ಪ್ರಧಾನಿ ಮನಮೋಹನ್ ಸಿಂಗ್ Underachiever ಅಂತೆ
ನ್ಯೂಯಾರ್ಕ್, ಜುಲೈ 9: ಸರಿಸುಮಾರು 2 ದಶಕಗಳ ಹಿಂದೆ ಭಾರತದ ಆರ್ಥ ವ್ಯವಸ್ಥೆಯಲ್ಲಿ ಉದಾರೀಕರಣಕ್ಕೆ ಶ್ರೀಕಾರ ಹಾಕಿದ ಇಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ರಾಜಕೀಯ ಕಾರಣಗಳಿಂದಾಗಿ ವಿರೋಧ ಪಕ್ಷಗಳು ಏನೇನೋ ಬಿರುದು ಬಾವಲಿಗಳನ್ನು ದಯಪಾಲಿಸಿವೆ. ಆದರೆ ಅದೇ ಪ್ರಧಾನಿಯನ್ನುಅಮೆರಿಕದ ಪ್ರತಿಷ್ಠಿತ 'ಟೈಮ್ಸ್' ಪತ್ರಿಕೆಯು ಇದೀಗ 'ಕಳಪೆ ಸಾಧಕ' (underachiever) ಎಂದು ಬಿಟ್ಟಿದೆ.
ಅಷ್ಟೇ ಅಲ್ಲ. 'Time'-tested ಪ್ರಧಾನಿ ಸಿಂಗ್ ಈಗ spent-force. ಆದ್ದರಿಂದ ಅವರ 'ಕೈ' ಬಿಟ್ಟು ಮತ್ತೆ ಹೊಸತನಕ್ಕೆ ತೆರೆದುಕೊಳ್ಳುವುದು ಭಾರತಕ್ಕೆ ಅನಿವಾರ್ಯವ ಎಂದೂ ಕಿವಿಮಾತು ಹೇಳಿದೆ. ಸಾಕ್ಷಾತ್ ಪ್ರಧಾನಿಯನ್ನೇ ದೊಡ್ಡಣ್ಣ ಹೀಗೆಂದಿರುವುದರ ಬಗ್ಗೆ ಭಾರತೀಯರು ಬೇಸರಿಸಿಕೊಳ್ಳಬೇಕೋ ಅಥವಾ ಅದದೇ ರಾಜಕೀಯ ಕಾರಣಗಳಿಂದಾಗಿ underachiever ಅನ್ನಿಸಿಕೊಂಡು ಭಾರತ ತಲೆತಗ್ಗಿಸುವಂತೆ ಮಾಡಿದರು ಎಂದು ಜರಿಯಬೇಕೋ ತಿಳಿಯದಾಗಿದೆ.
ಮುಖ್ಯವಾಗಿ, ಯಾವುದೇ ದೃಢ ನಿರ್ಧಾರ ಕೈಗೊಳ್ಳದ ಪ್ರಧಾನಿ ಸಿಂಗ್ ಅವರ ಅಸಾಮರ್ಥ್ಯದಿಂದಾಗಿ ದೇಶದ ಆರ್ಥಿಕ ಪ್ರಗತಿಗೆ ಹಿನ್ನಡೆಯಾಗಿದೆ ಎಂಬುದು ಪತ್ರಿಕೆಯ ಸ್ಪಷ್ಟ ವಿಶ್ಲೇಷಣೆ. 79 ವರ್ಷದ ಮನಮೋಹನ್ ಸಿಂಗ್ ಕುರಿತಾದ ಮುಖಪುಟ ಲೇಖನ ಹೊತ್ತಿರುವ ಟೈಮ್ಸ್ನ ಏಷ್ಯಾ ಆವೃತ್ತಿ ಸಂಚಿಕೆಯಲ್ಲಿ ಮನಮೋಹನ್ ಸಿಂಗ್ ಚಿತ್ರದ ಜತೆಗೆ 'ಕಳಪೆ ಸಾಧಕ- ಭಾರತಕ್ಕೆ ಪುನಶ್ಚೇತನದ ಅಗತ್ಯವಿದೆ' ಎನ್ನುವ ಅಡಿಬರಹವಿದೆ.
'ಎ ಮ್ಯಾನ್ ಇನ್ ಶ್ಯಾಡೊ' ಎನ್ನುವ ತಲೆಬರಹದಡಿಯಲ್ಲಿ ಪ್ರಕಟವಾಗಿರುವ ಅಗ್ರಲೇಖನದಲ್ಲಿ ಮನಮೋಹನ್ ಪ್ರಧಾನಮಂತ್ರಿ ಹುದ್ದೆಗೆ ನ್ಯಾಯ ಸಲ್ಲಿಸಿದ್ದಾರೆಯೇ? ಎನ್ನುವ ಪ್ರಶ್ನೆಯಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಆರ್ಥಿಕ ಹಿಂಜರಿತ, ಬೃಹತ್ ಹಣಕಾಸು ಕೊರತೆ, ರೂಪಾಯಿ ಕುಸಿತ ಮುಂತಾದ ಜ್ವಲಂತ ಸಮಸ್ಯೆಗಳನ್ನು ಎದುರಿಸುವ ಬದಲಾಗಿ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ ಹಾಗೂ ದೇಶಕ್ಕೆ ಆರ್ಥಿಕ ದಿಶೆಯನ್ನು ತೋರಿಸುವಲ್ಲಿ ವಿಫಲವಾಗಿದೆ ಎಂದು ಲೇಖನದಲ್ಲಿ ಉಲ್ಲೇಖಿಸಲಾಗಿದೆ.
ದೇಶ ಮತ್ತು ವಿದೇಶಗಳ ಹೂಡಿಕೆದಾರರು ಹಿಂಜರಿಯುತ್ತಿದ್ದಾರೆ. ಮತದಾರರಿಗೂ ಸರಕಾರದ ಮೇಲೆ ವಿಶ್ವಾಸ ಇಲ್ಲವಾಗುತ್ತಿದೆ. ಹಣದುಬ್ಬರ ಮತ್ತು ಹಗರಣಗಳಿಂದಾಗಿ ಸರಕಾರದ ವಿಶ್ವಾಸಾರ್ಹತೆ ನಷ್ಟವಾಗಿದೆ ಎಂದು ಲೇಖನದಲ್ಲಿ ಹೇಳಲಾಗಿದೆ.
ಮನಮೋಹನ್ ಸಿಂಗ್ ಪತನದತ್ತ ಬೊಟ್ಟು ಮಾಡಿ ತೋರಿಸಿರುವ ಲೇಖನ ಕಳೆದ ಮೂರು ವರ್ಷಗಳಲ್ಲಿ ಅವರು ಸಂಪಾದಿಸಿದ್ದ ವಿಶ್ವಾಸವೆಲ್ಲ ನಷ್ಟವಾಗಿವೆ. ತನ್ನ ಸಚಿವರನ್ನು ನಿಯಂತ್ರಿಸುವ ಸಾಮರ್ಥ್ಯವಿಲ್ಲದ ಪ್ರಧಾನಮಂತ್ರಿಯಂತೆ ಅವರು ಕಾಣಿಸುತ್ತಿದ್ದಾರೆ. ಪ್ರಸ್ತುತ ಹಣಕಾಸು ಖಾತೆಯನ್ನು ಕೂಡ ಅವರು ತನ್ನಲ್ಲೇ ಇಟ್ಟುಕೊಂಡಿದ್ದರೂ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಇಲ್ಲದಿರುವುದರಿಂದ ಯಾವುದೇ ಪ್ರಯೋಜನವಾಗುವ ಸಾಧ್ಯತೆಯಿಲ್ಲ. ಉದಾರೀಕರಣ ಎನ್ನುವುದು ನಿರಂತರವಾಗಿ ಸುಧಾರಣೆಗಳನ್ನು ಬಯಸುವ ಪ್ರಕ್ರಿಯೆ ಎಂದು ಚಾಟಿಯೇಟು ಬೀಸಿದೆ.
'ಟೈಮ್ಸ್' ವ್ಯಾಖ್ಯಾನದಿಂದ ಕೆರಳಿ ಕೆಂಡವಾಗಿರುವ ಕಾಂಗ್ರೆಸ್: 'ಟೈಮ್ಸ್' ಪತ್ರಿಕೆ ವ್ಯಾಖ್ಯಾನದಿಂದ ಕೆರಳಿ ಕೆಂಡವಾಗಿರುವ ಕಾಂಗ್ರೆಸ್, ಪತ್ರಿಕೆಯಲ್ಲಿನ ಲೇಖನಕ್ಕೆ ತೀವ್ರ ಆಕ್ಷಾಪ ವ್ಯಕ್ತಪಡಿಸಿದೆ. 'ಏನಂದುಕೊಂಡುಬಿಟ್ಟಿರಿ. ಪ್ರಧಾನಿ ಸಿಂಗ್ ನೇತೃತ್ವದ ಯುಪಿಎ ಸರಕಾರ ಏನೆಲ್ಲ ಮಾಡಿದೆ ಗೊತ್ತಾ? ರಾಜಕೀಯ ಸ್ಥಿರತೆ, ಸಾಮಾಜಿಕ ಸಾಮರಸ್ಯ, ಆಂತರಿಕ ಒಗ್ಗಟ್ಟು, ಆರ್ಥಿಕ ಪ್ರಗತಿ ಕಾಯ್ದುಕೊಂಡಿದ್ದಾರೆ. ಮತ್ತು ವಿಶ್ವ ಮಟ್ಟದ ವ್ಯವಹಾರಗಳಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ, ಗೊತ್ತಾ?' ಎಂದು ಪಕ್ಷದ ವಕ್ತಾರ ಮನೀಶ್ ತಿವಾರಿ ಅವರು ಪತ್ರಿಕೆಗೆ ಝಾಡಿಸಿದ್ದಾರೆ.