ಗುಳೆ, ವಲಸೆ, ನಿರಾಶ್ರಿತರ ಸಂಖ್ಯೆ ಅಸ್ಸಾಂಗಿಂತ ನಮ್ಮೂರೇ ಮೇಲು
ಬೆಂಗಳೂರು/ಗುವಾಹಟಿ, ಆ.18: ಕಳೆದ ಮೂರ್ನಾಲ್ಕು ದಿನಗಳಿಂದ ಬೆಂಗಳೂರಿನಿಂದ ಅಸ್ಸಾಂ ಸೇರಿದಂತೆ ಪೂರ್ವಾಂಚಲ ರಾಜ್ಯಗಳಿಗೆ ಮಹಾವಲಸೆ ನಿರಂತರವಾಗಿ ನಡೆದಿದೆ. ಕರ್ನಾಟಕದಲ್ಲಿ ಈ ಹಿಂದೆ ಕೂಡಾ ಈ ರೀತಿ ಗುಳೆ ಎದ್ದಿದ್ದು ಇದೆಯಾದರೂ ಈ ಬಾರಿ ಸುಮಾರು 30 ಸಾವಿರಕ್ಕೂ ಅಧಿಕ ಜನ ಪ್ರಯಾಣ ಬೆಳೆಸಿರುವುದು ಹೊಸ ದಾಖಲೆ ನಿರ್ಮಿಸಿದೆ.
ಈಶಾನ್ಯ ರಾಜ್ಯಗಳ ಜನರ ಮೇಲೆ ಹೆಚ್ಚುತ್ತಿರುವ ಹಲ್ಲೆ ಹಾಗೂ ಭಯದ ಆತಂಕದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಗುವಾಹಟಿ ಕಡೆಗೆ ರೈಲು ಹತ್ತುವವರ ಸಂಖ್ಯೆ ಇನ್ನೂ ಏರುತ್ತಲೇ ಇದೆ.
ಬೆಂಗಳೂರಿನಲ್ಲಿ ಸುಮಾರು 240,000 ಕ್ಕೂ ಅಧಿಕ ಜನ ಈಶಾನ್ಯ ರಾಜ್ಯಗಳಿಂದ ಬಂದು ಇಲ್ಲಿ ನೆಲೆಸಿದ್ದಾರೆ. ಕರ್ನಾಟಕದ ಇತರೆ ಸ್ಥಳಗಳಲ್ಲಿ ಸುಮಾರು 100,000 ಜನ ಇದ್ದಾರೆ. ಈ ಪೈಕಿ 340,000 ಜನ ವಿದ್ಯಾರ್ಥಿಗಳಿದ್ದಾರೆ. ಉಳಿದವರು ಉದ್ಯೋಗಸ್ಥರಾಗಿದ್ದು, ಹಾಸ್ಟೆಲ್, ಪಿಜಿ ಗಳಲ್ಲಿ ನೆಲೆಸಿದ್ದಾರೆ. ಬ್ಯೂಟಿ ಪಾರ್ಲರ್, ಸ್ಟಾರ್ ಹೋಟೆಲ್, ಸಲೂನ್, ಸೆಕ್ಯುರಿಟಿ ಗಾರ್ಡ್, ಗೂರ್ಖಾ ಸೇರಿದಂತೆ ಹಲವೆಡೆ ಉದ್ಯೋಗ ನಿರತರಾಗಿದ್ದಾರೆ.ಅಸ್ಸಾಂ ನಿರಾಶ್ರಿತರ ಸಂಖ್ಯೆ : ಅತ್ತ ಅಸ್ಸಾಂನಲ್ಲೂ ಪರಿಸ್ಥಿತಿ ಚೆನ್ನಾಗಿಲ್ಲ. ಅಲ್ಲಿನ ಹಿಂಸಾಪೀಡಿತ ಜಿಲ್ಲೆಗಳ ನಿರಾಶ್ರಿತರ ಶಿಬಿರಗಳಿಂದ 10,000 ಮಂದಿ ತಮ್ಮ ಸ್ವಗ್ರಾಮಗಳಿಗೆ ವಾಪಸಾಗಿದ್ದಾರೆ. ರಾಜ್ಯದ ವಿವಿಧೆಡೆಯ ಶಿಬಿರಗಳಲ್ಲಿನ ಒಟ್ಟು ನಿರಾಶ್ರಿತರ ಸಂಖ್ಯೆ 2,92,852ಕ್ಕೆ ಇಳಿದಿದೆ.
ಕೊಕ್ರಝಾರ್, ಚಿರಂಗ್, ಧುಬ್ರಿ ಮತ್ತು ಬೊಂಗೈಗಾಂವ್ ಜಿಲ್ಲೆಗಳ 175 ಮುಸ್ಲಿಂ ಶಿಬಿರಗಳಲ್ಲಿ 2,31,308 ಮಂದಿ ಹಾಗೂ 51 ಬೋಡೋ ಶಿಬಿರಗಳಲ್ಲಿ 64,439 ಮಂದಿ ಮತ್ತು ಇತರ ಸಮುದಾಯಗಳಿಗೆ ಸೇರಿದ 1 ಶಿಬಿರದಲ್ಲಿ 105 ಮಂದಿ ನಿರಾಶ್ರಿತರು ಆಶ್ರಯ ಪಡೆದುಕೊಂಡಿದ್ದಾರೆ.
ಧುಬ್ರಿ ಜಿಲ್ಲೆಯಲ್ಲಿ ಮುಸ್ಲಿಮರಿಗಾಗಿ 133 ಶಿಬಿರಗಳನ್ನು ನಿರ್ಮಿಸಲಾಗಿದ್ದು, 1,55,314 ಮಂದಿ ಆಶ್ರಯ ಪಡೆದುಕೊಂಡಿದ್ದಾರೆ. ಈ ಜಿಲ್ಲೆಯಲ್ಲಿ ಬೋಡೋಗಳಿಗೆ ಯಾವುದೇ ಶಿಬಿರವಿಲ್ಲ. ಹಲವು ದಿನಗಳ ಕಾಲ ನಡೆದ ಹಿಂಸಾಚಾರಗಳಲ್ಲಿ ನಿರಾಶ್ರಿತರಾದವರ ಸಂಖ್ಯೆ 4,85,921 ಕ್ಕೇರಿದೆ.
ನಿರಾಶ್ರಿತರನ್ನು ಅವರವರ ಊರುಗಳಿಗೆ ವಾಪಸ್ ಕಳಿಸುವ ಪ್ರಕ್ರಿಯೆಗೆ ಅಸ್ಸಾಂ ಸರ್ಕಾರ ಮುಂದಾಗಿದ್ದು, ಎಲ್ಲೆಡೆ ಜನಪ್ರವಾಹ ಹರಿದಾಡುತ್ತಿದೆ. ಅಸ್ಸಾಂಗಿಂತ ಕರ್ನಾಟಕ ಸುರಕ್ಷಿತ ಹಾಗೂ ವಾಸಿಸಲು ಯೋಗ್ಯ ಎಂದು ಇದೇ ಕಾರಣಕ್ಕೆ ಹೇಳಲಾಗುತ್ತಿದೆ. ಅಸ್ಸಾಂನಲ್ಲೇ ನಿರಾಶ್ರಿತರ ಸಂಖ್ಯೆ ಹೆಚ್ಚಾಗಿದ್ದು, ಅಲ್ಲಿ ಪರಿಸ್ಥಿತಿ ಸುಧಾರಿಸುವ ತನಕ ದಕ್ಷಿಣ ರಾಜ್ಯಗಳಿಂದ ಈಶಾನ್ಯ ರಾಜ್ಯಗಳಿಗೆ ಪುನರ್ ವಲಸೆಯಾಗುವುದನ್ನು ತಡೆಯಲು ಅಸ್ಸಾಂ ಸಚಿವರು ಸಂಚಾರ ಕೈಗೊಂಡಿದ್ದಾರೆ.
ಬೆಂಗಳೂರಿಗೂ ಆಗಮಿಸಿದ್ದ ಅಸ್ಸಾಂ ಸಚಿವರಾದ ನಿಲಮಣಿ ಸೇನ್ ಡೆಕಾ ಹಾಗೂ ಚಂದ್ರ ಬ್ರಹ್ಮ ಅವರು ಇಲ್ಲಿರುವ ಈಶಾನ್ಯ ರಾಜ್ಯದ ಜನರಿಗೆ ಸಾಂತ್ವನ ಹೇಳಿದ್ದಾರೆ. ಆದರೆ, ಅಸ್ಸಾಂಗೆ ತೆರಳುವವರಲ್ಲಿ ಹೆಚ್ಚಿನವರು ನಾವು ನಮ್ಮ ಮನೆಗೆ ಎಂದಿನಂತೆ ಹೋಗುತ್ತಿದ್ದೆವೆ. ಮನೆ ಪರಿಸ್ಥಿತಿ ಸುಧಾರಿಸಿದ ನಂತರ ಮತ್ತೆ ಬೆಂಗಳೂರಿಗೆ ಹಿಂತಿರುಗುತ್ತೇವೆ. ಅದು ನಮ್ಮ ಜನ್ಮಭೂಮಿ, ಇದು ಕರ್ಮಭೂಮಿ, ಇದು ನಮ್ಮ ಎರಡನೇ ತವರುಮನೆ ಎಂದೆಲ್ಲ ಭರವಸೆ ನೀಡಿ ರೈಲು ಹತ್ತಿದ್ದಾರೆ.
ಕರ್ನಾಟಕದ ವಲಸೆ ಇತಿಹಾಸ : ಈ ಹಿಂದೆ ಕಾವೇರಿ ನದಿ ನೀರು ಹಂಚಿಕೆ ತೀರ್ಪು ಹೊರಬಿದ್ದಾಗ(ಡಿ.11, 1991) ಬೆಂಗಳೂರಿನಲ್ಲಿ ಭಾರಿ ಗಲಾಟೆ ನಡೆದಿತ್ತು. ಆಗ ಸುಮಾರು 15 ಸಾವಿರಕ್ಕೂ ಅಧಿಕ ತಮಿಳರು ಚೆನ್ನೈ ಕಡೆಗೆ ಪ್ರಯಾಣಿಸಿದ್ದರು. ಇದಕ್ಕೂ ಮುನ್ನ 1966 ರ ಜ.26ರಂದು ಹಿಂದಿ ರಾಷ್ಟ್ರಭಾಷೆಯನ್ನಾಗಿ ಘೋಷಣೆ ಮಾಡಿದ ಸಂದರ್ಭದಲ್ಲಿ ಗಲಭೆಗೆ ಹೆದರಿ ಉತ್ತರ ಭಾರತ ಮೂಲದ ಜನರು ತಮ್ಮ ಊರುಗಳಿಗೆ ತೆರಳಿದ್ದರು.













Click it and Unblock the Notifications