ಖಾಕಿ ಚಡ್ಡಿಗಳನ್ನು ಒದ್ದು ಹೊರಗಾಕಿ : ಕುಮಾರಸ್ವಾಮಿ
ಈಶಾನ್ಯ ರಾಜ್ಯದವರು ಬೆಂಗಳೂರು ಬಿಟ್ಟು ಹೊರಟಿದ್ದಾಗ ಇವರನ್ನು ತಡೆಯಲು ಖಾಕಿ ಚಡ್ಡಿಗಳು ಯಾರು? ಸರಕಾರ ಇವರನ್ನು ರಕ್ಷಿಸಲು ಸಂಘಪರಿವಾರಕ್ಕೆ ಅಧಿಕೃತ ಅನುಮತಿ ನೀಡಿದೆಯೇ? ಗೃಹ ಮಂತ್ರಿ ಆರ್ ಅಶೋಕ್ ಆ ಹುದ್ದೆಗೆ ನಾಲಾಯಕ್ ಎಂದು ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
ಮಂಗಳೂರು ಹೋಂಸ್ಟೇ ಪ್ರಕರಣ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಖಾಕಿ ಚಡ್ಡಿಗಳು ತಾವೇ ಕಾನೂನು ರಕ್ಷಕರಂತೆ ವರ್ತಿಸುತ್ತಿದ್ದಾರೆ. ಇವರಿಗೆ ಈ ಅಧಿಕಾರ ಕೊಟ್ಟವರಾರು? ರಾಜ್ಯದಲ್ಲಿ ಗೃಹ ಸಚಿವಾಲಯ ಸಂಪೂರ್ಣ ಸತ್ತು ಹೋಗಿದೆ ಎಂದು ಕುಮಾರಸ್ವಾಮಿ ಟೀಕೆ ಮಾಡಿದ್ದಾರೆ.
ತುಮಕೂರಿನಲ್ಲಿ ಬುಧವಾರ (ಆ 22) ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಕುಮಾರಸ್ವಾಮಿ, ಯಡಿಯೂರಪ್ಪನವರು ಬರ ಸಂಚಾರಕ್ಕೆ ಹೊರಟಿದ್ದಾರೆ. ಅವರಿಗೆ ಒಳ್ಳೆದಾಗಲಿ, ಅವರಿಗೆ ತಡವಾಗಿಯಾದರೂ ಜ್ಞಾನೋದಯವಾಗಿದೆ. ಒಂದು ವರ್ಷದಿಂದ ರಾಜ್ಯದ ಜನ ಮಳೆ, ಬೆಳೆಯಿಲ್ಲದೆ ತತ್ತರಿಸಿಹೋಗಿದ್ದಾರೆ.
ಆವಾಗ ಇರದ ರೈತರ ಪರ ಕಾಳಜಿ ಚುನಾವಣೆ ಹತ್ತಿರ ಬರುತ್ತಿರುವ ಈ ಸಂದರ್ಭದಲ್ಲಿ ಯಡಿಯೂರಪ್ಪ ಅವರಿಗೆ ಕಾಣುತ್ತಿದೆ. ಹಿಂದೆ ಮಾಡಿದ ತಪ್ಪುಗಳಿಗೆ ಪರಿಹಾರವಾಗಿ ಯಡಿಯೂರಪ್ಪ ಬರಪ್ರವಾಸಕ್ಕೆ ಹೊರಟಿದ್ದಾರೆ ಎಂದು ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.
ಬಿಜೆಪಿ ಸರಕಾರ ಮೂರು ತಂಡವಾಗಿ ಬರಪ್ರವಾಸ ಮಾಡುತ್ತಿದೆ, ಅತ್ತ ಕೇಂದ್ರ ಸರಕಾರ ನಾಲ್ಕು ಬಾರಿ ಅಧಿಕಾರಿಗಳ ತಂಡವನ್ನು ಕಳುಹಿಸಿದೆ. ಆದರೆ ಬರದಿಂದ ತತ್ತರಿಸಿರುವ ರೈತರಿಗೆ ಏನಾದರೂ ಪ್ರಯೋಜನವಾಗಿದೆಯೇ. ಎರಡೂ ರಾಷ್ಟ್ರೀಯ ಪಕ್ಷಗಳು ಬಡ ರೈತರ ಸಂಕಷ್ಟದ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ ಎಂದು ಕುಮಾರಸ್ವಾಮಿ ಬೇಸರ ವ್ಯಕ್ತ ಪಡಿಸಿದ್ದಾರೆ.
ನಾಥೂರಾಮ್ ಘೋಡ್ಸೆ ಮತ್ತು RSS ಸಂಘಟನೆಯನ್ನು ಭಯೋತ್ಪಾದಕರು ಎಂದು ಕೆಲ ದಿನಗಳ ಕೆಳಗೆ ಸಂಭೋದಿಸಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ ಕೆ ಹರಿಪ್ರಸಾದ್ ವಿರುದ್ದ ನಮ್ಮ ಓದುಗರು ವಾಮಾಗೋಚರವಾಗಿ ನಿಂದಿಸಿ ಕಾಮೆಂಟಿನ ಪ್ರವಾಹ ಹರಿಸಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದಾಗಿದೆ.