ಬನ್ನೇರುಘಟ್ಟ ಅರಣ್ಯದಲ್ಲಿ ಚಾರಣಕ್ಕೆ ತೆರಳಿದ್ದ ಟೆಕ್ಕಿ ನಾಪತ್ತೆ
ನಾಪತ್ತೆಯಾಗಿರುವ ಸಾಫ್ಟ್ ವೇರ್ ಇಂಜಿನಿಯರನ್ನು ಸಾತ್ವಿಕ್ (24) ಎಂದು ಗುರುತಿಸಲಾಗಿದೆ. ಆತ ಬೆಂಗಳೂರಿನ ಪಾಂಡುರಂಗ ನಗರದ ನಿವಾಸಿಯಾಗಿದ್ದು, ನ್ಯೂ ಸಿಗ್ಮಾ ಸಾಫ್ಟ್ ವೇರ್ ಕಂಪನಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರಾಗಿ ಕೆಲಸ ಮಾಡುತ್ತಿದ್ದಾರೆ. ಆತನೊಂದಿಗೆ ಚಾರಣಕ್ಕೆಂದು ತೆರಳಿದ್ದ ಆಶಿಶ್ ಮತ್ತು ಅನುಮಪ್ ಎಂಬುವವರು ನಗರಕ್ಕೆ ಮರಳಿದ್ದಾರೆ.
ಪೊಲೀಸರ ಪ್ರಕಾರ, ಆಶಿಶ್ ಮತ್ತು ಅನುಮಪ್ ಎಂಬಿಬ್ಬರ ಜೊತೆ ಸಾತ್ವಿಕ್ ಆನೇಕಲ್ ವ್ಯಾಪ್ತಿಯಲ್ಲಿ ಬರುವ ಬನ್ನೇರುಘಟ್ಟ ಅರಣ್ಯದಲ್ಲಿ ಚಾರಣಕ್ಕೆಂದು ತೆರಳಿದ್ದರು. ಅಲ್ಲಿ ದೇವಸ್ಥಾನದ ಬಂಡೆ ಎಂಬಲ್ಲಿ ಗಾಡಿ ನಿಲ್ಲಿಸಿ ಚಾರಣ ಕೈಗೊಂಡು ಮರಳಿ ಬರುವಾಗ ದಾರಿ ತಪ್ಪಿದ್ದಾರೆ. ಅವರು ಅರಣ್ಯ ಇಲಾಖೆಯಿಂದ ಯಾವುದೇ ಅನುಮತಿ ಪಡೆದೆ ತೆರಳಿದ್ದಾರೆ. ಚಾರಣಕ್ಕೆ ಈ ಅರಣ್ಯದಲ್ಲಿ ಅನುಮತಿ ಇದ್ದರೂ ಅನುಮತಿ ಪತ್ರ ಪಡೆದೇ ಚಾರಣಕ್ಕೆ ತೆರಳಬೇಕಾಗಿರುವುದು ಕಡ್ಡಾಯ.
ಸಂಜೆ ನಗರಕ್ಕೆ ಮರಳಿದ ಆಶಿಶ್ ಮತ್ತು ಅನುಮಪ್ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಸಾತ್ವಿಕ್ ಕಾಣೆಯಾಗಿರುವ ಬಗ್ಗೆ ದೂರು ಸಲ್ಲಿಸಿದ್ದಾರೆ. ಪೊಲೀಸರು ಅವರಿಬ್ಬರ ವಿಚಾರಣೆ ನಡೆಸುತ್ತಿದ್ದಾರೆ. ಆಶಿಶ್ ಮತ್ತು ಅನುಪಮ್ ಕೂಡ ಗಾಯಗೊಂಡಿದ್ದರೆಂದು ತಿಳಿದುಬಂದಿದೆ. ಈ ಅರಣ್ಯ ಅಂತಹ ದೊಡ್ಡ ಅರಣ್ಯವಲ್ಲದಿದ್ದರೂ ಸಾತ್ವಿಕ್ ಕಾಣೆಯಾಗಿರುವ ಬಗ್ಗೆ ಜೊತೆಗಿರುವ ಸ್ನೇಹಿತರ ಬಗ್ಗೆ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಸಾತ್ವಿಕ್ಗಾಗಿ ಅರಣ್ಯ ಸಿಬ್ಬಂದಿಗಳು, ಪೊಲೀಸರು ಮತ್ತು ಸ್ಥಳೀಯರು ಕೂಡ ತೀವ್ರವಾದ ಹುಡುಕಾಟ ನಡೆಸಿದ್ದಾರೆ.
ವಾರಾಂತ್ಯ ಬರುತ್ತಿದ್ದಂತೆಯೆ ಯುವಕರು ಪ್ರವಾಸಿ ತಾಣಗಳಿಗೆ ಅಥವಾ ಚಾರಣಗಳಿಗೆ ಹೋಗುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಅದರಲ್ಲೂ ಸಾಫ್ಟ್ ವೇರ್ ಇಂಜಿನಿಯರುಗಳಲ್ಲಿ ಇದು ಹೆಚ್ಚು. ಆದರೆ, ಚಾರಣಕ್ಕೆಂದು ತೆರಳುವಾಗ ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳದಿರುವುದು ಮಾರಕವಾಗಿ ಪರಿಣಮಿಸುತ್ತಿರುವುದು ಹೆಚ್ಚಾಗುತ್ತಿದೆ. ಇಚ್ಚೀಚೆಗೆ ಸಕಲೇಶಪುರ ವ್ಯಾಪ್ತಿಯಲ್ಲಿ ಚಾರಣಕ್ಕೆಂದು ತೆರಳಿದ್ದ ಬಿಎಂಎಸ್ ಕಾಲೇಜಿನ ನವೀನ್ ಎಂಬಾತ ಸಾವಿಗೀಡಾಗಿದ್ದ.