ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾರ ಹೆಗಲ ಮೇಲೆ ಕೈ ಹಾಕಲಿದ್ದಾರೆ ನಿತಿನ್ ಗಡ್ಕರಿ?

By Prasad
|
Google Oneindia Kannada News

ನವದೆಹಲಿ, ಜು. 3 : ಯಾವುದೇ ಸಭೆಯ ನಂತರ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮುಖದ ಭಾವನೆಗಳನ್ನು ಗಮನಿಸಿ ಸಭೆ ಫಲಪ್ರದವಾಗಿದೆಯೋ, ವಿಫಲವಾಗಿದೆಯೋ ಎಂಬುದನ್ನು ಗ್ರಹಿಸಬಹುದು. ಆದರೆ, ಸದಾನಂದ ಗೌಡರ ಮುಖದ ಭಾವನೆಗಳನ್ನು ಗಮನಿಸಿ ಸಭೆಯ ಫಲಪ್ರದತೆಯನ್ನು ಅಳೆಯಲು ಸಾಧ್ಯವೆ?

BJP leaders meet Nitin Gadkari

ಯಾಕೆಂದರೆ, ಅವರಂದುಕೊಂಡಂತೆ ನಡೆಯಲಿ ನಡೆಯದಿರಲಿ ಅವರು ಯಾವತ್ತಿಗೂ ನಗುತ್ತಲೇ ಇರುತ್ತಾರೆ. ಇಂದು ದೆಹಲಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿಬಂದ ನಂತರ ಅವರ ಮುಖದಲ್ಲಿ ಕೂಡ ಎಂದಿನಂತೆ ಅದೇ ಬಗೆಯ ನಗೆ. ಜೊತೆಗೆ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಮತ್ತು ಮುಖ್ಯಮಂತ್ರಿ ಪದವಿಯ ಆಕಾಂಕ್ಷಿ ಜಗದೀಶ್ ಶೆಟ್ಟರ್.

ಮುಖ್ಯಮಂತ್ರಿ ಬದಲಾಗಬೇಕು ಎಂಬ ವಿಷಯದ ಕುರಿತು ಅನೇಕ ದಿನಗಳಿಂದ ನಡೆಯುತ್ತಿರುವ ಚರ್ಚೆ ದೆಹಲಿಯಲ್ಲಿಯೂ ಮುಂದುವರಿದಿದೆ. ಬೆಂಗಳೂರಿಗೆ ಬಂದು ಕರ್ನಾಟಕದ ಉಸ್ತುವಾರಿ ವಹಿಸಿರುವ ಧರ್ಮೇಂದ್ರ ಪ್ರಧಾನ್ ಮಾಡಿದ ಕೆಲವನ್ನೇ ನಿತಿನ್ ಗಡ್ಕರಿಯವರು ಮುಂದುವರಿಸಿದ್ದಾರೆ. ಇನ್ನೂ ಸ್ವಲ್ಪ ದಿನ ಬಿಟ್ಟರೆ ಉಳಿದ ಹಿರಿಯರೂ ಅದೇ ಕೆಲಸವನ್ನು ಮುಂದುವರಿಸುತ್ತಾರೆ. ಸದ್ಯಕ್ಕೆ ಯಾರ ಹೆಗಲ ಮೇಲೆ ಗಡ್ಕರಿ ಕೈ ಹಾಕಲಿದ್ದಾರೆ ಎಂಬುದು ತಿಳಿದುಬಂದಿಲ್ಲ.

ಮೂವರ ಅನಿಸಿಕೆಗಳನ್ನು ನಿತಿನ್ ಗಡ್ಕರಿಯವರು ಸಂಗ್ರಹಿಸಿದ ನಂತರ, ಎಲ್ಲರ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದೇವೆ, ಪಕ್ಷದ ಚೌಕಟ್ಟಿನಲ್ಲಿಯೇ ಎಲ್ಲ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುತ್ತೇವೆ ಎಂದು ಧರ್ಮೇಂದ್ರ ಪ್ರಧಾನ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಈ ಭೇಟಿಯ ಸಮಯದಲ್ಲಿ ಅರುಣ್ ಜೇಟ್ಲಿ ಕೂಡ ಉಪಸ್ಥಿತರಿದ್ದರು. ಬಿಜೆಪಿಯ ಎಲ್ಲ ಶಾಸಕರೊಡನೆ ಮಾತುಕತೆ ನಡೆಸಿ ಈ ನಾಯಕತ್ವದ ಸಮಸ್ಯೆಗೆ ತಾರ್ಕಿಕ ಅಂತ್ಯ ಕಾಣಿಸಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

ಮನವೊಲಿಕೆಯ ಭಾರ ಶೆಟ್ಟರ್ ಮೇಲೆ : ಬಲ್ಲ ಮೂಲಗಳ ಪ್ರಕಾರ, ಈ ಭೇಟಿಯಲ್ಲಿ ತಿಳಿದುಬಂದಿರುವ ಒಂದು ಪ್ರಮುಖ ಅಂಶವೇನೆಂದರೆ, ಒಂದು ವೇಳೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಆಗಲೇಬೇಕಿದ್ದರೆ, ಎಲ್ಲ ಶಾಸಕರ ವಿಶ್ವಾಸ ಗಳಿಸುವುದು ಮಾತ್ರವಲ್ಲದೆ, ಲಾಲ್ ಕೃಷ್ಣ ಅಡ್ವಾಣಿ ಸೇರಿದಂತೆ ದೆಹಲಿಯ ಎಲ್ಲ ಹಿರಿಯರ ಮನವೊಲಿಸಬೇಕೆಂದು ಜಗದೀಶ್ ಶೆಟ್ಟರ್ ಅವರಿಗೆ ತಾಕೀತು ಮಾಡಲಾಗಿದೆ. ಈ ಸೂತ್ರಕ್ಕೆ ಜಗದೀಶ್ ಶೆಟ್ಟರ್ ಮತ್ತು ಯಡಿಯೂರಪ್ಪ ಬಣ ಒಪ್ಪಿದರೆ ಮಾತ್ರ ನಾಯಕತ್ವ ಬದಲಾವಣೆ ಸಾಧ್ಯ ಎಂಬ ಮಾತು ಕೂಡ ಕೇಳಿಬಂದಿದೆ.

ಎಲ್ಲ ಶಾಸಕರ ಅಭಿಪ್ರಾಯ ಸಂಗ್ರಹಿಸಿದ ನಂತರ, ನಾಯಕತ್ವ ಬದಲಾವಣೆಯ ಬಗ್ಗೆ ಒಮ್ಮತ ಮೂಡದಿದ್ದರೆ ಬಿಜೆಪಿಯ ಸಂಸದೀಯ ಮಂಡಳಿಯ ಸಭೆ ಕರೆದು ಮುಂದಿನ ಕ್ರಮ ಜರುಗಿಸಲು ದೆಹಲಿಯ ಹಿರಿಯರು ನಿರ್ಧರಿಸಿದ್ದಾರೆ. ಬಿಜೆಪಿ ಬಿಕ್ಕಟ್ಟಿಗೆ ಪರಿಹಾರ ಹುಡುಕುವ ಹೊತ್ತಿಗೆ, ಒಮ್ಮತದ ನಿರ್ಧಾರ ಬರುವ ಹೊತ್ತಿಗೆ ಜಗದೀಶ್ ಶೆಟ್ಟರ್ ಆಸಕ್ತಿ ಕಳೆದುಕೊಂಡಿರುತ್ತಾರೆ, ಚುನಾವಣೆಯೇ ಹತ್ತಿರವಾಗಿರುತ್ತದೆ ಅಥವಾ ಯಡಿಯೂರಪ್ಪನವರೇ ಹೊಸ ಪಕ್ಷ ಕಟ್ಟಿರುತ್ತಾರೆ.

ರಾಜ್ಯದಲ್ಲಿ ಮುಂಗಾರು ಕೈಕೊಟ್ಟಿದ್ದರಿಂದ ಅನೇಕ ಜಿಲ್ಲೆಗಳು ಬರದಿಂದ ತತ್ತರಿಸಿರುವಾಗ ಬಿಜೆಪಿ ಶಾಸಕರೆಲ್ಲರು ಕರ್ನಾಟಕ ಭವನದಲ್ಲಿ ಬಂದು, ತಮ್ಮ ಬೇಳೆಕಾಯಿ ಬೇಯಿಸಿಕೊಳ್ಳಲು ಕರ್ನಾಟಕ ಭವನದಲ್ಲಿ ಠಿಕಾಣಿ ಹೂಡಿಬಿಟ್ಟಿದ್ದಾರೆ. ಯಡಿಯೂರಪ್ಪ ಬಣದ ಶಾಸಕರು ಮತ್ತು ಸದಾನಂದ ಗೌಡರ ಬಣದ ಶಾಸಕರು ಭಾರೀ ಗಹನ ಚರ್ಚೆಯಲ್ಲಿ ಮುಳುಗಿಬಿಟ್ಟಿದ್ದಾರೆ. ಸದ್ಯಕ್ಕೆ ವಿಧಾನಸಭೆ ಭಣಗುಡುತ್ತಿದೆ. ನಾಯಕತ್ವ ಬದಲಾವಣೆ ಸಂಬಂಧಿಸಿದಂತೆ ಜುಲೈ 16ರವರೆಗೆ ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಕಡಿಮೆ.

English summary
BJP senior leaders are still trying to find solution to leadership issue in Karnataka. State leaders met party president Nitin Gadkari at his residence in New Delhi. The onus has been put on Shettar to persuade LK Advani for leadership change.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X