ಕಲಾಂ ಆತ್ಮಚರಿತ್ರೆಯಲ್ಲಿ ವಾಜಪೇಯಿ,ಸೋನಿಯಾ ಹೆಸರು
ನವದೆಹಲಿ, ಜು 4: 1998ರ ಮಾ.15ರ ಮಧ್ಯರಾತ್ರಿ ಅಟಲ್ ಬಿಹಾರಿ ವಾಜಪೇಯಿ ಅವರು ನನಗೆ ದೂರವಾಣಿ ಕರೆ ಮಾಡಿ ಕೇಂದ್ರ ಸಚಿವ ಸಂಪುಟದಲ್ಲಿ ಸೇರುವಂತೆ ನನಗೆ ಆಹ್ವಾನ ನೀಡಿದ್ದರು ಎನ್ನುವ ಕುತೂಹಲಕಾರಿ ಸಂಗತಿಯನ್ನು ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂ ತನ್ನ ಆತ್ಮಚರಿತ್ರೆ 'ಟರ್ನಿಂಗ್ ಪಾಯಿಂಟ್, ಎ ಜರ್ನಿ ಥ್ರೂ ಚಾಲೆಂಜಸ್' ಬರೆದುಕೊಂಡಿದ್ದಾರೆ.

ಆ ಸಮಯದಲ್ಲಿ ಡಿಆರ್ಡಿಒ (DRDO) ಮುಖ್ಯಸ್ಥರಾಗಿದ್ದ ಕಲಾಂ ಅವರಿಗೆ ಅಂದಿನ ಪ್ರಧಾನಿ ವಾಜಪೇಯಿ ದೂರವಾಣಿ ಕರೆಮಾಡಿ 'ಕೇಂದ್ರ ಮಂತ್ರಿಯಾಗುವವರ ಪಟ್ಟಿ ಸಿದ್ಧಪಡಿಸುತ್ತಿದ್ದೇನೆ, ನನ್ನ ಸಚಿವ ಸಂಪುಟದಲ್ಲಿ ನೀವೂ ಭಾಗಿಯಾಗ ಬೇಕೆನ್ನುವುದು ನನ್ನ ಬಯಕೆ' ಎಂದು ಕೇಳಿಕೊಂಡಿದ್ದರು. ಆದರೆ ಈ ಬಗ್ಗೆ ನಿರ್ಧರಿಸಲು ನನಗೆ ಸ್ವಲ್ಪ ಸಮಯಾವಕಾಶ ಬೇಕೆಂದು ನಾನು ಅವರಲ್ಲಿ ಕೇಳಿಕೊಂಡಿದ್ದೆ ಎಂದು ಕಲಾಂ ಹೇಳಿದ್ದಾರೆ.
ದೇಶದ ಅತೀ ಮಹತ್ವದ ಎರಡು ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕಾಗಿದ್ದರಿಂದ ರಾಜಕಾರಣಕ್ಕೆ ಪ್ರವೇಶಿಸುವುದು ಬೇಡ ಎಂದು ನನ್ನ ಎಲ್ಲಾ ಗೆಳೆಯರು ನನಗೆ ಸಲಹೆ ನೀಡಿದ್ದರು. ಹಾಗಾಗಿ ವಾಜಪೇಯಿ ಅವರ ಆಹ್ವಾನವನ್ನು ನಾನು ತಿರಸ್ಕರಿಸಿದ್ದೆ. ನನ್ನ ನಿರ್ಧಾರದಿಂದ ಅಗ್ನಿ ಕ್ಷಿಪಣಿ ವ್ಯವಸ್ಥೆ ಹಾಗೂ ಪರಮಾಣು ಪರೀಕ್ಷೆ ಕಾರ್ಯಕ್ರಮಗಳು ಯಶಸ್ವಿಯಾದವು ಎಂದು ಕಲಾಂ ತನ್ನ ಪುಸ್ತಕದಲ್ಲಿ ಪ್ರಸ್ತಾಪಿಸಿದ್ದಾರೆ.
ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಪೌರತ್ವವನ್ನು ಸುಪ್ರೀಂಕೋರ್ಟ್ ಊರ್ಜಿತಗೊಳಿಸಿತ್ತು. ಆ ಹಿನ್ನೆಲೆಯಲ್ಲಿ ಸಂವಿಧಾನಾತ್ಮಕವಾಗಿ ಅವರು ಪ್ರಧಾನಿ ಹುದ್ದೆಗೆ ಏರಲು ಅರ್ಹರಾಗಿದ್ದರು. ಯುಪಿಎ ಮೈತ್ರಿಕೂಟ 2004ರ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸಿದ್ದಾಗ ಸೋನಿಯಾರನ್ನು ಸರ್ಕಾರ ರಚನೆಗೆ ಆಹ್ವಾನಿಸಲು ತಾವು ಸಿದ್ದರಿದ್ದರೂ ಅವರೇ ಈ ಬಗ್ಗೆ ಮನಸ್ಸು ಮಾಡಲಿಲ್ಲ ಎಂದು ಕಲಾಂ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.
ಪಿ ವಿ ನರಸಿಂಹ ರಾವ್ ಅವರು ಪ್ರಧಾನಿ ಆಗಿದ್ದಾಗ ಕೂಡಾ ರಕ್ಷಣಾ ಮಂತ್ರಿ ಆಗುವಂತೆ ನನಗೆ ಆಹ್ವಾನ ನೀಡಿದ್ದರು. ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಉಪಕುಲಪತಿ ಆಗುವಂತೆ ಕೂಡಾ ನನಗೆ ಒತ್ತಾಯವಿತ್ತು ಎಂದು ಕಲಾಂ ತನ್ನ ಪುಸ್ತಕದಲ್ಲಿ ಹೇಳಿಕೊಂಡಿದ್ದಾರೆ.












Click it and Unblock the Notifications