ಬಿಎಸ್ವೈ:ಬಿಜೆಪಿಗೆ ಗುಡ್ ಬೈ, ವಿಜಯದಶಮಿಗೆ ಹೊಸಪಕ್ಷ?

'ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನವನ್ನು ತಮಗಾಗಲಿ ಅಥವಾ ತಮ್ಮ ಬೆಂಬಲಿಗರಿಗಾಗಲಿ ನೀಡಲೇಬೇಕು ಎಂದು ಬಿಎಸ್ವೈ ಹಠ ಹಿಡಿದಿದ್ದಾರೆ. ಒಂದು ವೇಳೆ ಹೈಕಮಾಂಡ್ ಈ ಬೇಡಿಕೆಗೆ ಸೊಪ್ಪು ಹಾಕದಿದ್ದಲ್ಲಿ ಈ ಬಾರಿ ಅವರು ಪಕ್ಷ ಬಿಟ್ಟುಹೋಗುವುದು ಖಡಾಖಂಡಿತ' ಎಂದು ಯಡಿಯೂರಪ್ಪ ಆಪ್ತರು ಪಿಸುಗುಟ್ಟಿದ್ದಾರೆ.
ತಕ್ಷಣಕ್ಕೆ ಬಿಜೆಪಿಗೆ ಗುಡ್ ಬೈ ಹೇಳುವುದು. ಮತ್ತು ಮುಂದಿನ ವಿಧಾನಸಭೆ ಚುನಾವಣೆಯ ವೇಳೆಗೆ ಹೊಸ ಪಕ್ಷ ಕಟ್ಟುವುದು ಯಡಿಯೂರಪ್ಪನವರ ಸದ್ಯದ ಇರಾದೆಯಾಗಿದೆ ಎನ್ನಲಾಗಿದೆ. ಅಥವಾ ಬಂಡಾಯ ನಾಯಕನಾಗಿ ಚುನಾವಣೆಯಲ್ಲಿ ಚಲಾವಣೆಗೆ ಬರುವ ಇಂಗಿತವೂ ಅವರಿಗಿದೆ ಎನ್ನುತ್ತಿವೆ ಆಪ್ತ ಮೂಲಗಳು. ಇದನ್ನು ಕೇಳಿಸಿಕೊಂಡ ಇತರೆ ರಾಜಕೀಯ ಮಂದಿ 'ಎಂದಿನಂತೆ ಇದೂ ಯಡಿಯೂರಪ್ಪನ ರಾಜಕೀಯ ನಡೆಯಷ್ಟೇ' ಎಂದಿದ್ದಾರೆ.
ಆದರೆ ಯಾರು ಏನೇ ಹೇಳಲಿ ಈ ಬಾರಿ ಯಡಿಯೂರಪ್ಪ ನಿರ್ಣಾಯಕ ಸಮರ ಸಾರುವುದು ಖಚಿತ. ಅದರೆ ಅದು ಯಾವ ಘಳಿಗೆಯಲ್ಲಿ ಕೂಡಿಬರುತ್ತದೆ ಎಂಬುದಷ್ಟೇ ಬಾಕಿ. ಈ ಸಂಬಂಧ ಕಾಂಗ್ರೆಸ್ ಸಂಸದರೊಂದಿಗೂ ಅವರು ಮಾತುಕತೆ ನಡೆಸಿದ್ದಾರೆ. 'ಸಿಬಿಐ ಕಾಟದಿಂದ ಪಾರಾಗಲು ಮತ್ತೆ ಸೋನಿಯಾ ಮೇಡಂ ಅವರತ್ತ ದೃಷ್ಟಿಹರಿಸಿದ್ದಾರೆ. ಹಾಗಾಗಿ ಸತತವಾಗಿ ಕಾಂಗ್ರೆಸ್ ಸಂಸದರ ಸಂಪರ್ಕದಲ್ಲಿದ್ದಾರೆ' ಎಂದು ಮೂಲಗಳು ಹೇಳಿವೆ.
ತಮ್ಮ ಅತ್ಯಾಪ್ತ ಶಾಸಕರನ್ನು ಒಬ್ಬೊಬ್ಬರಾಗಿ ಕರೆದು ಮಾತನಾಡಿಸುತ್ತಿರುವ ಯಡಿಯೂರಪ್ಪ, ಬೇರ್ಪಡುವ ಘಳಿಗೆ ಎದುರಾದರೆ ತಮ್ಮೊಂದಿಗೆ ಬರುವಂತೆ ಆಜ್ಞಾಪಿಸುತ್ತಿದ್ದಾರೆ. ಕಟ್ಟಾ ಸುಬ್ರಮಣ್ಯ ನಾಯ್ಡು ಈ ಬಾರಿ ಯಡಿಯೂರಪ್ಪ ಪರ ಆಟಕಟ್ಟಲಿದ್ದಾರೆ. ಇನ್ನು, ಅಬಕಾರಿ ಸಚಿವ ರೇಣುಕಾಚಾರ್ಯ ಅವರಂತೂ 'ಯಡಿಯೂರಪ್ಪ ಅವರು ಭಾರಿ ಜನ ಬೆಂಬಲವುಳ್ಳ ಅಪ್ಪಟ ಜನನಾಯಕ. ಅವರಿಗೆ ಅನ್ಯಾಯವಾದರೆ ಅವರ ಬೆಂಬಲಿಗರಾಗಿ ನಾವು ಕೈಕಟ್ಟಿಕೊಂಡು ಇರುವುದಿಲ್ಲ. ಅವರಿಗೆ ನಾಯಕತ್ವ ಸಿಗಲೇಬೇಕು' ಎಂದು ಮೇಲಿಂದ ಮೇಲೆ ಹೇಳುತ್ತಲೇ ಬಂದಿದ್ದಾರೆ.
ಪ್ರವಾಸಕ್ಕೆ ರಥ ಸಜ್ಜು: ರಾಜ್ಯ ಪ್ರವಾಸಕ್ಕೆ ಯಡಿಯೂರಪ್ಪ ಸದ್ಯದಲ್ಲೇ ರಥವೇರುವುದು ನಿಶ್ಚಿತ. ಅದಕ್ಕಾಗಿಯೇ ಪೂನಾದಲ್ಲಿ ಹೊಸ ಐಷಾರಾಮಿ ವಾಹನಕ್ಕೆ order ಮಾಡಿದ್ದಾರೆ. ವಾಹನೋದ್ಯಮಿ ದಿಲೀಪ್ ಛಾಬ್ರಿಯಾ ಅವರು ಯಡಿಯೂರಪ್ಪ ಅವರ ಅಗತ್ಯಕ್ಕೆ ತಕ್ಕ ವಾಹನವನ್ನು ಸಿದ್ಧಗೊಳಿಸುವ ಹೊಣೆಹೊತ್ತಿದ್ದಾರೆ.
ಆಗಸ್ಟ್ ಮೊದಲ ವಾರದಲ್ಲಿ ಯಡಿಯೂರಪ್ಪ ಈ ವಾಹನವೇರುವುದು ಖಚಿತವಾಗಿದೆ. ವ್ಯಾಪಕ ರಾಜ್ಯ ಪ್ರವಾಸದ ಬಳಿಕ ವಿಜಯದಶಮಿಯಂದು ಹೊಸ ಪಕ್ಷ ಘೋಷಣೆ ಹೊರಬೀಳಲಿದೆ. ಕನಿಷ್ಠ 50 ಸೀಟು ಗೆದ್ದರೆ ಕಾಂಗ್ರೆಸ್ ಜತೆ ಕೈಜೋಡಿಸಿ ಮತ್ತೆ ಮುಖ್ಯಮಂತ್ರಿ ಪೀಠದಲ್ಲಿ ಪ್ರತಿಷ್ಠಾಪಿಸುವುದು ಯಡಿಯೂರಪ್ಪನವರ ಲೆಕ್ಕಾಚಾರವಾಗಿದೆ ಎಂದು ಮೂಲಗಳು ಪಿಸುಗುಟ್ಟಿವೆ.












Click it and Unblock the Notifications