ಐಐಎಂಬಿಯಿಂದ ಮಹಿಳಾ ಸಬಲೀಕರಣಕ್ಕಾಗಿ i-WIL
ಐಐಎಂ-ಬೆಂಗಳೂರಿನ ಸೆಂಟರ್ ಫಾರ್ ಪಬ್ಲಿಕ್ ಪಾಲಿಸಿ ಮತ್ತು ನವದೆಹಲಿಯ ಸೆಂಟರ್ ಫಾರ್ ಸೋಶಿಯಲ್ ರಿಸರ್ಚ್ (ಸಿಎಸ್ಆರ್) ಇವುಗಳ ಕಲ್ಪನೆಯ ಕೂಸಾಗಿರುವ ಈ ಕಾರ್ಯಕ್ರಮವನ್ನು ರಾಜಸ್ತಾನದ ರಾಜ್ಯಪಾಲೆಯಾಗಿರುವ ಮಾರ್ಗರೆಟ್ ಆಳ್ವಾ ಅವರು ದೀಪ ಬೆಳಗುವ ಮುಖಾಂತರ ವಿಧ್ಯುಕ್ತವಾಗಿ ಉದ್ಘಾಟಿಸಿದರು.
ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ಕ್ರಿಯಾಶೀಲರಾಗಿರುವ 30 ಮಹಿಳೆಯರು 10 ದಿನಗಳ ಈ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ನೊಂದಾಯಿಸಿಕೊಂಡಿದ್ದಾರೆ. ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ ಮತ್ತು ಬಯೋಕಾನ್ ಚೇರ್ ವುಮನ್ ಆಗಿರುವ ಕಿರಣ್ ಮಜುಂದಾರ್ ಷಾ ಅವರಿಂದ ಸ್ಕಾಲರ್ಶಿಪ್ ಕೂಡ ನೀಡಲಾಗುತ್ತಿದೆ.
ಕಾರ್ಯಕ್ರಮವನ್ನು ಉದ್ಘಾಟಿಸಿದ ನಂತರ ಮಾತನಾಡಿದ ಮಾರ್ಗರೆಟ್ ಆಳ್ವಾ ಅವರು, ರಾಜಕೀಯವನ್ನೇ ವೃತ್ತಿಯಾಗಿ ಸ್ವೀಕರಿಸಿ ಯಶಸ್ಸು ಕಂಡಿರುವ ತಮ್ಮದೇ ಉದಾಹರಣೆ ನೀಡಿದರು ಮತ್ತು ರಾಜಕೀಯದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಬರಬೇಕು ಎಂದು ಆಶಿಸಿದರು. ಈ ಕಾರ್ಯಕ್ರಮದಲ್ಲಿ ರಾಜಕೀಯ ನೈಪುಣ್ಯತೆ, ವೈಯಕ್ತಿಕ ಅಭಿವೃದ್ಧಿ, ಲಿಂಗ ಅಭಿವ್ಯಕ್ತಿ ಮತ್ತು ಸಿದ್ಧಾಂತದ ಬಗ್ಗೆ ತರಬೇತಿ ನೀಡುತ್ತಿರುವ ಬಗ್ಗೆ ಶ್ಲಾಘಿಸಿದರು.
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅಂಥವರೊಂದಿಗೆ ಕೆಲಸ ಮಾಡಿರುವ ಆಳ್ವಾ ಅವರು, ಐ-ವಿಲ್ ಮುಖಾಂತರ ರಾಜ್ಯ ಮತ್ತು ಪಕ್ಷಭೇದ ತೊರೆದು ಕೆಲಸ ಮಾಡುವ ಅಪೂರ್ವ ಅವಕಾಶ ಒದಗಿಬಂದಿದೆ, ಇದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ನಾವು ಮುಂದೆ ಮಾಡಬೇಕಾದ ಕೆಲಸ ಬೆಟ್ಟದಷ್ಟಿದೆ ಎಂದು ನುಡಿದರು.
ಈ ಕಾರ್ಯಕ್ರಮದ ರೂವಾರಿಯಾಗಿರುವ, ಐಐಎಂ-ಬಿ ಪ್ರೊಫೆಸರ್ ಆಗಿರುವ ರಾಜೀವ್ ಗೌಡ ಅವರು ಈ ಸಂದರ್ಭದಲ್ಲಿ ಮಾತನಾಡುತ್ತ, ಸಮಾಜ ಸೇವೆಗೆ ತುಡಿಯುವಂಥ, ನಿಸ್ಸಹಾಯಕರ ಬಗ್ಗೆ ಅನುಕಂಪ, ಆಡಳಿತದಲ್ಲಿ ವೃತ್ತಿಪರತೆ ತೋರುವಂಥ, ದೂರದೃಷ್ಟಿಯಿರುವಂತಹ ಮೌಲ್ಯಯುತ ನಾಯಕರ ಅಗತ್ಯ ಇಂದಿನ ರಾಜಕಾರಣದಲ್ಲಿ ತುಂಬ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಈ ಕಾರ್ಯಕ್ರಮ ಭದ್ರ ಅಡಿಪಾಯ ಹಾಕಿ, ಬದಲಾವಣೆಯ ಹರಿಕಾರರಾಗಲು ಮಹಿಳೆಯರಿಗೆ ಅವಕಾಶ ಮಾಡಿಕೊಡುತ್ತದೆ ಎಂದರು.
ವಿಶ್ವಸಂಸ್ಥೆ ಮಹಿಳಾ ಘಟಕದ ಸೂರಜ್ ಕುಮಾರ್, ಸಿಎಸ್ಆರ್ ನಿರ್ದೇಶಕಿ ಡಾ. ರಂಜನಾ ಕುಮಾರಿ, ವಿಶ್ವಸಂಸ್ಥೆ ಅಭಿವೃದ್ಧಿ ಕಾರ್ಯಕ್ರಮದ ಸುಮೀತಾ ಬ್ಯಾನರ್ಜಿ ಮುಂತಾದವರು ಮಾತನಾಡಿ ತಮ್ಮ ಸಂಸ್ಥೆಗಳು ಮಹಿಳಾ ಸಬಲೀಕರಣದ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.