ಮದ್ದೂರು: ರೈಲಿನಲ್ಲಿ ಕಾಮುಕರಿಂದ ನಲುಗಿದ ಆಶಾಳ ಕಥೆ

ಅದಕ್ಕೂ ಮುನ್ನ ಇತ್ತೀಚೆಗೆ ಗೌಹಾಟಿಯಲ್ಲೂ ಇಂತಹುದೇ ಘಟನೆ ನಡೆದಿತ್ತು. ಆ ಅಮಾನವೀಯ ಘಟನೆಯೊಂದಿಗೆ ಹೋಲಿಕೆ ಮಾಡುತ್ತಾ ಅಪರೂಪವೆಂಬಂತೆ ರಾಷ್ಟ್ರೀಯ ಟಿವಿ ಚಾನೆಲ್ಲುಗಳು ಕರ್ನಾಟಕದ ವಿಷಯಕ್ಕೂ ಒಂದಷ್ಟು ಮಹತ್ವ ಕೊಟ್ಟಿವೆ.
ನಿನ್ನೆ ರಾಷ್ಟ್ರೀಯ ಚಾನೆಲ್ಲುಗಳು ಆಶಾಳ ಕಥೆಯನ್ನು ಮನಮುಟ್ಟುವಂತೆ ಪ್ರಸಾರ ಮಾಡಿವೆ. ನಿನ್ನೆ ದಟ್ಸ್ ಕನ್ನಡದಲ್ಲಿ ಸುದ್ದಿ ಓದಿದ ನಾಡಿನ ಪ್ರಜ್ಞಾವಂತ ಜನರು ಆಶಾಳ ಮೇಲೆ ನಡೆದ ದೌರ್ಜನ್ಯ ಕಂಡು ಮಮ್ಮಲಮರುಗಿದ್ದಾರೆ.
ಘಟನೆಯ ನಂತರ ಬದುಕಿನ ಆಸೆಯನ್ನೇ ಕಳೆದುಕೊಂಡಿರುವ ಆಶಾ: ಅಂದಹಾಗೆ ಆಶಾ ಮೂಲತಃ ಹುಬ್ಬಳ್ಳಿಯವರು. ಪ್ರಸ್ತುತ ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 'ದೈಹಿಕ ಗಾಯಗಳಿಗಿಂತ ಹೆಚ್ಚಾಗಿ ಕಾಮುಕರ ಅಟ್ಟಹಾಸದಿಂದ ಆಕೆ ಮಾನಸಿಕವಾಗಿ ಜರ್ಜರಿತಗೊಂಡಿದ್ದಾರೆ' ಎಂದು ಆಸ್ಪತ್ರೆಯ ವೈದ ಕೆಎಂ ಶಿವಕುಮಾರ್ ಹೇಳಿದ್ದಾರೆ.
ಆಶಾ ತನ್ನ ನಾಲ್ಕನೆಯ ವಯಸ್ಸಿಗೇ ಅಪ್ಪ-ಅಮ್ಮನನ್ನು ದಾರುಣವಾಗಿ ಕಳೆದುಕೊಂಡ ನತದೃಷ್ಟೆ. ಇದ್ದೊಬ್ಬ ಸೋದರನೂ ಇತ್ತೀಚೆಗೆ ಅಸುನೀಗಿದ. '15 ವರ್ಷಗಳ ಹಿಂದೆ ಹುಬ್ಬಳ್ಳಿಯಲ್ಲಿ ನನ್ನಪ್ಪ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡರು. ಅದನ್ನು ನೋಡಿ ನನ್ನಮ್ಮ ಸೀಮೆಎಣ್ಣೆ ಸುರಿದುಕೊಂಡು ಬೆಂಕಿಗೆ ಆಹುತಿಯಾದರು.
ಇನ್ನು ನನ್ನ ಸೋದರನೂ ಇತ್ತೀಚೆಗೆ ವಿಷ ಕುಡಿದು ಪ್ರಾಣಬಿಟ್ಟ. ನನ್ನ ಅಪ್ಪ-ಅಮ್ಮ ಸತ್ತನಂತರ ನನ್ನನ್ನು ಸಾಕಿಸಲುಹಿದ ನನ್ನ ಅಜ್ಜಿಯೂ 5 ವರ್ಷಗಳ ಹಿಂದೆ ಈ ಲೋಕವನ್ನು ತ್ಯಜಿಸಿದರು' ಎಂದು ಆಶಾ ಆಸ್ಪತ್ರೆಯ ಬೆಡ್ ಮೇಲೆ ಮಲಗಿ ತನ್ನ ಕರುಣಾಜನಕ ಕಥೆಯನ್ನು ಹೇಳುತ್ತಿದ್ದರೆ ತನ್ನವರು ಅಂತ ಅಲ್ಲಿ ಆಕೆಗೆ ಯಾರೂ ಇರಲಿಲ್ಲ.
ಮತ್ತೆ ಬದುಕು ಹಳಿ ತಪ್ಪಿದೆ: ಅಪ್ಪ-ಅಮ್ಮ ಹೋದಮೇಲೆ ಇನ್ನು ಜೀವನದಲ್ಲಿ ಏನೂ ಉಳಿದಿಲ್ಲ ಅನಿಸಿತು. ಆದರೆ ಮಾತೃ ಹೃದಯ ಅಜ್ಜಿ ನನ್ನ ಕೈಬಿಡಲಿಲ್ಲ. ಆಕೆಯ ಮಡಿಲಲ್ಲೇ ಬೆಳೆದೆ. ಆರ್ಥಿಕ ಸಂಕಷ್ಟದ ನಡುವೆಯೂ ಈ ಸಮಾಜದಲ್ಲಿ ಬಾಳಿ ಬದುಕಬೇಕಲ್ಲಾ ಅಂತ ಪಿಯುಸಿವರೆಗೂ ಓದಿದೆ. ಮೂರು ವರ್ಷಗಳ ಹಿಂದೆ ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿರುವ ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಸೇರಿಕೊಂಡೆ. ಇದೀಗ ಮದ್ದೂರು ಬಳಿ ಮತ್ತೆ ನನ್ನ ಬದುಕು ಹಳಿ ತಪ್ಪಿದೆ.
'ನನ್ನವರು ಅಂತ ಯಾರೂ ಇಲ್ಲ. ಈಗ ನೋಡಿದರೆ ಆ ದುರುಳರು ನನ್ನ ಮೇಲೆ ಹೀಗೆ ಮುಗಿಬಿದ್ದರು. ಇನ್ನು ನನಗೂ ಬದುಕುವ ಆಸೆಯಿಲ್ಲ' ಎಂದು ಆಶಾ ಕಣ್ಣೀರಾದಾಗ ಈ ನತದೃಷ್ಟೆಯನ್ನು ಸಂತೈಸುವುದು ಹೇಗಪ್ಪಾ ಎಂದು ಆಸ್ಪತ್ರೆಯಲ್ಲಿದ್ದವರು ಮುಖ ಮುಖ ನೋಡಿಕೊಂಡ.
ಆಶಾಳೊಂದಿಗೆ ಅಮಾನವೀಯವಾಗಿ ನಡೆದುಕೊಂಡ ಆರೋಪಿ ಕಾಮುಕರನ್ನು - ಮೈಸೂರಿನ ಕಲ್ಯಾಣಿನಗರದ ಅಕ್ಬರ್ (24), ಇಮ್ರಾನ್ (21), ಸುಬಾನ್ ಮತ್ತು ಅಹಮದ್ - ಮದ್ದೂರು ಜೆಎಂಎಫ್ ಸಿ ನ್ಯಾಯಾಧೀಶರಾದ ಕೆಎಂ ಶಂಕರ್ ಅವರು 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.












Click it and Unblock the Notifications