ಮೈಸೂರಿನಲ್ಲಿ ಹಳೆಯ ಕಟ್ಟಡ ಕುಸಿತ : ನಾಲ್ವರ ಸಾವು
ಕಳೆದ ಕೆಲ ದಿನಗಳಿಂದ ಮೈಸೂರು ಮತ್ತು ಸುತ್ತಮುತ್ತ ಭಾರೀ ಮಳೆಯಾಗುತ್ತಿದ್ದು, ನೂರು ವರ್ಷದಷ್ಟು ಹಳೆಯದಾದ ಲ್ಯಾನ್ಸ್ಡೋನ್ ಸಮುಚ್ಚಯದ ಒಂದು ಅಂಗಡಿಯ ಮೇಲ್ಛಾವಣಿ ಸಂಜೆ 6.15ರ ಸುಮಾರಿಗೆ ಕುಸಿದಿದೆ. ಕಟ್ಟಡದಲ್ಲಿ ಇದ್ದ ಲತಾ ಎಂಟರ್ಪ್ರೈಸಸ್ ಡಿಟಿಪಿ ಕೇಂದ್ರದ ಮಾಲಿಕ ಪ್ರಕಾಶ್ (40) ಮತ್ತು ಮೈಸೂರಿನ ಕೆಸರೆ ನಿವಾಸಿಯಾಗಿರುವ ಅನ್ನಪೂರ್ಣ(25), ಪ್ರಕಾಶ್ ಅವರ ತಮ್ಮ ಆನಂದ್(35) ಮತ್ತು ಗ್ರಾಹಕ ಲೋಕೇಶ್(38) ಎಂಬುವವರು ಮೃತರಾಗಿದ್ದಾರೆ.
ಅಗ್ನಿಶಾಮಕ ದಳ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಕಟ್ಟಡದ ಅಡಿಯಲ್ಲಿ ಸಿಲುಕಿರುವವರನ್ನು ಪಾರುಮಾಡುವ ಯತ್ನ ನಡೆಸಿದ್ದಾರೆ. ಸಾರ್ವಜನಿಕರು ಕೂಡ ಅಗ್ನಿಶಾಮಕ ದಳಕ್ಕೆ ಸಹಾಯ ಮಾಡಿದರು. ಮಳೆಯ ನಡುವೆ ಅವರನ್ನು ರಕ್ಷಿಸುವ ಕೆಲಸ ಭರದಿಂದ ಸಾಗಿದೆ. ಸ್ಥಳೀಯ ಶಾಸಕ ಮತ್ತು ಮೈಸೂರು ಉಸ್ತುವಾರಿ ಸಚಿವ ಎ. ರಾಮದಾಸ್ ಅವರು ಸ್ಥಳಕ್ಕೆ ಧಾವಿಸಿದ್ದಾರೆ. ರಾಮದಾಸ್ ಅವರು ಮೃತರ ಕುಟುಂಬಕ್ಕೆ ತಲಾ 1 ಲಕ್ಷ ರು. ಪರಿಹಾರ ಘೋಷಿಸಿದ್ದಾರೆ.
ಸಯ್ಯಾಜಿ ರಸ್ತೆಯಲ್ಲಿರುವ ಈ ಪುರಾತನ ಕಟ್ಟಡವನ್ನು ಬ್ರಿಟಿಷರ ಆಳ್ವಿಕೆಯಲ್ಲಿ ವೈಸ್ ರಾಯ್ ಆಗಿದ್ದ ಲ್ಯಾನ್ಸ್ಡೋನ್ ನೆನಪಿಗಾಗಿ ಕಟ್ಟಲಾಗಿತ್ತು. ಹಳೆಯದಾಗಿದ್ದರಿಂದ ಕಟ್ಟಡ ಶಿಥಿಲವಾಗಿತ್ತು. ಇದನ್ನು ನವೀಕರಿಸಬೇಕೆಂಬ ಪ್ರಸ್ತಾವನೆಯನ್ನು ಇಟ್ಟಿತ್ತು ಎನ್ನಲಾಗಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಮತ್ತು ಕಟ್ಟಡದಲ್ಲಿರುವ ಕೆಲ ಅಂಗಡಿಗಳ ಮಾಲಿಕರ ಪ್ರತಿರೋಧದಿಂದಾಗಿ ಇದು ಸಾಧ್ಯವಾಗಿರಲಿಲ್ಲ.
ಬೆಂಗಳೂರಿನಲ್ಲಿಯೂ ಮಳೆ : ಬೆಂಗಳೂರಿನಲ್ಲಿ ಕೂಡ ಸಂಜೆಯ ವೇಳೆ ಕಳೆದೆರಡು ದಿನಗಳಿಂದ ಧಾರಾಕಾರವಾಗಿ ಮಳೆ ಬೀಳುತ್ತಿದ್ದು, ಕಷ್ಟ ಸುಖಗಳನ್ನು ಒಟ್ಟಿಗೇ ಎಳೆದುಕೊಂಡು ಬಂದಿದೆ. ಮಳೆ ಬರುತ್ತಿರುವುದು ಒಂದೆಡೆ ಸಂತಸ ತಂದಿದ್ದರೆ, ಸಣ್ಣ ಮಳೆಗೇ ತುಂಬಿಹರಿಯುವ ಚರಂಡಿಗಳು, ಅರ್ಧದಲ್ಲೇ ನಿಂತಿರುವ ರಸ್ತೆ ಕಾಮಗಾರಿಗಳು, ವಿಪರೀತ ವಾಹನ ದಟ್ಟಣೆ ಜನರ ಬದುಕನ್ನು ಅಸಹನೀಯ ಮಾಡಿವೆ.
ಇದೆಲ್ಲದರ ಮೇಲೆ ಕಲಸವಿಟ್ಟಂತೆ ಕಸ ವಿಲೇವಾರಿಯಾಗದಿರುವುದು ಕೆಲ ಬಡಾವಣೆಗಳಲ್ಲಿ ಜನರ ಬದುಕನ್ನು ನರಕ ಮಾಡಿದೆ. ಮಳೆ ಬಿದ್ದು, ಮೊದಲೇ ರಸ್ತೆಬದಿಯಲ್ಲಿ ಚೆಲ್ಲಾಪಿಲ್ಲಿಯಾಗಿದ್ದ ಕಸವೆಲ್ಲ ರಸ್ತೆ ತುಂಬ ಹರಡಿಕೊಳ್ಳುತ್ತಿದೆ. ನಾನೇ ಸ್ವತಃ ಪೊರಕೆ ಹಿಡಿದು ನಿಲ್ಲಲೇ ಎಂದು ರಾಜ್ಯಪಾಲರಾದ ಹಂಸರಾಜ್ ಭಾರದ್ವಾಜ್ ಅವರು ಆಕ್ರೋಶ ವ್ಯಕ್ತಪಡಿಸಿದ್ದರೂ, ಪರಿಸ್ಥಿತಿ ಮಾತ್ರ ಹಾಗೆಯೇ ಇದೆ. ಭಾರೀ ಸುರಿಯುತ್ತಿರುವ ಮಳೆಗೆ ಶ್ರೀರಾಂಪುರದಲ್ಲಿರುವ ಪೆಟ್ಟಿಗೆ ಅಂಡಗಿಯೊಂದು ಬಿದ್ದು ರಾಜಾ ಕಾಲುವೆಯಲ್ಲಿ ಕೊಚ್ಚಿಹೋಗಿದೆ.