ಸದಾನಂದ ಪದಚ್ಯುತಿ: ಶೋಭಾ ಕರಂದ್ಲಾಜೆಯ ಪೂಜಾಫಲ
ಬೆಂಗಳೂರು, ಜುಲೈ 16: 343 ಬ್ರ್ಯಾಂಡಿನ ಸದಾನಂದರು ಸ್ಥಾನ ಕಳೆದುಕೊಂಡಿದ್ದು ಹೇಗೆ? 343 ಬ್ರ್ಯಾಂಡಿನ ಸದಾನಂದ ಪತನಕ್ಕೆ ಸಕಾರಣವೇನು? ಅದಕ್ಕೂ ಮುನ್ನ ಇದ್ಯಾವುದು 'ಸದಾನಂದ-343' ಬ್ರ್ಯಾಂಡ್?
ಏನಿಲ್ಲ ತೊಟ್ಲೂ ತೂಗಿ ಯಡ್ಡಿಯನ್ನೂ ಚಿವುಟುತ್ತಾ ಬಂದಿದ್ದ ಸದಾನಂದ ಗೌಡರು ರನ್ ಔಟ್ ಆಗುವ ಮುನ್ನ ಬರೋಬ್ಬರಿ 343 ದಿನ ಆಡಳಿತ ನಡೆಸಿದ್ದಾರೆ. ಅದಕ್ಕೇಯಾ ಈ 343 ಬ್ರ್ಯಾಂಡ್ ಸದಾನಂದ ಹುಟ್ಟುಕೊಂಡಿರುವುದು!
ಈ ಮಧ್ಯೆ ಇನ್ನೂ ಒಂದು ಸುದ್ದಿ ಹುಟ್ಟುಕೊಂಡಿದೆ, ಗೊತ್ತಾ? ಏನಪಾ ಅಂದರೆ ಸದಾನಂದರ ಪತನಕ್ಕೆ ಶೋಭಾ ಕರಂದ್ಲಾಜೆ ಅವರು ನಡೆಸಿದ ದೇವಪೂಜೆ ಕಾರಣ ಎಂದು ಪುತ್ತೂರಿನ ಜನ ಈಗ ಗುಟ್ಟಾಗಿ ಮಾತನಾಡಿಕೊಳ್ಳುತ್ತಿದ್ದಾರೆ. ಏಕೆಂದರೆ ಇವರಿಬ್ಬರ ತವರೂರಾದ ಪುತ್ತೂರಿನಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನವಿದೆ.
ಸದಾನಂದರು ತವರಿಗೆ ಬಂದಾಗಲೆಲ್ಲ ಈ ದೇವಸ್ಥಾನಕ್ಕೆ ತಪ್ಪದೇ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸುತ್ತಿದ್ದರು. ಒಂದು ತಿಂಗಳ ಹಿಂದೆಯೂ ಸದಾನಂದರು ಇದೇ ರೀತಿ ತವರಿಗೆ ಹೋಗಿ ಪೂಜೆ ನೆರವೇರಿಸಿದ್ದರು. ಅದಾದನಂತರ ಒಂದು ಕುತೂಹಲಕಾರಿ ಘಟನೆ ನಡೆದಿದೆ. ಹೀಗೆ ಸಕುಂಟುಂಬ ಪರಿವಾರ ಸಮೇತ ಅತ್ತ ಸದಾನಂದರು ಒಂದು ತಿಂಗಳ ಹಿಂದೆ ಶ್ರೀ ಮಹಾಲಿಂಗೇಶ್ವರ ಪೂಜೆ ನಡೆಸಿ, ರಾಜಧಾನಿಗೆ ಮರಳಿದ ಮೂರು ದಿನಗಳಿಗೆ ಸರಿಯಾಗಿ...
ಫಲಿಸಿತು ಪೂಜಾಫಲ: ಶೋಭಾ ಕರಂದ್ಲಾಜೆ ಮೇಡಂ ಸಹ ಇದೇ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಮತ್ತು ವಿಶೇಷ ಪೂಜೆಯನ್ನೂ ನಡೆಸಿದ್ದಾರೆ. ಯಾವ ಉದ್ದೇಶಕ್ಕಾಗಿ ಈ ಪೂಜೆ ಮಾಡಿಸಿದರು ಮತ್ತು ಏನನ್ನು ಬೇಡಿಕೊಂಡರು ಎಂಬುದು ಆಗ ಯಾರಿಗೂ ತಿಳಿದುಬಂದಿರಲಿಲ್ಲ. ಆದರೆ ಈಗ ಸದಾನಂದರ ಪದಚ್ಯುತಿಯಾದ ನಂತರ ಶೋಭಾ ಕರಂದ್ಲಾಜೆ ಅವರ ಪೂಜಾ ರಹಸ್ಯದ ಬಗ್ಗೆ ಪುತ್ತೂರಿನ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಕರಾರುವಕ್ಕಾಗಿ ಒಂದೇ ತಿಂಗಳಲ್ಲಿ ಫಲ ನೀಡುವಂತಹ ಯಾವ ಹರಕೆ/ಪೂಜೆಯನ್ನು ಶೋಭಾ ಕರಂದ್ಲಾಜೆ ಮಾಡಿಸಿರಬಹುದು ಎಂದು ಪುತ್ತೂರು ಜನ ತಮ್ಮಲ್ಲೇ ಕೇಳಿಕೊಳ್ಳುತ್ತಿದ್ದಾರೆ.
ಹಾಗೆ ನೋಡಿದರೆ ಕಳೆದ ಏಪ್ರಿಲ್ ನಲ್ಲಿ ಹುಟ್ಟೂರಾದ ದೇವರಗುಂಡ ಬೆಳ್ಳಿಪ್ಪಾಡಿ ತರವಾಡಿನ ಧರ್ಮದೈವ ರುದ್ರ ಚಾಮುಂಡಿ ಸದಾನಂದ ದಂಪತಿಯನ್ನು ಭರಪೂರವಾಗಿ ಹರಿಸಿತ್ತು - 'ದೇವರಗುಂಡ ಹೆಸರಿನಲ್ಲೇ ದೇವತ್ವವಿದೆ. ಬೆನ್ನಿಗೆ ರಾಜ ಮುದ್ರಿಕೆಯೂ ಇದೆ. ನನ್ನ ಅಭಯದಿಂದ ನಿನ್ನ ಸಂಸಾರ ಸುಖ-ಸಂತೋಷದಿಂದಿದೆ. ಉನ್ನತ ಅಧಿಕಾರವೂ ಪ್ರಾಪ್ತವಾಗಿದೆ. ಮುಂದೆಯೂ ನಿನ್ನ ನೆರಳಾಗಿ ಬೆನ್ನಿಗಿರುತ್ತೇನೆ. ಆಡಳಿತ ನಡೆಸುವಾಗ ಯಾವುದೇ ಭಯ, ಅತಂಕ ಬೇಡ. ದೈವದ ಅನುಗ್ರಹ ಸದಾ ಇದೆ. ಮುಂದಿನ ಅವಧಿಗೂ ನೀನೇ ಮುಖ್ಯಮಂತ್ರಿಯಾಗುವೆ' ಎಂದು ಸದಾನಂದರ ಉಪಸ್ಥಿತಿಯಲ್ಲಿ ದೈವ ಇಡೀ ಕುಟುಂಬಕ್ಕೆ ನುಡಿ ಕೊಟ್ಟಿತ್ತು.
ಅಂತಹುದರಲ್ಲಿ ಸದಾನಂದರು ಮುಂದಿನ ಬಾರಿಗೆ ಸಿಎಂ ಆಗುವುದು ಇರಲಿ ಹಾಲಿ ಅವಧಿಯಲ್ಲೇ ಸ್ಥಾನ ಕಳೆದುಕೊಂಡಿದ್ದಾರೆ. ಧರ್ಮದೈವ ರುದ್ರ ಚಾಮುಂಡಿ ಆಶೀರ್ವಾದವನ್ನೂ ಶೂನ್ಯವಾಗಿಸುವ 'ಶಕ್ತಿ'ಮಾತೆಯ ಪೂಜೆ ಅದಿನ್ನೆಂಥಹುದು ಎಂದು ಜನ ತಮ್ಮ ತಮ್ಮೊಳಗೇ ಕೇಳುತ್ತಿದ್ದಾರೆ.