ಕರ್ನಾಟಕ ವಿಧಾನಸಭೆ ವಿಸರ್ಜಿಸಲು ಅಡ್ವಾಣಿ ಸೂಚನೆ

ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ಬಿಜೆಪಿ ತನ್ನ ತತ್ತ್ವ ನಿಷ್ಠೆಗಳನ್ನು ಎಲ್ಲೆಡೆ ಉಳಿಸಿಕೊಳ್ಳಬೇಕಿದೆ. ಸದಾನಂದ ಗೌಡರು ಉತ್ತಮ ಆಡಳಿತ ನೀಡಿದರೂ ಅನಗತ್ಯ ಭಿನ್ನಮತದಿಂದ ಸರ್ಕಾರದ ಆಡಳಿತ ಯಂತ್ರ ಕುಂಠಿತಗೊಳಿಸಲು ಯತ್ನಿಸಲಾಗಿದೆ. ಇದಕ್ಕೆ ವಿಧಾನಸಭೆ ವಿಸರ್ಜನೆ ಮಾಡುವುದು ಶಾಶ್ವತ ಪರಿಹಾರ ಎಂದು ಅಡ್ವಾಣಿ ಅಭಿಪ್ರಾಯಪಟ್ಟಿದ್ದಾರೆ.
ಅಡ್ವಾಣಿ ಈ ವಿಷಯವನ್ನು ಕಳೆದ ವಾರವೇ ವಿಧಾನಸಭೆ ವಿಸರ್ಜನೆಗೆ ಸೂಚಿಸಿದ್ದರು ಎನ್ನಲಾಗಿದೆ. ಅಡ್ವಾಣಿ ಮನದ ಇಂಗಿತ ಅರಿತ ಯಡಿಯೂರಪ್ಪ ಬಣ ರಾಜೀನಾಮೆ ನೀಡಿ ಒತ್ತಡ ತಂತ್ರ ಅನುಸರಿಸಿತ್ತು ಎಂಬ ವಿಷಯವನ್ನು ಇಂಡಿಯಾ ಟುಡೇ ಹೊರ ಹಾಕಿದೆ.
ಅದರೆ, ನಿತಿನ್ ಗಡ್ಕರಿ ಅವರಿಂದ ಭರವಸೆ ಸಿಕ್ಕ ಮೇಲೆ ರಾಜೀನಾಮೆ ಹಿಂಪಡೆದಿದ್ದ 9 ಸಚಿವರುಗಳು ಈಗ ನಿತಿನ್ ಗಡ್ಕರಿ ಅವರ ನಿರ್ಧಾರಕ್ಕಾಗಿ ಕಾದಿದ್ದಾರೆ. ಗ್ರಾಮೀಣ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಜಗದೀಶ್ ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸುವುದು ಅಥವಾ ಕೆಎಸ್ ಈಶ್ವರಪ್ಪ ಅವರಿಗೆ ಸಿಎಂ ಸ್ಥಾನ ನೀಡುವುದು ಬಿಎಸ್ ಯಡಿಯೂರಪ್ಪ ಬಣದ ಕಟ್ಟ ಕಡೆಯ ಬೇಡಿಕೆ ಎನ್ನಲಾಗಿದೆ.
ರಾಜೀನಾಮೆ ಹಿಂಪಡೆದ ನಂತರ ದೆಹಲಿಗೂ ಹೋಗಿ ಬಂದ ಯಡಿಯೂರಪ್ಪ ಬಣ ಸದ್ಯಕ್ಕೆ ಹೈಕಮಾಂಡ್ ಭರವಸೆಯಿಂದ ತೃಪ್ತಿಗೊಂಡಿರುವಂತಿದೆ. ಈ ಎಲ್ಲಾ ಪ್ರಸಂಗದ ಹಿಂದಿನ ಶಕ್ತಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ. ಹೈಕಮಾಂಡ್ ಮೇಲೆ ಒತ್ತಡ ತಂತ್ರ ಹೇರಿ ಹೆದರಿಕೆ ಉಂಟು ಮಾಡುವುದು ಇವರ ತಂತ್ರ. ಯಡಿಯೂರಪ್ಪ ಅವರ ಮೇಲೆ ಇನ್ನೂ ಕೇಸುಗಳಿದೆ. ಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿದೆ.
ಈ ಸಂದರ್ಭದಲ್ಲಿ ಸರ್ಕಾರ ಬೀಳಿಸುವುದು ಅಥವಾ ಯಡಿಯೂರಪ್ಪ ಹೊಸ ಪಕ್ಷ ಕಟ್ಟುವುದು ಎರಡೂ ಬೇಡದ ಸಂಗತಿಯಾಗಿದೆ. ಈ ರೀತಿ ಘಟನೆ ಸಂಭವಿಸಿದರೆ ರಾಜೀನಾಮೆ ನೀಡಿದ ಸಚಿವರ ಭವಿಷ್ಯ ಕತ್ತಲಾಗುತ್ತಿತ್ತು ಹಾಗಾಗಿ ರಾಜೀನಾಮೆ ಹಿಂಪಡೆದಿದ್ದಾರೆ. ಶೇ 70 ರಷ್ಟು ಭಿನ್ನಮತ ನಾಯಕರಿಗೆ ಮಧ್ಯಂತರ ಚುನಾವಣೆ ನಡೆಯುವುದು ಬೇಕಿಲ್ಲ ಎಂದು ಸಚಿವರೊಬ್ಬರು ಹೇಳಿದ್ದಾರೆ.
ಒಟ್ಟಾರೆ, ಯಡಿಯೂರಪ್ಪ ಬಣದ ಬೇಡಿಕೆ ಈಡೇರಿಕೆ ಬಗ್ಗೆ ಬಿಜೆಪಿ ಹೈಕಮಾಂಡ್ ನಲ್ಲೇ ಭಿನ್ನಾಭಿಪ್ರಾಯವಿದೆ. ಎಲ್ ಕೆ ಅಡ್ವಾಣಿ, ಸುಷ್ಮಾ ಸ್ವರಾಜ್, ರಾಜ್ ನಾಥ್ ಸಿಂಗ್ ಅವರಿಗೆ ಯಡಿಯೂರಪ್ಪ ಆಗಲಿ, ಅವರ ಬಣದ ನಾಯಕರಾಗಲಿ ಸಿಎಂ ಸ್ಥಾನಕ್ಕೇರುವುದು ಬೇಡ. ಯಡಿಯೂರಪ್ಪ ಪರ ಸಾಫ್ಟ್ ಕಾರ್ನರ್ ಇರುವ ನಿತಿನ್ ಗಡ್ಕರಿ ಅವರು ಅಡ್ವಾಣಿ ಬಣದ ಸಲಹೆ ತಳ್ಳುಹಾಕುವಂತಿಲ್ಲ. ಅದರೆ, ಪೂರ್ಣವಾಗಿ ಒಪ್ಪುವಂತಿಲ್ಲ ಎಂಬ ಪರಿಸ್ಥಿತಿಯಲ್ಲಿದ್ದಾರೆ.












Click it and Unblock the Notifications