ಬೇಲ್ ಗಾಗಿ ಡೀಲ್: ಯಾದಗಿರಿ ತಪ್ಪೊಪ್ಪಿಗೆ, ರೆಡ್ಡಿಗೆ ಭೀತಿ
ಎಸಿಬಿ ಮುಖ್ಯಸ್ಥ ಪ್ರಸಾದ್ ರಾವ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಯಾದಗಿರಿ ರಾವ್ ನೀಡಿದ ಹೇಳಿಕೆಯನ್ನು ಬಹಿರಂಗಗೊಳಿಸಿದ್ದಾರೆ. ಜಾಮೀನಿಗಾಗಿ ಲಂಚ ಪ್ರಕರಣದಲ್ಲಿ ಸೋಮಶೇಖರ ರೆಡ್ಡಿ ಅವರ ಪಾತ್ರ ಇದರಿಂದ ಸ್ಪಷ್ಟವಾಗಿದೆ.
ಲಂಚ ಪಡೆದು ಜಾಮೀನು ನೀಡಿದ ಆರೋಪ ಎದುರಿಸುತ್ತಿರುವ ಜಡ್ಜ್ ಪಟ್ಟಾಭಿರಾಮರಾವ್ ಜೊತೆ ಡೀಲ್ ಕುದುರಿಸಿದ್ದ ಯಾದಗಿರಿ ಸಿಕ್ಕಿ ಬಿದ್ದಿದ್ದು, ತಪ್ಪೊಪ್ಪಿಗೆ ನೀಡಿದ್ದಾನೆ. ಸೋಮಶೇಖರ ರೆಡ್ಡಿ ಅವರು ಕೊಟ್ಟ ಡೀಲ್ ಪ್ರಕಾರ ಜಡ್ಜ್ ಗಳೊಂದಿಗೆ ನಾನು ಮಾತುಕತೆ ನಡೆಸಿದೆ.
ಸೋಮಶೇಖರ್ ಅವರ 9.5 ಕೋಟಿ ರು ಡೀಲ್ ಹಣದ ಕೃಪೆಯಿಂದ ನಾನು ಮಾರುತಿ ಸ್ವಿಫ್ಟ್ ಕಾರು, ನಚಾರಾ ಪ್ರದೇಶದಲ್ಲಿ ದೊಡ್ಡ ಬಂಗಲೆ ಖರೀದಿಸಿದೆ. ಸೋಮಶೇಖರ ರೆಡ್ಡಿ ಅವರೇ ಈ ಜಾಮೀನಿಗಾಗಿ ಲಂಚ ಪ್ರಕರಣದ ಪ್ರಮುಖ ರುವಾರಿ ಎಂದು ಯಾದಗಿರಿ ರಾವ್ ಹೇಳಿಕೆ ನೀಡಿದ್ದಾನೆ.
ಪಿ ಯಾದಗಿರಿರಾವ್ ಬಂಧನದ ಬಗ್ಗೆ ಇದ್ದ ಗೊಂದಲ ಈಗ ಪರಿಹಾರವಾಗಿದೆ. ಅಲ್ಲದೆ, ಸೋಮಶೇಖರ ರೆಡ್ಡಿ ಅವರಿಗೆ ಬಂಧನ ಭೀತಿ ಶುರುವಾಗಿದೆ. ಎಸಿಬಿ ತಂಡ ನ್ಯಾಯಾಲಯಕ್ಕೆ ಸಲ್ಲಿಸಿರುವ ಎಫ್ ಐಆರ್ ಕಾಪಿಯಲ್ಲಿ ರೌಡಿ ಶೀಟರ್ ಯಾದಗಿರಿ ಹೆಸರೂ ಇದೆ.
ನಲ್ಗೊಂಡ ಪೊಲೀಸರು ಯಾದಗಿರಿನ್ನು ಬಂಧಿಸಿ, ಎಸಿಬಿ ತಂಡದ ವಶಕ್ಕೆ ನೀಡಿದ್ದೇವೆ ಎಂದು ಹೇಳಿಕೆ ನೀಡಿದ್ದರು., ಆದರೆ, ಎಸಿಬಿ ತಂಡ ಮಾತ್ರ ಗುಟ್ಟು ಬಿಟ್ಟುಕೊಟ್ಟಿಲ್ಲ. ಯಾದಗಿರಿ ಬಂಧನದ ಸುದ್ದಿ ಹರಡಿದರೆ, ತನಿಖೆಗೆ ತೊಂದರೆಯಾಗಬಹುದು, ಇತರ ಆರೋಪಿಗಳು ಎಚ್ಚೆತ್ತುಕೊಳ್ಳಬಹುದು ಎಂಬ ಶಂಕೆಯಿಂದ ವಿಷಯ ಇನ್ನೂ ಹೊರಹಾಕಿಲ್ಲ ಎನ್ನಲಾಗಿತ್ತು.
ಯಾದಗಿರಿ ರಾವ್ ಚಿಟಿಯಾಳ್ ಬಳಿ ನೆಲೆಗೊಂಡಿರುವ ಶಂಕೆ ವ್ಯಕ್ತವಾಗಿತ್ತು. ಯಾದಗಿರಿ ಅಲ್ಲಿಂದ ಎಸ್ಕೇಪ್ ಆಗಲು ಯತ್ನಿಸುತ್ತಿದ್ದ. ನಾವು ಆತನನ್ನು ಉಪಾಯವಾಗಿ ಬಂಧಿಸಿ ಸಿಬಿಐ ಅಧಿಕಾರಿಗಳ ವಶಕ್ಕೆ ಒಪ್ಪಿಸಿದೆವು.
ಸಿಬಿಐ ತಂಡ ಆತನ ಹೇಳಿಕೆ ಪಡೆದುಕೊಂಡು ಬಿಟ್ಟುಬಿಟ್ಟರು. ಈ ಪ್ರಕರಣ ಎಸಿಬಿ ಕೈ ಸೇರಿದ ಮೇಲೆ ಯಾದಗಿರಿ ಅವರ ವಶಕ್ಕೆ ಸೇರುತ್ತಾನೆ. ಈಗ ಯಾದಗಿರಿಯ ವಿಚಾರಣೆಯನ್ನು ಎಸಿಬಿ ಕೈಗೆತ್ತಿಕೊಳ್ಳಲಿದೆ ಎಂದು ಪೊಲೀಸರು ಹೇಳಿದ್ದರು.
ರೆಡ್ಡಿ ಸವಾಲ್ ಟುಸ್: ಈ ನಡುವೆ ಜಾಮೀನಿಗಾಗಿ ಲಂಚ ಪ್ರಕರಣದಲ್ಲಿ ರವಿಕಿರಣ್ ಆಗಲಿ, ಯಾದಗಿರಿಯಾಗಲಿ ಯಾರೊಂದಿಗೂ ನಾನು ಮಾತನಾಡಿಲ್ಲ. ನಾನು ಮಾತನಾಡಿದ್ದಕ್ಕೆ ಸಾಕ್ಷಿ ಇದ್ದರೆ ತೋರಿಸಿ, ತಕ್ಷಣವೇ ನಾನು ರಾಜಕೀಯದಿಂದ ನಿವೃತ್ತಿ ಹೊಂದಿ, ಮನೆಯಲ್ಲೇ ಸಂಪೂರ್ಣವಾಗಿ ಕಾಲಕಳೆಯುತ್ತೇನೆ ಎಂದು ಜನಾರ್ದನ ರೆಡ್ಡಿ ಅವರ ತಮ್ಮ ಕೆಎಂಎಫ್ ಮುಖ್ಯಸ್ಥ ಸೋಮಶೇಖರ ರೆಡ್ಡಿ ಅವರು ಸವಾಲೆಸೆದಿದ್ದರು.
ಸಿಬಿಐ, ಎಸಿಬಿ ಹಾಗೂ ಪೊಲೀಸರ ನಡುವಿನ ಸಂವಹನ ಕೊರತೆಯಿಂದ ಗಾಲಿ ಜನಾರ್ದನ ರೆಡ್ಡಿ ಲಂಚ ಪ್ರಕರಣ ಇನ್ನಷ್ಟು ವಿಳಂಬವಾಗುವ ಶಂಕೆ ವ್ಯಕ್ತವಾಗಿತ್ತು. ಅಲ್ಲದೆ ಆಂಧ್ರಪ್ರದೇಶವನ್ನು ಕಾಡುತ್ತಿರುವ ನಕಲಿ ಮದ್ಯ ಪ್ರಕರಣವನ್ನು ಮೊದಲು ಮುಗಿಸುವ ಒತ್ತಡ ಎಸಿಬಿ ತಂಡ ದ ಮೇಲಿದೆ ಎನ್ನಲಾಗಿತ್ತು.
ಆದರೆ, ಎಲ್ಲವನ್ನೂ ಸುಳ್ಳು ಮಾಡಿದ ಎಸಿಬಿ ತಂಡ ಯಾದಗಿರಿ ರಾವ್ ನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದೆ. ಕೆಎಂಎಫ್ ಅಧ್ಯಕ್ಷ ಸೋಮಶೇಖರ ರೆಡ್ಡಿ ಅವರ ಕೈವಾಡದ ಬಗ್ಗೆ ಬಾಯ್ಬಿಟ್ಟಿರುವ ಯಾದಗಿರಿ ರಾವ್ ಇನ್ನೂ ಅನೇಕ ಸತ್ಯಗಳನ್ನು ಹೊರಗೆಡವಿದ್ದು, ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.