ಸಂಪುಟ ವಿಸ್ತರಣೆ, ಈಶ್ವರಪ್ಪ ಸ್ಥಾನ ಪಲ್ಲಟ ಗ್ಯಾರಂಟಿ
ಉಪ ಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ ಸೇರಿದಂತೆ ಪ್ರಮುಖ ಸಚಿವರುಗಳ ಖಾತೆ ಬದಲಾವಣೆಯಾಗುವ ಸಾಧ್ಯತೆ ನಿಚ್ಚಳವಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಸಣ್ಣ ನೀರಾವರಿ, ಪೌರಾಡಳಿತ ಇಲಾಖೆ ಸೇರಿದಂತೆ ಕೆಲವು ಸಚಿವರ ಖಾತೆಗಳು ಬದಲಾವಣೆಯಾಗಲಿದೆ ಎಂದು ಸುದ್ದಿ ಬಂದಿದೆ.
ಪಕ್ಷದ ಸಂವಿಧಾನದಂತೆ ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ ಎಂಬ ನಿಯಮದಂತೆ ಕೆ ಎಸ್ ಈಶ್ವರಪ್ಪ ಅವರು ತಮ್ಮ ಬಳಿಯಿರುವ ಗ್ರಾಮೀಣಾಭಿವದ್ದಿ ಮತ್ತು ಪಂಚಾಯತ್ರಾಜ್ ಖಾತೆ ಬಿಟ್ಟು ಕೊಡಬೇಕಾಗುತ್ತದೆ . ಜೊತೆಗೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಆರಂಭವಾಗಲಿದೆ.
ಉನ್ನತ ಮೂಲಗಳ ಪ್ರಕಾರ ಗೃಹ ಹಾಗೂ ಸಾರಿಗೆ ಖಾತೆ ಉಪಮುಖ್ಯಮಂತ್ರಿಗಳು ಆಗಿರುವ ಅಶೋಕ್ ಬಳಿ ಉಳಿಯಲಿವೆ. ಮತ್ತೋರ್ವ ಉಪಮುಖ್ಯಮಂತ್ರಿ ಈಶ್ವರಪ್ಪ ಬಳಿಯಿರುವ ಕಂದಾಯ ಇಲಾಖೆ ಹಾಗೇ ಉಳಿಯಲಿದ್ದು ಗ್ರಾಮೀಣಾಭಿವೃದ್ದಿ ಇಲಾಖೆ ಬೇರೆ ಸಚಿವರಿಗೆ ವರ್ಗವಾಗಲಿದೆ.
ಸಚಿವರಾದ ಬಾಲಚಂದ್ರ ಜಾರಕಿಹೋಳಿ, ಗೋವಿಂದಕಾರಜೋಳ, ನಾರಾಯಣಸ್ವಾಮಿ, ಸುರೇಶ್ ಕುಮಾರ್, ಸಿ.ಎಂ.ಉದಾಸಿ, ಬಸವರಾಜ್ ಬೊಮ್ಮಾಯಿ ಸೇರಿದಂತೆ ಹಲವು ಸಚಿವರ ಖಾತೆಗಳು ಬದಲಾವಣೆಯಾಗಲಿವೆ.
ಸಚಿವರ ಖಾತೆಗಳ ಮರುಹಂಚಿಕೆಗೆ ಪಕ್ಷದ ವರಿಷ್ಟರು ಹಾಗೂ ಸಂಘ ಪರಿವಾರದವರು ಅನುಮತಿ ನೀಡಿರುವುದರಿಂದ ಒಂದೆರಡು ದಿನಗಳಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ
ಜಾತಿ ರಾಜಕಾರಣ ಇದೆ : ಕಳೆದ ಚುನಾವಣೆಯಲ್ಲಿ 224 ವಿಧಾನಸಭಾ ಕ್ಷೇತ್ರಗಳಲ್ಲೂ ಗೆಲ್ಲುವ ಸಾಮರ್ಥ್ಯ ಇಲ್ಲದ ಕಾರಣ ಹಣ-ಜಾತಿ ನೋಡಿ ಟಿಕೆಟ್ ಹಂಚಿಕೆ ಮಾಡಲಾಯಿತು. ಇದರಿಂದ ಪಕ್ಷದಲ್ಲಿ ಸಾಕಷ್ಟು ಗೊಂದಲಗಳೂ ಆಗಿದೆ ನಿಜ ಆದರೆ ಅದು ಆ ಕ್ಷಣಕ್ಕೆ ಅನಿವಾರ್ಯವಾಗಿತ್ತು.
ಅದರೆ, ನಂತರ ನಾವು ಎಚ್ಚೆತ್ತುಕೊಂಡಿದ್ದೇವೆ. ಮುಂದಿನ ಚುನಾವಣೆಯಲ್ಲಿ ಪಕ್ಷ ನಿಷ್ಠರಿಗೆ ಮಾತ್ರ ಟಿಕೆಟ್ ನೀಡಲಾಗುವುದು. 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಲಿದ್ದು ಪುನ: ಅಧಿಕಾರಕ್ಕೆ ಮರಳಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವ ಕನಸು ಕನಸಾಗೆ ಉಳಿಯಲಿದೆ. ಏಕೆಂದರೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಯ. ಹೀಗಾಗಿ ಅವರು ಪ್ರತಿಪಕ್ಷ ನಾಯಕನ ಸ್ಥಾನ ಉಳಿಸಿಕೊಳ್ಳಲು ಪ್ರಯತ್ನಿಸಲಿ ಎಂದು ಈಶ್ವರಪ್ಪ ಸಲಹೆ ನೀಡಿದ್ದಾರೆ.