ಕೊಟ್ಟಿಗೆಯಲ್ಲಿ ಕಾಮಮೃಗಗಳಿಗೆ ಆಹಾರವಾದ ಅಬಲೆ

20 ವರ್ಷದ ಮಹಿಳೆಯನ್ನು ಮೂರು ವರ್ಷಗಳ ಕಾಲ ಅತ್ತೆ ಮನೆಯವರು ಕೊಟ್ಟಿಗೆಯಲ್ಲಿ ಕೂಡಿ ಹಾಕಿದ್ದಲ್ಲದೆ ಆಕೆ ಪತಿ, ಸಂಬಂಧಿಕರು ಹಾಗೂ ನೆರೆ ಮನೆಯ ಕಾಮುಕರು ಆಕೆಯನ್ನು ಬಲಾತ್ಕರಿಸಿದ್ದಾರೆ. ಸುಮಾರು 36 ತಿಂಗಳುಗಳ ಕಾಲ ಕಾಮಪಿಶಾಚಿಗಳ ಕೂಪದಲ್ಲಿ ಸಿಲುಕಿ ನಲುಗಿದ ಮಹಿಳೆ ತವರಿಗೆ ಕಾಲಿಡದಂತೆ ಮಾಡಲಾಗಿತ್ತು. ಪತಿರಾಯ ತನಗೆ ಖರ್ಚಿಗೆ ಕಾಸಿಲ್ಲ ಎಂದು ಆಕೆಯನ್ನು 50,000 ಸಾವಿರ ರುಗಳಿಗೆ ಮಾರಾಟ ಮಾಡಿದ ಘಟನೆ ಕೂಡಾ ನಡೆದಿದೆ.
ತವರಿನಲ್ಲಿ ಕಿತ್ತು ತಿನ್ನುವ ಬಡತನವಿದ್ದು, ತನ್ನ ಪೋಷಕರು ವರದಕ್ಷಿಣೆ ನೀಡಲು ಸಾಧ್ಯವಿಲ್ಲ, ಹೀಗಾಗಿ ಏನೇ ಕಷ್ಟ ಬಂದರೂ ನಾನೇ ಸಹಿಸಬೇಕು ಎಂದು ನಿರ್ಧರಿಸಿದ್ದೆ ಎಂದು ನೊಂದ ಮಹಿಳೆ ತನ್ನ ಕತೆಯನ್ನು ಪೊಲೀಸರ ಮುಂದೆ ಹೇಳಿಕೊಂಡಿದ್ದಾಳೆ. ಮೂರು ವರ್ಷಗಳಲ್ಲಿ ಒಮ್ಮೆ ಕೂಡಾ ಹೊರಗಡೆ ತಿರುಗಾಡಲು ಬಿಟ್ಟಿರಲಿಲ್ಲ. ಕಷ್ಟ ಹೇಳಿಕೊಳ್ಳಲು ಯಾರು ಸಿಕ್ಕಿರಲಿಲ್ಲ. ಪರಿಸ್ಥಿತಿ ಹೀಗಿರುವಾಗ ಪೊಲೀಸ್ ಠಾಣೆ ತನಕ ಹೇಗೆ ಹೋಗಲಿ ಎಂದು ಪ್ರಶ್ನಿಸಿದ್ದಾಳೆ.
ಮಹಿಳೆ ಮಾರಾಟವಾದ ಮೇಲೆ ಸಿರಿವಂತನ ಮನೆಗೆ ಅದೃಷ್ಟವಶಾತ್ ಆಕೆಯ ತವರಿನ ಕಡೆ ಸಂಬಂಧಿಕರೊಬ್ಬರು ಬರುತ್ತಾರೆ. ಆಕೆಯ ಸ್ಥಿತಿ ಕಂಡು ದಂಗಾಗಿ ಆಕೆಯನ್ನು ಕರೆದುಕೊಂಡು ನೇರ ರಹತ್ ಘಟ್ ಪೊಲೀಸ್ ಠಾಣೆಗೆ ಹೋಗುತ್ತಾರೆ. ಈಕೆ ಕತೆ ಕೇಳುತ್ತಾ ಕೇಳುತ್ತಾ ಪೊಲೀಸರ ಕರುಳು ಚುರುಕು ಎನಿಸತೊಡಗಿದೆ.
ಕೊಂಚ ಫ್ಲಾಶ್ ಬಾಕ್ : ಐದು ವರ್ಷದ ಹಿಂದೆ ಪರ್ಸರಿ ತ್ಯೊಂಡಾ ಗ್ರಾಮದ ಆನಂದ್ ಕುರ್ಮಿ ಎಂಬಾತನೊಂದಿಗೆ 15-16 ವರ್ಷದ ಯುವತಿ ಮದುವೆಯಾಗುತ್ತದೆ. ಮದುವೆ ಯಾದ ಕೆಲ ಕ್ಷಣಗಳ ನಂತರವೇ ಗಂಡನ ಮನೆಯವರು ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಲಾರಂಭಿಸುತ್ತಾರೆ. ಮೊದಲಿಗೆ ಮದುವೆ ಸಂದರ್ಭದಲ್ಲಿ 1 ಲಕ್ಷ ನಗದು ವರದಕ್ಷಿಣೆ ಆಗ್ರಹಿಸಿದ್ದರು. ಅದನ್ನು ಹೇಗೋ ಹೊಂದಿಸಲಾಗಿತ್ತು. ಆದರೆ, ಟೆಲಿವಿಷನ್, ಮೋಟರ್ ಬೈಕ್, ಟ್ರ್ಯಾಕ್ಟರ್ ಸೇರಿದಂತೆ ಮತ್ತೊಂದು ಲಕ್ಷ ರು ನಗದು ಬೇಕು ಎಂದು ಹಠ ಹಿಡಿದಾಗ ಮಹಿಳೆಯ ತಂದೆ ರಾಮ್ ಕಿಶನ್ ಕಂಗಾಲಾದರು. ರಾಮ್ ಕಿಶನ್ ಕೇವಲ 2.5 ಎಕರೆ ಜಮೀನು ಹೊಂದಿರುವ ರೈತ.
16 ವರ್ಷಕ್ಕೆ ಗರ್ಭಿಣಿಯಾದ ಮಹಿಳೆಗೆ ಗಂಡನ ತಮ್ಮ ನೀರಜ್ ಆತನ ಪತ್ನಿ ಉಮಾಭಾಯಿ, ಅತ್ತೆ ಕಲಾ ಭಾಯಿ ಧಮಕಿ ಹಾಕಿ ಮಗುವನ್ನು ತೆಗೆಸಿಬಿಟ್ಟರು. ಈ ನೋವನ್ನು ನುಂಗಿ ಕೊಳ್ಳುವಷ್ಟರಲ್ಲಿ ಆಕೆಯನ್ನು ಮನೆಯಿಂದ ಹೊರಗೆ ಹಾಕಿ ದನದ ಕೊಟ್ಟಿಗೆಯಲ್ಲಿ ಕೂಡಿ ಹಾಕಲಾಯಿತು.
ನೆರೆ ಮನೆಯವರು ಈಕೆಯ ಅಸಹಾಯಕತೆಗೆ ಸ್ಪಂದಿಸದೆ ಸಾಮಾಜಿಕ ನ್ಯಾಯ ಒದಗಿಸದೆ ಸಾಮೂಹಿಕವಾಗಿ ಹಲವು ಬಾರಿ ಅತ್ಯಾಚಾರ ಮಾಡಿಬಿಟ್ಟರು. ಈ ವಿಷಯ ತಿಳಿದರು ಆಕೆ ಪತಿ ಸುಮ್ಮನಿದ್ದುಬಿಟ್ಟಿದ್ದು ದುರಂತ.
ಮುಂದೆ ಆಕೆಯನ್ನು ಈಗಿದ್ದ ಮನೆಯಿಂದ 25 ಕಿ.ಮೀ ದೂರದಲ್ಲಿದ್ದ ಸಂಬಂಧಿಕರೊಬ್ಬರ ಮನೆಯಲ್ಲಿ ಇರಿಸಲಾಯಿತು. ಅಲ್ಲಿ ಕೂಡಾ ತಂದೆ ಮಕ್ಕಳು ಎಲ್ಲರೂ ಆಕೆಯನ್ನು ಬಲಾತ್ಕರಿಸಿಬಿಟ್ಟರು. ಸುಮಾರು 20 ದಿನಗಳ ಕಾಲ ಕೋಣೆಯಲ್ಲಿ ಕೂಡಿ ಹಾಕಿ ನಿರಂತರವಾಗಿ ಕಾಮವಾಂಛೆ ತೀರಿಸಿಕೊಂಡಿದ್ದರು.
ಆದರೆ, ಅದು ಇಲ್ಲಿಗೆ ನಿಲ್ಲಲಿಲ್ಲ. ಆಕೆಯನ್ನು ದ್ವಾರಕ ಪ್ರಸಾದ್ ಎಂಬ ವ್ಯಕ್ತಿಗೆ ಮಾರಾಟ ಮಾಡಿ, ಹಣವನ್ನು ಆಕೆ ಪತಿ ಅನಂದ್ ಕುರ್ಮಿಗೆ ತಲುಪಿಸಲಾಯಿತು. 50,000 ರು ಹಾಗೂ 1 ಎಕರೆ ಭೂಮಿ ಲಾಭ ಪಡೆದ ಪತಿ ಖುಷಿಯಾಗಿದ್ದ. ಇತ್ತ ಮಹುನಾ ಗ್ರಾಮ ಸೇರಿದ ಈಕೆ ಕಾಮ ಮೃಗಗಳ ಸತತ ದಾಳಿಯಿಂದ ಅಸ್ವಸ್ಥಳಾಗಿಬಿಟ್ಟಳು. ಆಕೆ ಸ್ಥಿತಿಯನ್ನು ನೋಡಿದ ನೆರೆಮನೆ ವ್ಯಕ್ತಿ ಖಡಕ್ ಸಿಂಗ್, ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯುವ ಭರವಸೆ ನೀಡಿದನು. ಆದರೆ, ಆಸ್ಪತ್ರೆಗೆ ಹೋಗುವಷ್ಟರಲ್ಲಿ ಮತ್ತೊಮ್ಮೆ ಆಕೆ ಮೇಲೆ ಅತ್ಯಾಚಾರವಾಗಿಬಿಟ್ಟಿತ್ತು.
ಮುಂದೊಂದಿನ ಅಕಸ್ಮಾತ್ ಆಗಿ ಆಕೆ ಕಸಿನ್ ಒಬ್ಬರ ಕಣ್ಣಿಗೆ ಬಿದ್ದಳು. ಅಲ್ಲಿಂದ ಸಿರಿವಂತನಿಂದ ಅಕೆಗೆ ಮುಕ್ತಿ ಕೊಡಿಸಿ ತವರೂರು ಮಧ್ದೆವರ ಗ್ರಾಮಕ್ಕೆ ಕರೆದುಕೊಂಡು ಬಿಡಲಾಯಿತು. ಆಕೆ ಪತಿ, ಅತ್ತೆ, ಮೈದುನನ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಐಪಿಸಿ ಸೆಕ್ಷನ್ 498A, 372,376, 363,366, 34, 450, 294.506 ಅನ್ವಯ ಕೇಸು ದಾಖಲಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ.












Click it and Unblock the Notifications