ಮಂಗಳೂರಿನಲ್ಲಿ ಮರುಕಳಿಸಿದ ಪಬ್ ಮೇಲಿನ ದಾಳಿ
ಮಾರ್ನಿಂಗ್ ಮಿಸ್ಟ್ ರೆಸಾರ್ಟ್ನಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂಬ ದೂರ ಬಂದ ಹಿನ್ನೆಲೆಯಲ್ಲಿ ಪೊಲೀಸರಿಗೆ ಕೂಡ ದೂರು ನೀಡದೆ ಸಂಜೆ 7.30ರ ಸುಮಾರಿಗೆ ರೆಸಾರ್ಟಿಗೆ ನುಗ್ಗಿದ 50ಕ್ಕೂ ಹೆಚ್ಚು ಸಂಖ್ಯೆಯಲ್ಲಿದ್ದ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರ ದಂಡು ಯುವಕನನ್ನು ಅರೆಬೆತ್ತಲಾಗಿಸಿ ಮತ್ತು ಆತನೊಂದಿಗಿದ್ದ ಯುವತಿಯರನ್ನು ಮನಬಂದಂತೆ ಥಳಿಸಿದ್ದಾರೆ. ಕೋಣೆಯಲ್ಲಿ ಮದ್ಯದ ಬಾಟಲಿಗಳು ಕೂಡ ಸಿಕ್ಕಿವೆ.
ಹಿಂದೂ ಸಂಘಟನೆಯ ಕಾರ್ಯಕರ್ತರ ಪ್ರಕಾರ, ರೆಸಾರ್ಟಿಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂದು ಪೊಲೀಸರಿಗೆ ದೂರು ನೀಡಿದ್ದರೂ ಪ್ರಯೋಜನವಾಗಿರಲಿಲ್ಲ. ಆದ್ದರಿಂದ ಹಿಂದೂ ಸಂಘಟನೆಗೆ ದೂರು ನೀಡಲಾಗಿತ್ತು. ದೂರಿನನ್ವಯ ಅಲ್ಲಿಗೆ ನುಗ್ಗಿದ ಕಾರ್ಯಕರ್ತರು ಓರ್ವ ಯುವತಿಯ ಕೂದಲು ಹಿಡಿದೆಳೆದು, ಕಪಾಳಕ್ಕೆ ಬಿಗಿದಿದ್ದಾರೆ. ಆ ಕೋಣೆಯಲ್ಲಿ ನಾಲ್ವರು ಯುವಕರು ಮತ್ತು ನಾಲ್ವರು ಯುವತಿಯರು ಇದ್ದರೆಂದು ತಿಳಿದುಬಂದಿದೆ.
ಹಿಂದೂ ಸಂಘಟನೆಯ ದಾಳಿಯ ಸುದ್ದಿ ತಿಳಿಯುತ್ತಿದ್ದಂತೆ ರೆಸಾರ್ಟಿಗೆ ಧಾವಿಸಿದ ಕಂಕನಾಡಿ ಪೊಲೀಸರು ಕಾರ್ಯಕರ್ತರನ್ನು ಬಂಧಿಸಿದರು. ನಂತರ ದಾಳಿಗೊಳಗಾದ ಯುವಕ ಮತ್ತು ಯುವತಿಯರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಸ್ಥಳೀಯರ ಪ್ರಕಾರ, ಈ ರೆಸಾರ್ಟಿನಲ್ಲಿ ಅನೇಕ ಪಾರ್ಟಿಗಳು ನಡೆಯುತ್ತಿದ್ದರೂ, ಅನೈತಿಕವಾಗಿ ಯಾವುದೇ ಚಟುವಟಿಕೆ ನಡೆದ ನಿದರ್ಶನ ಇರಲಿಲ್ಲ. ಹಾಗೆಯೆ, ಅನೈತಿಕ ಚಟುವಟಿಕೆ ನಡೆಯುತ್ತಿದ್ದರೆ ಪೊಲೀಸರಿಗೆ ತಿಳಿಸಲಿ, ಕಾನೂನನ್ನು ಕೈಗೆ ತೆಗೆದುಕೊಳ್ಳುವುದು ಬೇಡ ಎಂಬುದು ನಾಗರಿಕರ ಅಭಿಪ್ರಾಯ.
ಮಹಿಳೆ ಮೇಲಿನ ಹಲ್ಲೆಗೆ ಖಂಡನೆ : ಪಾರ್ಟಿಯಲ್ಲಿ ತೊಡಗಿದ್ದ ಮಹಿಳೆಯರ ಮೇಲೆ ಪುರುಷರು ಕೈಮಾಡಿರುವ ಘಟನೆ ರಾಜಕಾರಣಿಗಳಿಂದ, ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಪ್ರಮೀಳಾ ನೇಸರ್ಗಿ ಮತ್ತು ಹಾಲಿ ಅಧ್ಯಕ್ಷೆಯಾಗಿರುವ ಮಂಜುಳಾ ಅವರಿಂದ ತೀವ್ರ ಖಂಡನೆಗೆ ಒಳಗಾಗಿದೆ. ಕಳೆದ ಬಾರಿ ನಡೆದ ಪಬ್ ದಾಳಿಯ ರೂವಾರಿಯಾಗಿದ್ದ ಮಹೇಂದ್ರ ಕುಮಾರ್ (ಈಗ ಜೆಡಿಎಸ್ ಸದಸ್ಯ) ಅವರು ಮಹಿಳೆಯರ ಮೇಲಿನ ದಾಳಿಯನ್ನು ಖಂಡಿಸಿದ್ದಾರೆ.
ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಆರ್ ಅಶೋಕ್ ಅವರು, ಮಹಿಳೆಯರ ಮೇಲೆ ದಾಳಿಯನ್ನು ಖಂಡಿತ ಸಹಿಸುವುದಿಲ್ಲ, ದಾಳಿ ನಡೆಸಿದವರು ಯಾರೇ ಇರಲಿ ಅವರನ್ನು ಬಂಧಿಸುವಂತೆ ಪೊಲೀಸರಿಗೆ ಆದೇಶಿಸಿರುವುದಾಗಿ ಹೇಳಿದ್ದಾರೆ. ಎಂದಿನಂತೆ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಹೇಳಿಕೆ ನೀಡಿರುವ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು, ಮಹಿಳೆಯರ ಮೇಲಿನ ದಾಳಿ ಖಂಡಿಸುತ್ತೇನಾದರೂ, ಪಬ್ ಸಂಸ್ಕೃತಿ ಸಹಿಸುವುದಿಲ್ಲ ಎಂದಿದ್ದಾರೆ.