ಸದಾನಂದ ಗೌಡ ರಾಜೀನಾಮೆ ಅಂಗೀಕರಿಸಿದ ರಾಜ್ಯಪಾಲ

ಬುಧವಾರ(ಜು.11) ಬೆಳಗ್ಗೆ ತಮ್ಮ ಅಧಿಕೃತ ನಿವಾಸ 'ಅನುಗ್ರಹ' ದಿಂದ ರಾಜಭವನಕ್ಕೆ ತೆರಳುವ ಮುನ್ನ ಬಸವೇಶ್ವರ ಪ್ರತಿಮೆಗೆ ಹಾಗೂ ವಿಧಾನ ಸೌಧ ಬಳಿ ಇರುವ ದೇವರಾಜ ಅರಸು ಹಾಗೂ ಎಸ್ ನಿಜಲಿಂಗಪ್ಪ ಅವರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದರು. ನಂತರ 11.50 ರ ಸುಮಾರಿಗೆ ರಾಜ್ಯಪಾಲ ಎಚ್ ಆರ್ ಭಾರದ್ವಾಜ್ ಅವರನ್ನು ಭೇಟಿ ಮಾಡಿದ ಸದಾನಂದ ಗೌಡರು ತಮ್ಮ ರಾಜೀನಾಮೆಯನ್ನು ಸಲ್ಲಿಸಿದರು.
ಮುಂದುವರೆದ ಒಕ್ಕಲಿಗರ ಪ್ರತಿಭಟನೆ: ಸದಾನಂದ ಗೌಡರ ರಾಜೀನಾಮೆ ವಿರೋಧಿಸಿ ಒಕ್ಕಲಿಗರು ನಡೆಸುತ್ತಿರುವ ಪ್ರತಿಭಟನೆ ಬುಧವಾರ ಕೂಡಾ ಮುಂದುವರೆದಿದೆ. ಮೈಸೂರು, ಬೆಂಗಳೂರು, ಮಂಗಳೂರು, ಸುಳ್ಯ ನಂತರ ಮಂಡ್ಯದಲ್ಲಿ ಭಾರಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಬುಧವಾರ ಮಂಡ್ಯ ಬಂದ್ ಆಚರಿಸಲಾಗುತ್ತಿದ್ದು, ಮಧ್ಯಾಹ್ನದ ವರೆಗೂ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ. ಸದಾನಂದ ಗೌಡರನ್ನು ಬೆಂಬಲಿಸಿ ಯುವಕರು ಬೈಕ್ ಗಳಲ್ಲಿ ಮೆರವಣಿಗೆ ನಡೆಸಿದರು. ವಿವಿಧ ಒಕ್ಕಲಿಗರ ಸಂಘಗಳು ರಸ್ತೆ ತಡೆ ನಡೆಸಿ ಬೆಂಬಲ ವ್ಯಕ್ತಪಡಿಸಿದರು.
ಸದಾನಂದ ಗೌಡರು ರಾಜೀನಾಮೆ ಸಲ್ಲಿಸಲು ಹೋಗುವ ಸಮಯ ಅರಿತ ಕೆಲ ಅಭಿಮಾನಿಗಳು ಅವರ ಕಾರಿಗೆ ಅಡ್ಡವಾಗಿ ಮಲಗಿಕೊಂಡು ರಾಜೀನಾಮೆ ನೀಡಬಾರದು ಎಂದು ಒತ್ತಾಯಿಸಿದ ಘಟನೆಯೂ ಜರುಗಿತು.
ಶೆಟ್ಟರ್ ಹಾಗೂ ರಾಜ್ಯಪಾಲರ ಭೇಟಿ: ನೂತನ ಶಾಸಕಾಂಗ ನಾಯಕರಾಗಿ ಹೊರಹೊಮ್ಮಿರುವ ಉತ್ತರ ಕರ್ನಾಟಕದ ಹಿರಿಯ ನಾಯಕ ಜಗದೀಶ್ ಶೆಟ್ಟರ್ ಅವರು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರನ್ನು ಬುಧವಾರ ಭೇಟಿ ಮಾಡಿದ್ದಾರೆ.
ಅಗತ್ಯ ಶಾಸಕರ ಬೆಂಬಲ ಇರುವುದರಿಂದ ನಾಳೆ ನೂತನ ಸರ್ಕಾರ ರಚನೆಗೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಜಗದೀಶ್ ಶೆಟ್ಟರ್ ಅವರ ಜೊತೆ 33 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಆದರೆ, ಪ್ರಮಾಣ ವಚನ ಸ್ವೀಕರಿಸಲಿರುವ ಶಾಸಕರ ಪಟ್ಟಿ ಸಂಜೆ ವೇಳೆಗೆ ಸಿದ್ಧವಾಗಲಿದ್ದು, ಇನ್ನೊಂದು ಸುತ್ತು ಪಕ್ಷದ ಹೈಕಮಾಂಡ್ ಜೊತೆ ಚರ್ಚಿಸಲಿದ್ದಾರೆ. ವರಿಷ್ಠರಿಂದ ಅನುಮೋದನೆ ಸಿಕ್ಕ ಬಳಿಕ ಕಾರ್ಯಕ್ರಮ ವಿವರ ತಿಳಿಸುವುದಾಗಿ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಹೇಳಿದರು.












Click it and Unblock the Notifications