ಶೆಟ್ಟರ್ ಸಿಎಂ ಈಶ್ವರಪ್ಪ ಡಿಸಿಎಂ ಸದಾನಂದ ರಾಜ್ಯಾಧ್ಯಕ್ಷ?
ಬೆಂಗಳೂರು, ಜುಲೈ 4: ಹೇಗಿದೆ ಈ proposal !? ರಾಜ್ಯ ಬಿಜೆಪಿಯಲ್ಲಿನ ಆಂತರಿಕ ಕಚ್ಚಾಟ ನಿರ್ಣಾಯಕ ಘಟ್ಟ ದಾಟಿದ್ದು, ಮುಖ್ಯಮಂತ್ರಿಯನ್ನು ಬದಲಾಯಿಸುವ ಜರೂರತ್ತೂ ಬಹಳಷ್ಟಿದೆ ಎಂಬುದು ಹೈಕಮಾಂಡ್ ಗೂ ಮನವರಿಕೆಯಾದಂತಿದೆ. ದೂರದ ದಿಲ್ಲಿಯಿಂದ ಕೇಳಿಬರುತ್ತಿರುವ ಪಿಸುಮಾತುಗಳನ್ನು ಆಲಿಸುವುದಾದರೆ ಕರ್ನಾಟಕದ ಮುಂದಿನ ಚಿತ್ರಣ ಹೀಗಿರುತ್ತದೆ: ಜಗದೀಶ್ ಶೆಟ್ಟರ್ ಮುಖ್ಯಮಂತ್ರಿ, ಕೆಎಸ್ ಈಶ್ವರಪ್ಪ ಉಪ ಮುಖ್ಯಮಂತ್ರಿ ಮತ್ತು ಕೊನೆಗೆ ಸದಾನಂದ ಗೌಡರು ಮತ್ತೆ ರಾಜ್ಯ ಬಿಜೆಪಿ ಅಧ್ಯಕ್ಷ ಗಾದಿಗೆ ಏರಲಿದ್ದಾರೆ.
ಮೇಲಿನ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದರೆ ಅದೇ ಎಲ್ಲವನ್ನೂ ಹೇಳುವಂತಿದೆ. 'ನಾನವನಲ್ಲ; ಇನ್ನೇನಿದ್ದರೂ ಹಿಂದೆ ಕುಳಿತ ಶೆಟ್ಟರ್ ಅವರ ಕಾಲ' ಎಂದು ಸದಾನಂದರು ಸೂಚಿಸುತ್ತಿರುವಂತಿದೆ.
ಪಕ್ಷದಲ್ಲಿನ ಬಿಕ್ಕಟ್ಟು ಕೈಮೀರುತ್ತಿರುವುದನ್ನು ಗಮನಿಸಿರುವ ಪಕ್ಷದ ವರಿಷ್ಠರು, ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ನಾಯಕತ್ವ ಬದಲಾವಣೆಗೆ ಒಲವು ತೋರಿದ್ದರೆ, ಕೆಲ ಹಿರಿಯ ನಾಯಕರು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರ ತಲೆದಂಡಕ್ಕೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ, ಅರುಣ್ ಜೇಟ್ಲಿ, ರಾಜನಾಥ ಸಿಂಗ್ ಸೇರಿದಂತೆ ಕೆಲವರು ಒಲವು ತೋರಿದ್ದು, ಸದಾನಂದ ಗೌಡರ ಬೆನ್ನಿಗೆ ಎಲ್.ಕೆ. ಅಡ್ವಾಣಿ, ಸುಶ್ಮಾ ಸ್ವರಾಜ್ ನಿಂತಿರುವುದು ಹೈಕಮಾಂಡನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ.
ಅಡ್ವಾಣಿ ಹಾಗೂ ಸುಶ್ಮಾರನ್ನು ಒಪ್ಪಿಸಲು ನಾಯಕರು ಎಲ್ಲ ಪಟ್ಟುಗಳನ್ನು ಪ್ರದರ್ಶಿಸುತ್ತಿದ್ದಾರೆ. ಮುಖ್ಯವಾಗಿ ವೀರಶೈವರನ್ನು ಕಡೆಗಣಿಸಿದರೆ ಅದು ಮುಂದಿನ ಚುನಾವಣೆಯಲ್ಲಿ ಬಹಳಷ್ಟು ಪರಿಣಾಮ ಬೀರುವ ಸಾಧ್ಯತೆ ವರಿಷ್ಠರು ಅರಿತಿದ್ದಾರೆ.
ಈ ಮಧ್ಯೆ, ಬಿಜೆಪಿ ಆಡಳಿತವಿರುವ ಯಾವುದೇ ರಾಜ್ಯದಲ್ಲಿ ಇದುವರೆಗೆ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸಿಲ್ಲ. ಮೈತ್ರಿ ಸರಕಾರ ಇರುವ ಕಡೆಗಳಲ್ಲಿ ಮಾತ್ರ ಇಂತಹ ವ್ಯವಸ್ಧೆ ಇದೆ. ಕರ್ನಾಟಕದಲ್ಲಿನ ಹಾಲಿ ಪರಿಸ್ಥಿತಿಯನ್ನು ನೋಡಿದರೆ ಇದೂ ಒಂದು ರೀತಿ ಪಕ್ಷದೊಳಗಿನ ಭಿನ್ನ ಬಣಗಳ ನಡುವಣ ಮೈತ್ರಿ ಎಂದು ಪರಿಗಣಿಸಿ, ರಾಜೀ ಸೂತ್ರವಾಗಿ ಪರಿಗಣಿಸಿದರೆ ಮೇಲಿನ proposal ಊರ್ಜಿತವಾಗುವ ಸಾಧ್ಯತೆಯಿದೆ.
ಏನೇ ಬದಲಾವಣೆಯಾದರೂ ಈ ಮೂವರ ನಡುವೆಯೇ ಆಗಬೇಕು. ಇಲ್ಲವೆ ಯಥಾ ಸ್ಧಿತಿ ಕಾಯ್ದುಕೊಂಡು ಹೋಗಬೇಕು ಎಂಬಂತಹ ದುರ್ಭರ ಪರಿಸ್ಥಿತಿ ಪಕ್ಷಕ್ಕೆ ಒದಗಿದೆ. ಆದರೆ ಇದು ಯಾವಾಗ ಆಗಲಿದೆ ಎಂಬುದೇ ಸದ್ಯದ interesting ಪ್ರಶ್ನೆ.