ಸ್ನೇಹಿತರ ದಿನ ಸಿನಿಮಾ ನೋಡಿದ ಬಿಎಸ್ವೈ, ಸದಾನಂದ
ಆದರೆ ಈ ಒಂದು ವರ್ಷದಲ್ಲಿ ಆ ಇಬ್ಬರೂ ಮಾಜಿ ಮುಖ್ಯಮಂತ್ರಿಗಳು (ಬಿಎಸ್ ಯಡಿಯೂರಪ್ಪ ಹಾಗೂ ಡಿವಿ ಸದಾನಂದ ಗೌಡ) ಬದ್ಧವೈರಿಗಳಾಗಿ ಮಾರ್ಪಟ್ಟಿರುವುದು ರಾಜಕೀಯ ವಿರೋಧಾಭಾದಗಳಿಗೆ ಹಿಡಿದ ಕನ್ನಡಿಯಾಗಿದೆ.
ಇಬ್ಬರೂ ರಾಜಕೀಯವನ್ನು ಪಕ್ಕಕ್ಕಿಟ್ಟು ಪರಸ್ಪರ ಫ್ರೆಂಡ್ ಶಿಪ್ ಬ್ಯಾಂಡ್ ಕಟ್ಟಿಕೊಂಡರಾ? ಎಂಬುದು ನಿಮ್ಮ ಊಹೆಗೆ ಬಿಟ್ಟ ವಿಚಾರವಾದರೂ ಸದಾನಂದ ಗೌಡರು 'ನಾವು 365 ದಿನವೂ ಸ್ನೇಹಿತರೇ' ಎಂದು ತಮ್ಮ ಕೋಲ್ಗೇಟ್ ನಗೆ ಮರೆಮಾಚಿ ಪೇಲವ ನಗೆ ನಕ್ಕಿದ್ದಾರೆ. ಹಾಗಂತ ಇಬ್ಬರೂ ಆಕ್ಕಪಕ್ಕ ಕುಳಿತು ಚಿತ್ರ ನೋಡಿದರಾ ಅಂದರೆ ಖಂಡಿತ ಇಲ್ಲ. 'ಸದಾನಂದ ನನ್ನ ಬೆನ್ನಿಗೆ ಚೂರಿ ಹಾಕಿದ' ಎಂದು ನೂರೆಂಟು ಬಾರಿ ಹೇಳಿರುವ ಯಡಿಯೂರಪ್ಪ ಅವರ ಬೆನ್ನಿಗೆ ಕುಳಿತು ಸದಾನಂದ ಗೌಡರು ಚಿತ್ರವನ್ನು ಎಂಜಾಯ್ ಮಾಡಿದ್ದಾರೆ.
ಸಂದರ್ಭ: ಹಿರಿಯ ಸಾಹಿತಿ ಬರಗೂರು ರಾಮಚಂದ್ರ ಅವರ 'ಬರ' (ಕೆರೆಗೆ ಹಾರ) ವಿಷಯಾಧಾರಿತ 'ಭಾಗೀರಥಿ' ಸಿನಿಮಾದ ವಿಶೇಷ ಪ್ರದರ್ಶನವನ್ನು ನಗರದ ಮಲ್ಲೇಶ್ವರದಲ್ಲಿರುವ ರೇಣುಕಾಂಬ ಚಿತ್ರಮಂದಿರದಲ್ಲಿ ಭಾನುವಾರ ಏರ್ಪಡಿಸಲಾಗಿತ್ತು. ಹಾಗಾಗಿ, ಬಿಜೆಪಿಯ ಈ ಮಾಜಿ ಸಿಎಂಗಳು ರಾಜಕೀಯ ಬೇಗುದಿಯ ನಡುವೆ ತಮ್ಮೆಲ್ಲಾ ರಾಜಕಾರಣವನ್ನು ಬದಿಗಿರಿಸಿ 'ಭಾಗೀರಥಿ'ಯನ್ನು ನೋಡಿ ಹಗುರವಾಗಿದ್ದಾರೆ. ಬಿ.ಕೆ.ಶ್ರೀನಿವಾಸ್ ಅವರು ಚಿತ್ರದ ನಿರ್ಮಾಣ ಮಾಡಿದ್ದಾರೆ.
ಈ ವಿಶೇಷ ಸಿನಿಮಾ ಪ್ರದರ್ಶನದಲ್ಲಿ ಇವರಿಬ್ಬರಿಗೂ ಉಪ ಮುಖ್ಯಮಂತ್ರಿ ಆರ್.ಅಶೋಕ್, ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ, ಚಲನಚಿತ್ರ ಅಕಾಡೆಮಿ ಅಧ್ಯಕ್ಷೆ ತಾರಾ ಸೇರಿದಂತೆ ಮತ್ತಿತರರು ಸಾಥ್ ನೀಡಿದ್ದಾರೆ.
ಈ ಸಿನಿಮಾ ವೀಕ್ಷಣೆಯ ಬಳಿಕ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಅಶೋಕ್ ಹಾಗೂ ಸದಾನಂದ ಗೌಡ ಅವರು, 'ಜಾನಪದ ಹಿನ್ನೆಲೆಯುಳ್ಳ ಭಾಗರಥಿ ಉತ್ತಮ ಚಲನಚಿತ್ರವಾಗಿದ್ದು, ಪ್ರತಿಯೊಬ್ಬರೂ ನೋಡಬೇಕಿದೆ' ಎಂದು ಮುಕ್ತಕಂಠದಿಂದ ಚಿತ್ರತಂಡವನ್ನು ಶ್ಲಾಘಿಸಿದರು.