ಜೀವ ಭಯ: ಪಾಕಿಸ್ತಾನದಿಂದ ಹಿಂದೂಗಳ ವಲಸೆ
2011ರಲ್ಲಿ 7000ಕ್ಕೂ ಅಧಿಕ ಪಾಕಿಸ್ತಾನಿ ಹಿಂದೂಗಳು ಭಾರತಕ್ಕೆ ಬಂದಿದ್ದರು. ಇವರಲ್ಲಿ 1100-1200 ಜನ ಮತ್ತೆ ಪಾಕಿಸ್ತಾನಕ್ಕೆ ಹಿಂತಿರುಗಿಲ್ಲ. ಈ ಬಾರಿ ಈ ಸಂಖ್ಯೆ ಇನ್ನೂ ಅಧಿಕವಾಗುವ ಸಾಧ್ಯತೆ ಹೆಚ್ಚಿದೆ.
ಬಲೂಚಿಸ್ತಾನದಲ್ಲಿ ಗಿರಾಣಿ ಅಂಗಡಿ ಇಟ್ಟುಕೊಂಡಿರುವ ಮುಖೇಶ್ ಕುಮಾರ್ ಅಹುಜಾ ತನ್ನ ಕುಟುಂಬದೊಡನೆ ಭಾರತಕ್ಕೆ ಕಾಲಿರಿಸಿದ್ದು, ಮತ್ತೊಮ್ಮೆ ಪಾಕಿಸ್ತಾನದ ಕಡೆ ತಲೆ ಹಾಕಿ ಮಲಗುವುದಿಲ್ಲ ಎಂದಿದ್ದಾರೆ.
ಸಿಂಧ್ ಹಾಗೂ ಬಲೂಚಿಸ್ತಾನ ಪ್ರಾಂತ್ಯದಲ್ಲಿರುವ ಹಿಂದೂಗಳು ಪ್ರತಿ ನಿತ್ಯ ಚಿತ್ರಹಿಂಸೆ ಅನುಭವಿಸುತ್ತಿದ್ದಾರೆ. ನಮ್ಮನ್ನು ಯಾರೂ ಲೂಟಿ ಮಾಡುತ್ತಿದ್ದಾರೆ ಎಂಬುದು ಕೂಡಾ ನಮಗೆ ತಿಳಿಯದಾಗಿದೆ. ಹಲವೆಡೆ ಬಲವಂತವಾಗಿ ಮದುವೆ ಮಾಡಿಸಲಾಗುತ್ತಿದೆ. ಜೀವ ಭಯದಿಂದ ಪ್ರತಿದಿನ ಅಲ್ಲಿ ಒದ್ದಾಡುವುದಕ್ಕಿಂತ ಭಾರತಕ್ಕೆ ಬಂದು ಪ್ರಾಣ ಬಿಡುವುದೇ ಲೇಸು ಎಂದು ನಾವು ನಿರ್ಧರಿಸಿದೆವು ಎಂದು ಗದ್ಗದಿತ ಸ್ವರದಲ್ಲಿ ಮುಖೇಶ್ ಹೇಳಿದ್ದಾರೆ.
ಹಲವು ಪ್ರಾಂತ್ಯಗಳಲ್ಲಿ ಹಿಂದೂಗಳನ್ನು ಹುಡುಕಿಕೊಂಡು ಕಿಡ್ನಾಪ್ ಮಾಡಲಾಗುತ್ತಿದೆ. ಬಲವಂತದ ಮತಾಂತರ, ಬೆದರಿಕೆ ಮಾಮೂಲಿಯಾಗಿದೆ. ಶಾಲೆಗಳಲ್ಲಿ ಮಕ್ಕಳಿಗೆ ಹಿಂಸಿಸಲಾಗುತ್ತಿದೆ. ಮನೆ ಅಂಗಡಿ ಎಲ್ಲವನ್ನು ಮಾರಾಟ ಮಾಡಿ ಭಾರತಕ್ಕ್ ವಲಸೆ ಬಂದಿದ್ದೇವೆ ಎಂದು ಮುಖೇಶ್ ತಿಳಿಸಿದರು.
ಮುಖೇಶ್ ಕುಟುಂಬದ ಜೊತೆಗೆ ಇನ್ನೂ 5 ಕುಟುಂಬಗಳು ಭಾರತಕ್ಕೆ ಬಂದಿಳಿದಿದೆ. ಅಲ್ಪಸಂಖ್ಯಾತರ ರಕ್ಷಣೆಯಲ್ಲಿ ಪಾಕಿಸ್ತಾನ ಸಂಪೂರ್ಣ ವಿಫಲವಾಗಿದೆ ಎಂದು ವಲಸೆ ಬಂದವರು ಗೋಳು ತೋಡಿಕೊಂಡಿದ್ದಾರೆ. ಸುಮಾರು 250 ಪಾಕಿಸ್ತಾನಿ ಹಿಂದೂಗಳು ಭಾರತದಲ್ಲೇ ಉಳಿದ ಜೀವನ ಸಾಗಿಸುವ ಪಣ ತೊಟ್ಟಿದ್ದಾರೆ.
ಆದರೆ, ವಾಘಾ -ಅಟ್ಟಾರಿ ಬಾರ್ಡರ್ ನಲ್ಲಿ ಎಲ್ಲರ ದಾಖಲಾತಿ ಪರೀಶೀಲಿಸಿ 33 ದಿನ ಮಾತ್ರ ಭಾರತದಲ್ಲಿ ನೆಲೆಸಲು ಅನುಮತಿ ನೀಡಲಾಗಿದೆ.
ಸಂಸತ್ತಿನಲ್ಲಿ ಕಲರವ: ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ಹೆಚ್ಚಿರುವ ಹಿಂಸಾಚಾರ ಹಾಗೂ ದೌರ್ಜನ್ಯ ಪ್ರಕರಣಗಳನ್ನುಲ್ಲೇಖಿಸಿದ ಬಿಜೆಪಿ, ಬಿಜೆಡಿ ಹಾಗೂ ಎಸ್ಪಿ ಸದಸ್ಯರು, ಅದನ್ನು ಖಂಡಿಸಿ ಸಂಸತ್ತಿನಲ್ಲಿ ನಿರ್ಣಯ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಸಿಂಧ್ ಪ್ರಾಂತ್ಯದಲ್ಲಿ ತಮ್ಮ ವಿರುದ್ಧದ ಕಿರುಕುಳ ತಾಳಲಾರದೆ ನಿನ್ನೆ ಅತ್ತಾರಿ ಗಡಿಯ ಮೂಲಕ ಸುಮಾರು 150 ಹಿಂದೂಗಳು ಭಾರತಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ಈ ಬಗ್ಗೆ ಕಳವಳ ಧ್ವನಿಸಿದೆ.
ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿ ನಾಯಕ ರಾಜನಾಥ ಸಿಂಗ್, ಪಾಕಿಸ್ತಾನದಲ್ಲಿ ಮುಖ್ಯವಾಗಿ ಹಿಂದೂಗಳು ಹಾಗೂ ಸಿಖ್ಖರು ಅಭದ್ರತೆಯ ಭಾವನೆಯಿಂದ ಬಳಲುತ್ತಿದ್ದಾರೆ ಎಂದರು.
ಭಾರತಕ್ಕೆ ಬಂದಿರುವ 250 ಮಂದಿ ಹಿಂದೂ ಯಾತ್ರಿಕರಿದ್ದ ಪಾಕಿಸ್ತಾನದ ಬಗ್ಗೆ ಯಾವುದೇ ಹೇಳಿಕೆ ನೀಡದಂತೆ ಪಾಕಿಸ್ತಾನ ಮುಚ್ಚಳಿಕೆ ಬರೆಸಿಕೊಂಡಿದೆಯೆಂದು ರಾಜನಾಥ್ ಹೇಳಿದರು.
ಅಲ್ಲಿ ಹಿಂದೂ ಯುವಕರ ಮತಾಂತರ, ಯುವತಿಯರ ಅಪಹರಣ ಹಾಗೂ ಮತಾಂತರದ ಟಿ.ವಿ. ವರದಿಗಳನ್ನುಲ್ಲೇಖಿಸಿದ ಅವರು, ಹಿಂದೂ ಸಮುದಾಯದವರು ರಕ್ಷಣೆ ಕೋರಿ ಭಾರತೀಯ ದೂತಾವಾಸ ಹಾಗೂ ಪಾಕ್ನ ಅಮೆರಿಕನ್ ರಾಯಭಾರ ಕಚೇರಿಗಳಿಗೆ ಪತ್ರ ಬರೆದಿದ್ದಾರೆಂದು ವಿವರಿಸಿದರು.