ರೆಡ್ಡಿ ಜಾಮೀನು ಆರೋಪ ದಾಖಲು: ರಾಮುಲುಗೆ ನಡುಕ

ಭಾರತೀಯ ದಂಡ ಸಂಹಿತೆ ಸೆಕ್ಷನ್ 120 ಬಿ, 34, 109, 219 (Public servant in judicial proceeding corruptly making report contrary to law) ಮತ್ತು ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯ ನಾನಾ ಸೆಕ್ಷನ್ ಗಳಡಿ ಆರೋಪ ದಾಖಲಾಗಿದೆ.
ಆಂಧ್ರದ ಎಸಿಬಿ ಅಧಿಕಾರಿಗಳು ಎರಡು ಪ್ರತ್ಯೇಕ ಎಫ್ಐಆರ್ ದಾಖಲಿಸಿದ್ದು, ಮೊದಲ ಎಫ್ಐಆರ್ನಲ್ಲಿ ಹೆಸರಿಸಿರುವ ಎಂಟೂ ಆರೋಪಿಗಳನ್ನು ಈಗಾಗಲೇ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಬಂಧಿಸಿದ್ದು, ಅವರ ಮೇಲೆಯೇ ದೋಷರೋಪಣ ಪಟ್ಟಿಯನ್ನು ಸೋಮವಾರ ಎಸಿಬಿ ನ್ಯಾಯಾಲಯದ ಮುಂದೆ ಸಲ್ಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ 40 ಪುಟಗಳ ದೋಷಾರೋಪಣ ಪಟ್ಟಿ ಹಾಗೂ 50ಕ್ಕೂ ಹೆಚ್ಚು ಸಾಕ್ಷ್ಯಗಳು ಅಡಕವಾಗಿವೆ.
ಎಸಿಬಿ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸುತ್ತಿದ್ದಂತೆ ರೆಡ್ಡಿ ಪಾಳಯದಲ್ಲಿ ಆತಂಕ ಮನೆಮಾಡಿದೆ. ವಿಚಾರಣೆಯ ಸಂದರ್ಭದಲ್ಲಿ ಸುರೇಶ್ಬಾಬು ಅವರು ಶ್ರೀರಾಮುಲುಗೆ ಬೇಲ್ಡೀಲ್ ಪ್ರಕರಣದ ಮಾಹಿತಿ ಇತ್ತು ಎಂದು ಮುಂತಾದ ಅಂಶಗಳು ಸೇರಿದಂತೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಪ್ರಮುಖ ಅಂಶಗಳು ದೋಷಾರೋಪಣ ಪಟ್ಟಿಯಲ್ಲಿವೆ.
ಮೊದಲನೆ ಎಫ್ಐಆರ್ (ಕ್ರೈಂ ನಂ. 8)ನಲ್ಲಿ ಕಾಣಿಸಿಕೊಂಡಿರುವ ಆರೋಪಿಗಳು ನ್ಯಾಯಾಧೀಶ ಪಟ್ಟಾಭಿ ರಾಮರಾವ್, ಬಳ್ಳಾರಿ ಶಾಸಕ, ಕೆಎಂಎಫ್ ಅಧ್ಯಕ್ಷ ಜಿ. ಸೋಮಶೇಖರ ರೆಡ್ಡಿ, ರೆಡ್ಡಿ ಸಹೋದರರ ದೂರದ ಸಂಬಂಧಿ ದಶರಥ ರಾಮರೆಡ್ಡಿ, ಕಂಪ್ಲಿ ಶಾಸಕ ಟಿ.ಎಚ್. ಸುರೇಶ್ಬಾಬು, ಜ್ಯೂನಿಯರ್ ನ್ಯಾಯವಾದಿ ಆದಿತ್ಯ, ನಿವೃತ್ತ ನ್ಯಾಯಮೂರ್ತಿ ವೆಂಕಟಾ ಚಲಪತಿ, ನ್ಯಾ. ಪಟ್ಟಾಭಿ ರಾಮರಾವ್ ಅವರ ಮಗ ರವಿಚಂದ್ರ, ರೌಡಿ ಯಾದಗಿರಿ ರಾವ್ ಅವರ ಮೇಲೆ ದೋಷಾರೋಪಣ ಪಟ್ಟಿಯನ್ನು ಸೋಮವಾರ ಎಸಿಬಿ ನ್ಯಾಯಾಲಯದ ಮುಂದೆ ಸಲ್ಲಿಸಿದ್ದಾರೆ.
ಇವರೆಲ್ಲ ಸದ್ಯ ಚರ್ಲಪಲ್ಲಿ ಜೈಲಿನಲ್ಲಿದ್ದಾರೆ. ಈ ಎಲ್ಲರ ಮೇಲೂ ಜನಾರ್ದನ ರೆಡ್ಡಿಗೆ ಜಾಮೀನು ಕೊಡಿಸಲು ಸಂಚು ರೂಪಿಸಿದ ಆರೋಪ ಹೊರಿಸಲಾಗಿದೆ. ಆದರೆ ಆರೋಪಪಟ್ಟಿಯಲ್ಲಿ ಜನಾರ್ದನ ರೆಡ್ಡಿ ಹೆಸರು ಉಲ್ಲೇಖವಾಗಿಲ್ಲ. ಸಿಬಿಐ ಲಕ್ಷ್ಮಿನಾರಾಯಣ ಅವರು ಪ್ರಕರಣವನ್ನು ಬೇಧಿಸಿದ್ದರು.
ಜೈಲಿನಲ್ಲಿರುವ ರೆಡ್ಡಿಯತ್ತ ಗಮನ: ಇನ್ನು ಎರಡನೇ ಎಫ್ಐಆರ್ನಲ್ಲಿ ಲಕ್ಷ್ಮಿ ನರಸಿಂಹರಾವ್, ಪ್ರಭಾಕರ, ರಾವಿ ಸೂರ್ಯ ಪ್ರಕಾಶ್ ಅವರ ವಿರುದ್ಧ ದಾಖಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಮುಂದಿನ ಕೆಲವೇ ದಿನಗಳಲ್ಲಿ ದೋಷಾರೋಪಣ ಪಟ್ಟಿ ಸಲ್ಲಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಸಂದರ್ಭದಲ್ಲಿ ಪ್ರಕರಣಕ್ಕೆ ಸಂಬಂಧಪಟ್ಟ ಬೆಂಗಳೂರಿನ ಜೈಲಿನಲ್ಲಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರನ್ನು ಎಸಿಬಿ ಪೊಲೀಸರು ವಿಚಾರಣೆಗೆ ಒಳಪಡಿಸಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.












Click it and Unblock the Notifications