ರಾಮದೇವರ ಬೆಟ್ಟ 15 ರಣಹದ್ದುಗಳ ಅಭಯಾರಣ್ಯ
ಬೆಂಗಳೂರು, ಆ.21: ಲಂಚಕ್ಕಾಗಿ ಕೈಯೊಡ್ಡಿ ರಣಹದ್ದುಗಳಂತೆ ಜನಸಾಮಾನ್ಯರ ಮೇಲೆ ಎರಗುವ ಭ್ರಷ್ಟರ ಸಂತತಿ ಸರಕಾರದಲ್ಲಿ ಹೆಚ್ಚುತ್ತಿರುವಾಗ ನಿಜವಾದ ರಣಹದ್ದುಗಳು ವಿನಾಶದ ಅಂಚು ತಲುಪಿವೆ. ಸಮಾಧಾನದ ಸಂಗತಿಯೆಂದರೆ ಮನುಷ್ಯನಿಗೆ ನಿರುಪದ್ರವಿಯಾಗಿರುವ ಇಂತಹ ರಣಹದ್ದುಗಳ ಸಂರಕ್ಷಣೆಗಾಗಿ ರಾಜ್ಯ ಸರಕಾರವು ತಡವಾಗಿಯಾದರೂ ಮಹತ್ವದ ಕ್ರಮ ಕೈಗೊಂಡಿದೆ.

ಅಪರೂಪವಾಗುತ್ತಿರುವ ರಣಹದ್ದುಗಳನ್ನು ಉಳಿಸಿಕೊಳ್ಳಬೇಕು ಎಂದು ನಿರ್ಧರಿಸಿರುವ ರಾಜ್ಯ ಸರಕಾರವು ರಾಮನಗರ ಸಮೀಪವಿರುವ ರಾಮದೇವರ ಬೆಟ್ಟವನ್ನು 'ರಣಹದ್ದು ಸಂರಕ್ಷಿತ ಪ್ರದೇಶ' ಎಂದು ಘೋಷಿಸಿದೆ. ಪ್ರಸ್ತುತ, ಈ ರಾಮದೇವರ ಬೆಟ್ಟದಲ್ಲಿ ಕೇವಲ 15 ರಣಹದ್ದುಗಳಿವೆ.
ಹೆಬ್ಬಾಳದ ಪಾರ್ಸಿಗಳ ರುದ್ರಭೂಮಿಯಲ್ಲಿ: ಕುತೂಹಲದ ಸಂಗತಿಯೆಂದರೆ ಈ ರಣಹದ್ದುಗಳು ರಾಮದೇವರ ಬೆಟ್ಟ ಬಿಟ್ಟರೆ ಹೆಬ್ಬಾಳದಲ್ಲಿರುವ ಪಾರ್ಸಿಗಳ ರುದ್ರಭೂಮಿಯ (Tower of Silence) ಬಳಿಯಿವೆ. ಆದರೆ ಅಲ್ಲಿ ಹೆಬ್ಬಾಳ ಫ್ಲೈ ಓವರ್ ಬಂದ ಮೇಲೆ ಶಬ್ದಮಾಲಿನ್ಯ ಹೆಚ್ಚಾಗಿ ಹೆಣಗಳನ್ನು ತಿನ್ನಲು ಬರುವ ರಣಹದ್ದುಗಳ ಸಂಖ್ಯೆ ಕಡಿಮೆಯಾಗಿದೆ. ಇನ್ನು, ಕರ್ನಾಟಕ ಬಿಟ್ಟರೆ ದೂದರ ಹಿಮಾಚಲ ಪ್ರದೇಶದಲ್ಲಿ ಈ ರಣಹದ್ದುಗಳು ಕಣ್ಣಿಗೆ ಬೀಳುತ್ತವೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಕಲಂ 26-ಎ ಅನುಸಾರ ರಾಜ್ಯ ಸರಕಾರವು ಕಳೆದ ಜನವರಿ 31ರಂದು ಅಧಿಸೂಚನೆ ಹೊರಡಿಸಿದ್ದು, ಅದರಂತೆ ರಾಮದೇವರ ಬೆಟ್ಟ ಸೇರಿದಂತೆ ಸುತ್ತಮುತ್ತಲ 3.4 ಚದರ ಕಿ.ಮೀ. ಪ್ರದೇಶವನ್ನು 'ರಣಹದ್ದು ಅಭಯಾರಣ್ಯ' ಎಂದು ಘೋಷಿಸಿದೆ. ಇದು ದೇಶದ ಮೊದಲ ರಣಹದ್ದು ಅಭಯಾರಣ್ಯ.
'ಈ ಪ್ರದೇಶದಲ್ಲಿರುವ ಹೂ ಸಸ್ಯಗಳು, ಪ್ರಾಣಿ ಸಂಕುಲ, ವಿಶಿಷ್ಟ ವನ್ಯಜೀವಿ ಪ್ರಭೇದಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಇಲ್ಲಿರುವ ವನ್ಯಜೀವಿ ಸಂಕುಲವನ್ನು ಸಂರಕ್ಷಿಸುವ ಮತ್ತು ಅಭಿವೃದ್ಧಿಪಡಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ' ಎಂದು ಅರಣ್ಯ ಮತ್ತು ಪರಿಸರ ಇಲಾಖೆಯ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಪ್ರಸ್ತಾವನೆ 2005ರಲ್ಲಿಯೇ ಸಿದ್ಧವಿತ್ತು: ರಾಮದೇವರ ಬೆಟ್ಟವನ್ನು ರಣಹದ್ದುಗಳ ಅಭಯಾರಣ್ಯ (vulture sanctuary) ಎಂದು ಘೋಷಿಸುವ ಪ್ರಸ್ತಾವ 2005ರಲ್ಲಿಯೇ ಸಿದ್ಧವಾಗಿತ್ತು. ಸ್ಥಳೀಯರೂ ಇದನ್ನು ಬೆಂಬಲಿಸಿದ್ದರು. ಹಿಂದೆ ಈ ಪ್ರದೇಶ ಮೀಸಲು ಅರಣ್ಯವಾಗಿತ್ತು.
ಈಗ ಅಭಯಾರಣ್ಯ ಎಂದು ಘೋಷಿಸಿರುವುದರಿಂದ ಅರಣ್ಯ ಇಲಾಖೆ ಈ ಪ್ರದೇಶದ ನಿರ್ವಹಣೆಗೆ ಪ್ರತ್ಯೇಕ ಯೋಜನೆಯನ್ನೇ ರೂಪಿಸ ಬೇಕಾಗುತ್ತದೆ. ಹೆಚ್ಚಿನ ಭದ್ರತೆಯನ್ನೂ ಒದಗಿಸಬೇಕು. ಅಲ್ಲಿರುವ ಪ್ರಾಣಿಗಳು ಮತ್ತು ಪಕ್ಷಿಗಳಿಗೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಪರಿಚ್ಛೇದ 1ರ ಅಡಿಯಲ್ಲಿ ರಕ್ಷಣೆ ಒದಗಿಸಬೇಕಾಗುತ್ತದೆ.
ಇತಿಹಾಸ ಪ್ರಸಿದ್ಧ ರಾಮದೇವರ ಬೆಟ್ಟದ ವೈಶಿಷ್ಯ:
ವಿರಳವಾಗಿರುವ ರಣಹದ್ದುಗಳನ್ನು ಉಳಿಸಿಕೊಳ್ಳಬೇಕೆಂಬ ರಾಜ್ಯ ಸರಕಾರದ ಮಹತ್ವದ ನಿರ್ಧಾರಕ್ಕೆ ರಾಮನಗರ ಸಮೀಪವಿರುವ ರಾಮದೇವರ ಬೆಟ್ಟ ಅಥವಾ ರಮಣಗಿರಿ ಬೆಟ್ಟ ಆಶ್ರಯ ನೀಡಿದೆ. ಈ ಸಂದರ್ಭದಲ್ಲಿ ರಾಮನಗರ ಬೆಟ್ಟ ಪ್ರದೇಶದ ಏರಿಳಿತಗಳತ್ತ ಒಂದು ಪುಟ್ಟ ಪಯಣ ಇಲ್ಲಿದೆ.
ರಾಮನಗರವು ರಾಜಧಾನಿ ಬೆಂಗಳೂರಿನಿಂದ 48 ಕಿಮೀ ದೂರದಲ್ಲಿರುವ ಜಿಲ್ಲಾ ಕೇಂದ್ರ. ಇದು ಸಮುದ್ರ ಮಟ್ಟದಿಂದ 3066 ಅಡಿ ಎತ್ತರದಲ್ಲಿದೆ. ಇಲ್ಲಿರುವ ಬೆಟ್ಟ ಪ್ರದೇಶಗಳೆಂದರೆ ಶಿವರಾಮಗಿರಿ, ಯತಿರಾಜಗಿರಿ, ಸೋಮಗಿರಿ, ಕೃಷ್ಣಗಿರಿ, ರೇವಣ್ಣ ಸಿದ್ದೇಶ್ವರ ಬೆಟ್ಟ, ಜಲ ಸಿದ್ದೇಶ್ವರ ಬೆಟ್ಟ, ಸಿಡಿಲುಕಲ್ಲು ಬೆಟ್ಟ, ಕಾಕಾಸುರ ಬೆಟ್ಟ, ಕೊಪ್ಪತಗಿರಿ ಇನ್ನೂ ಅನೇಕ ಸಣ್ಣಪುಟ್ಟ ಬೆಟ್ಟಗಳಿವೆ.
ರಾಮನಗರ ಬಳಿ ಶೋಲೆ ಎಂಬ ಬಾಲಿವುಡ್ ಸಿನಿಮಾದ ಚರಿತ್ರಾರ್ಹ ಶೂಟಿಂಗ್ ಸ್ಪಾಟ್ ಸಹ ಇದೆ. ಇನ್ನು ಅರ್ಕಾವತಿ ನದಿ ತಟದಲ್ಲಿ ಅರ್ಕೇಶ್ವರ ದೇವಸ್ಥಾನವಿದೆ. ವಿಜಯನಗರ ಶೈಲಿ ಕಟ್ಟಲಾಗಿದ್ದ ಈ ದೇವಾಲಯವನ್ನು ಮೂರನೇ ಕೃಷ್ಣರಾಜ ಒಡೆಯರ್ ಅವರು ಪುನರುಜ್ಜೀವನಗೊಳಿಸಿದ್ದರು. ವೇಣುಗೋಪಾಲ ಸ್ವಾಮಿ ಬೆಟ್ಟ ಮತ್ತು ಪ್ರಸನ್ನ ಅಂಬಾದೇವಿ ಪುಣ್ಯಕ್ಷೇತ್ರಗಳೂ ಇಲ್ಲಿವೆ. ಫಾಲ್ಗುಣ ಶುದ್ಧ ಹುಣ್ಣಿಮೆಯಂದು ಪ್ರತಿ ವರ್ಷ ಇಲ್ಲಿ ಜಾತ್ರೆ ನಡೆಯುತ್ತದೆ.












Click it and Unblock the Notifications