವಕೀಲ ವಾಸುದೇವ್ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಪೀಠ ವಿಚಾರಣೆಗೆ ಅಂಗೀಕರಿಸಿ ಈ ಆದೇಶ ನೀಡಿದೆ.
ಕಳೆದ 2006 ರಿಂದ 2009ರ ಅವಧಿಯಲ್ಲಿ ಮಂಜೂರಾದ ನಿವೇಶನಗಳ ಕುರಿತಂತೆ ಸಮಿತಿ ಪರಿಶೀಲನೆ ನಡೆಸಲಿದೆ. ಕುಮಾರಸ್ವಾಮಿ ಕಾಲದಲ್ಲಿ 250 ಹಾಗೂ ಯಡಿಯೂರಪ್ಪ ಅವಧಿಯಲ್ಲಿ 66 ನಿವೇಶನಗಳು ಹಂಚಿಕೆಯಾಗಿತ್ತು.
ಅರ್ಜಿದಾರರ ಪ್ರಕಾರ ಈ ಎಲ್ಲಾ ಹಂಚಿಕೆಯೂ ಕಾನೂನು ಬಾಹಿರವಾಗಿದೆ. ಬಿಡಿಎ ನಿಯಮಗಳಿಗೆ ವಿರುದ್ಧವಾಗಿವೆ. ಅರ್ಜಿದಾರರಿಂದ ಅರ್ಜಿ ಸ್ವೀಕರಿಸದೇ ನಿವೇಶನ ಹಂಚಿಕೆ ಮಾಡಲಾಗಿದೆ. ಸಹಸ್ರಾರು ಮಂದಿ ನಿವೇಶನಕ್ಕಾಗಿ ಅರ್ಜಿ ಹಾಕಿ ಕಾಯುತ್ತಿರುವಾಗ ಅರ್ಜಿ ಹಾಕದವರಿಗೆ ನಿವೇಶನ ಹಂಚಿರುವುದು ಸರಿಯಲ್ಲ ಎಂದು ನ್ಯಾಯಪೀಠದ ಗಮನ ಸೆಳೆದಿದ್ದಾರೆ.
'ಬಿಡಿಎ ಬಿಡಿ ನಿವೇಶನಗಳನ್ನು 'ಜಿ' ಕೋಟಾ ಅಡಿಯಲ್ಲಿ ಹಂಚಿಕೆ ಮಾಡುವ ಅಧಿಕಾರ ಸರ್ಕಾರಕ್ಕೆ ಇಲ್ಲ ಎಂದು ಹೈಕೋರ್ಟ್ 2010ರ ಡಿಸೆಂಬರ್ 15ರಂದು ಆದೇಶ ಹೊರಡಿಸಿತ್ತು. ಆದರೆ, ಅದಕ್ಕೂ ಹಿಂದೆಯೇ ನಿವೇಶನ ಹಂಚಿಕೆಗೆ ಸರ್ಕಾರ ಹೊರಡಿಸಿದ್ದ ಆದೇಶಗಳು ಅನುಷ್ಠಾನಕ್ಕೆ ಬಾಕಿ ಇದ್ದವು. ಇಂತಹ 48 ಆದೇಶಗಳ ಅನುಷ್ಠಾನ ಪ್ರಕ್ರಿಯೆ ಪ್ರಗತಿಯಲ್ಲಿತ್ತು.
ಈವರೆಗೂ ಸರ್ಕಾರ ಹೊರಡಿಸಿರುವ ಆದೇಶಗಳಲ್ಲಿ 325 ಪ್ರಕರಣಗಳಲ್ಲಿ ಇನ್ನೂ ಫಲಾನುಭವಿಗಳಿಗೆ ನಿವೇಶನ ನೀಡಿಲ್ಲ. ಕಾನೂನು ಇಲಾಖೆಯ ಅಭಿಪ್ರಾಯದಂತೆ ನಿವೇಶನ ಹಂಚಿಕೆ ಮಾಡದಿರುವ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ ಎಂದು ಸ್ಪಷ್ಟಪಡಿಸಿದರು. ಕಳೆದ 10 ವರ್ಷಗಳಲ್ಲಿ 867 ಸೈಟುಗಳನ್ನು ವಿತರಿಸಲಾಗಿದೆ.
ಇನ್ನೊಂದು ದಾಖಲೆ ಪ್ರಕಾರ ಕಳೆದ 14 ವರ್ಷಗಳಲ್ಲಿ ಸುಮಾರು 1,128 ನಿವೇಶನಗಳನ್ನು ಹಂಚಲಾಗಿದ್ದು, ಎಂಎಲ್ ಎ, ಸಂಸದರು(ಹಾಲಿ ಹಾಗೂ ಮಾಜಿ), ಮಾಜಿ ಸಚಿವರು, ನಟ/ನಟಿಯರು, ಕ್ರೀಡಾಪಟುಗಳು, ಸ್ವಾತಂತ್ರ್ಯ ಹೋರಾಟಗಾರರು, ಸಿಎಂ ಕಚೇರಿಯ ಸಿಬ್ಬಂದಿ ಸೇರಿದಂತೆ ಹಲವರಿಗೆ ಜಿ ಕೆಟಗೆರಿ ನಿವೇಶನಗಳನ್ನು ಹಂಚಲಾಗಿದೆ.
ನಿವೇಶನ ಪಡೆದ ಫಲಾನುಭವಿಗಳು ನಿವೇಶನ ಪಡೆದ ದಿನದಿಂದ 3 ವರ್ಷದೊಳಗೆ ಅಲ್ಲಿ ಮನೆ ಕಟ್ಟಲೇಬೇಕು ಎಂಬ ನಿಯಮವಿದ್ದು, ಈ ನಿವೇಶನವನ್ನು ಪರಭಾರೆ ಮಾಡುವಂತಿಲ್ಲ ಎಂದು ಬಿಡಿಎ ಕಾಯ್ದೆ 1997 ಹೇಳುತ್ತದೆ.












Click it and Unblock the Notifications