ಒಕ್ಕಲಿಗ ಸಚಿವರ ಬಲಿಗೆ ಕಾದಿರುವ ಯಡಿಯೂರಪ್ಪ

ಯಡಿಯೂರಪ್ಪ ಅವರ ಈವರೆಗಿನ ಬೇಡಿಕೆಗಳಿಗೆ ಮಣಿದಿರುವ ಹೈಕಮಾಂಡ್, ಸದಾನಂದ ಗೌಡರನ್ನು ಕೆಳಗಿಳಿಸಿ ಜಗದೀಶ್ ಶೆಟ್ಟರ್ ಗೆ ಪಟ್ಟ ಕಟ್ಟಲು ಮುಂದಾಗಿದೆ. ಆದರೆ, ಯಡಿಯೂರಪ್ಪಗೆ ಇನ್ನೂ ದಾಹ ಇಂಗಿಲ್ಲ, ನಗುವಿನ ಮಾತಿರಲಿ..ಸಿಟ್ಟು ಇನ್ನೂ ಆರಿಲ್ಲ.
ಹೊಸ ಸಂಪುಟದಲ್ಲಿ ತನ್ನ ಆಪ್ತರಿಗೆ ಕನಿಷ್ಠ 20 ಸಚಿವರ ಸ್ಥಾನ ಸಿಗಬೇಕು. ಅದರಲ್ಲೂ ಒಕ್ಕಲಿಗ ಸಚಿವರಾದ ಸಿಪಿ ಯೋಗೀಶ್ವರ್ ಹಾಗೂ ಬಿಎನ್ ಬಚ್ಚೇಗೌಡರನ್ನು ಕ್ಯಾಬಿನೆಟ್ ನಿಂದ ಹೊರ ಹಾಕಬೇಕು ಎಂಬುದು ಯಡಿಯೂರಪ್ಪ ಅವರ ಆಗ್ರಹ. ಇದಕ್ಕೆ ಕಾರಣವೂ ಇದೆ. ತಮ್ಮ ಮಾತು ಕೇಳದೆ ತಮ್ಮಿಷ್ಟದ್ದಂತೆ ರಾಜ್ಯಭಾರ ಮಾಡಿದ ಸದಾನಂದಗೌಡರ ಮೇಲೆ ಸೇಡು ತೀರಿಸಿಕೊಂಡ ಯಡಿಯೂರಪ್ಪ ಈಗ ಒಕ್ಕಲಿಗ ಸಚಿವರ ಮೇಲೆ ಬಿದ್ದಿದೆ.
ಸಿಪಿ ಯೋಗೀಶ್ವರ್ ಹಾಗೂ ಬಚ್ಚೇಗೌಡ ಅವರು ತಮ್ಮ ವಿರುದ್ಧ ಮನಬಂದಂತೆ ಹೇಳಿಕೆ ನೀಡುತ್ತಾ ನಿಂದಿಸಿರುವುದು ಯಡಿಯೂರಪ್ಪ ಅವರನ್ನು ಕೆರಳಿಸಿದೆ. ಹೀಗಾಗಿ ಈ ಇಬ್ಬರ ತಲೆದಂಡವಾದರೆ ಮಾತ್ರ ಯಡಿಯೂರಪ್ಪ ಅವರಿಗೆ ಸಮಾಧಾನ ಸಿಗಲಿದೆ ಎಂದು ಯಡಿಯೂರಪ್ಪ ಅವರ ಆಪ್ತರು ಹೇಳಿದ್ದಾರೆ.
ಡಿಸಿಎಂ ಹುದ್ದೆ ಕೈತಪ್ಪಿದರೂ ಕ್ಯಾಬಿನೆಟ್ ನಲ್ಲಿ ತಮ್ಮ ಬಣದವರಿಗೆ ಸಿಂಹಪಾಲು ಸಿಗಬೇಕು ಎಂದು ಯಡಿಯೂರಪ್ಪ ಪಟ್ಟು ಹಿಡಿದಿದ್ದಾರೆ. ಆದರೆ, ಬೆಂಗಳೂರು ಹಾಗೂ ಹಳೆ ಮೈಸೂರು ಕ್ಷೇತ್ರಗಳಲ್ಲಿ ಒಕ್ಕಲಿಗರ ಮತಗಳನ್ನು ಕಳೆದುಕೊಳ್ಳುವ ಭೀತಿ ಎದುರಿಸುತ್ತಿರುವ ಬಿಜೆಪಿಗೆ ಒಕ್ಕಲಿಗ ಸಚಿವರನ್ನು ಕೈ ಬಿಡುವುದು ಕಷ್ಟಕರ ಎನ್ನಲಾಗಿದೆ. ಹೀಗಾಗಿ ಒಕ್ಕಲಿಗರ ಸಚಿವರ ಜೊತೆಗೆ ಯಡಿಯೂರಪ್ಪ ಬಣದ ಪ್ರಮುಖ ಸಚಿವರಾದ ರೇಣುಕಾಚಾರ್ಯ ಅವರಿಗೆ ಕೊಕ್ ನೀಡುವ ತಂತ್ರವನ್ನು ಹೆಣೆಯಲಾಗಿದೆ.
ಇದರ ಜೊತೆಗೆ ಸದಾನಂದಗೌಡರನ್ನು ರಾಜ್ಯ ರಾಜಕಾರಣದಿಂದ ದೂರ ಇಡುವಂತೆ ಯಡಿಯೂರಪ್ಪ ಬೇಡಿಕೆ ಮುಂದಿಟ್ಟಿದ್ದಾರೆ. ಅದರಲ್ಲೂ ಸದಾನಂದ ಗೌಡರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿಸಿದರೆ ಮುಂದಿನ ಚುನಾವಣೆಯಲ್ಲಿ ಯಡಿಯೂರಪ್ಪ ಬಣಕ್ಕೆ ಟಿಕೆಟ್ ಖೋತಾ ಆಗುವ ಸಂಭವವೇ ಹೆಚ್ಚು ಎಂಬ ಚಿಂತೆ ಯಡಿಯೂರಪ್ಪ ಅವರನ್ನು ಕಾಡುತ್ತಿದೆ. ಹೀಗಾಗಿ ಸದಾನಂದ ಗೌಡರನ್ನು ಪ್ರಧಾನ ಕಾರ್ಯದರ್ಶಿ ಅಥವಾ ರಾಜ್ಯಸಭಾ ಸದಸ್ಯರನ್ನಾಗಿಸಿದರೆ ನಮ್ಮ ಅಭ್ಯಂತರವೇನೂ ಇಲ್ಲ ಎಂಬ ಸಂದೇಶವನ್ನು ಯಡಿಯೂರಪ್ಪ ರವಾನಿಸಿದ್ದಾರೆ.
ಸದಾನಂದ ಗೌಡರು ಸಂಭಾವ್ಯ ಪಟ್ಟಿಯನ್ನು ಸಿದ್ಧಪಡಿಸಿ ಹೈಕಮಾಂಡ್ ಗೆ ನೀಡಿದ್ದರು. ಹೊಸಬರಿಗೆ ಸಂಪುಟದಲ್ಲಿ ಜಾಗ ನೀಡುವುದು ಸದಾನಂದ ಗೌಡರ ಪಟ್ಟಿಯ ಮುಖ್ಯ ಉದ್ದೇಶವಾಗಿತ್ತು. ಆದರೆ, ಶೆಟ್ಟರ್ ಎಷ್ಟರಮಟ್ಟಿಗೆ ಹೊಸಬರಿಗೆ ಸ್ಥಾನ ನೀಡುತ್ತಾರೆ ನೋಡಬೇಕಿದೆ.












Click it and Unblock the Notifications