ಕಂಪ್ಲಿ ಶಾಸಕ ಸುರೇಶ್ ಬಾಬು ಹೈದರಾಬಾದ್ ನಲ್ಲಿ ಬಂಧನ

ಜನಾರ್ಧನ ರೆಡ್ಡಿ ಬೇಲ್ ಗಾಗಿ ಡೀಲ್ ಪ್ರಕರಣದಲ್ಲಿ ಬಾಬು ಅವರನ್ನು ನಗರದ ಅಶೋಕ್ ನಗರದಲ್ಲಿ ಬಂಧಿಸಲಾಗಿದೆ ಎಂದು ಆಂಧ್ರ ಎಸಿಬಿ ಅಧಿಕಾರಿ ಡಿ ಜಿ ಪ್ರಸಾದ್ ಹೇಳಿಕೆ ನೀಡಿದ್ದಾರೆ. ವಿಚಾರಣೆಗೆ ತೆರಳಿದ್ದಾಗ ಸುರೇಶ್ ಬಾಬು ಅವರನ್ನು ಬಂಧಿಸಿ ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.
ಬಳ್ಳಾರಿ ಸಂಸದೆ ಜೆ ಶಾಂತಾ ಮತ್ತು ರಾಯಚೂರು ಸಂಸದ ಸಣ್ಣ ಫಕೀರಪ್ಪ ಅವರ ಜೊತೆ ಇದ್ದ ಸುರೇಶ್ ಬಾಬು ಅವರನ್ನು ಎಸಿಬಿ ಪೊಲೀಸರು ಬಂಧಿಸಿದ್ದು ನಾಳೆ (July 31) ಕೋರ್ಟ್ ಗೆ ಹಾಜರು ಪಡಿಸಲಿದ್ದಾರೆ. ಬೇಲ್ ಗಾಗಿ ಡೀಲ್ ಪ್ರಕರಣದಲ್ಲಿ ಸುರೇಶ್ ಬಾಬು 4ನೇ ಆರೋಪಿಯಾಗಿದ್ದಾರೆ.
ಬಳ್ಳಾರಿ ಶಾಸಕ ಸೋಮಶೇಖರ್ ರೆಡ್ಡಿ ಮತ್ತು ಸುರೇಶ್ ಬಾಬು ಅವರಿಗೆ ರೆಡ್ಡಿ ಬೇಲ್ ಡೀಲ್ ಪ್ರಕಾರಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ಎಸಿಬಿ ಪೊಲೀಸರು ವಾರಂಟ್ ಜಾರಿ ಮಾಡಿದ್ದರು. ಜನಾರ್ಧನ ರೆಡ್ಡಿ ಅಳಿಯ ಮತ್ತು ಶ್ರೀರಾಮುಲು ನಂತರ ಅವರ ಆಪ್ತರಂದೇ ಗುರುತಿಸಿದ್ದ ಸುರೇಶ ಬಾಬು ರೆಡ್ಡಿ ಕೃಪಾಕಟಾಕ್ಷದಿಂದ ಸಣ್ಣ ವಯಸಿನಲ್ಲೇ ಶಾಸಕರಾಗಿದ್ದರು.
ಓಬುಳಾಪುರಂ ಅಕ್ರಮ ಗಣಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ಜನಾರ್ದನ ರೆಡ್ಡಿಯವರಿಗೆ ಜಾಮೀನು ಒದಗಿಸಲು ನ್ಯಾಯಾಧೀಶರಿಗೇ ಲಂಚ ನೀಡಿದ್ದು, ಪ್ರಕರಣದಲ್ಲಿ ರೆಡ್ಡಿ ಅವರ ಕಟ್ಟಾ ಬೆಂಬಲಿಗರಾದ ಅವರ ಸೋದರ ಸೋಮಶೇಖರ ರೆಡ್ಡಿ ಮತ್ತು ಸುರೇಶ್ ಬಾಬು ಪಾತ್ರದ ಬಗ್ಗೆಯೂ ಕೇಳಿಬಂದಿತ್ತು.
ಈ ಸಂಬಂಧ ಎಸಿಬಿಯು ಸೋಮಶೇಖರ ರೆಡ್ಡಿ ಮತ್ತು ಸುರೇಶ್ ಬಾಬು ವಿರುದ್ಧ ಲುಕ್ಔಟ್ ನೋಟಿಸ್ ಜಾರಿ ಮಾಡಿತ್ತು.












Click it and Unblock the Notifications