ರಾಷ್ಟ್ರಪತಿ ಹುದ್ದೆಗೆ ಪ್ರಣಬ್ ಅನರ್ಹ: ಜೇಠ್ಮಲಾನಿ

ವಿದೇಶಗಳಲ್ಲಿ ಕಪ್ಪು ಹಣ ಇಟ್ಟಿರುವವರ ಹೆಸರುಗಳನ್ನು ಬಹಿರಂಗಪಡಿಸಲು ಮುಖರ್ಜಿ ವಿಫಲರಾಗಿದ್ದಾರೆ. ಅಸಲಿಗೆ ಸುಪ್ರೀಂ ಕೋರ್ಟ್ ಆದೇಶವಿದ್ದರೂ ಫ್ರಾನ್ಸ್, ಜರ್ಮನಿ ಹಾಗೂ ಸ್ವಿಸ್ ಸರ್ಕಾರಗಳು ನೀಡಿದ್ದ ಭಾರತೀಯ ತೆರಿಗೆ ಕಳ್ಳರ ಹೆಸರುಗಳನ್ನು ಬಹಿರಂಗಪಡಿಸದೆ ಮುಖರ್ಜಿ ಮರೆಮಾಚಿದರು. ಇಂತಹ ವ್ಯಕ್ತಿ ರಾಷ್ಟ್ರಪತಿ ಸ್ಥಾನಕ್ಕೆ ಅರ್ಹನಲ್ಲ. ಎಂದು ಜೇಠ್ಮಲಾನಿ ಹೇಳಿದ್ದಾರೆ.
ಇದಲ್ಲದೆ, ಪ್ರಣಬ್ ಅವರಿಗೆ ಜೇಠ್ಮಲಾನಿ ಬಹಿರಂಗ ಪತ್ರ ಬರೆದು ಅವರ ಮೇಲೆ ಗುರುತರ ಆರೋಪಗಳನ್ನು ಮಾಡಿದ್ದಾರೆ. ತುರ್ತು ಪರಿಸ್ಥಿತಿಗೆ ಬೆಂಬಲಿಸಿದ್ದು, ಶಾ ಆಯೋಗಕ್ಕೆ ಬೆಂಬಲ ನೀಡದಿರುವುದು, ಕಾರ್ಪೊರೆಟ್ಸ್, ಬಂಡವಾಳಶಾಹಿಗಳಿಗೆ ನೆರವು, ಹಸನ್ ಅಲಿ ಪ್ರಕರಣದಲ್ಲಿ ನಿರಾಸಕ್ತಿ, ಸ್ವಿಸ್ ಬ್ಯಾಂಕ್ ಕಳ್ಳರ ಹೆಸರು ಬಹಿರಂಗ ಪಡಿಸದಿರುವುದು, ಗ್ವಾಲಿಯರ್ ನಲ್ಲಿ ಗಾಯತ್ರಿ ದೇವಿ ಹಾಗೂ ರಾಜಮಾತಾ ವಿಜಯ ರಾಜೆ ಅವರು ಅಕ್ರಮವಾಗಿ ಪಟ್ಟಕ್ಕೇರುವಂತೆ ಮಾಡಿದ್ದು ಇವೇ ಮುಂತಾದ ಆರೋಪಗಳನ್ನು ಪ್ರಣಬ್ ಮೇಲೆ ಹೊರೆಸಲಾಗಿದೆ.
ಆದರೆ, ಎನ್ ಸಿಪಿ ನಾಯಕ ಎನ್ ಡಿಎ ಅಭ್ಯರ್ಥಿ ಪಿಎ ಸಂಗ್ಮಾ ಪರ ಪ್ರಚಾರ ನಡೆಸಲು ನಾನು ಹೈದರಾಬಾದಿಗೆ ಬಂದಿಲ್ಲ ಎಂದು ಜೇಠ್ಮಲಾನಿ ಸ್ಪಷ್ಟಪಡಿಸಿದರು. ಕಾರ್ಪೊರೆಟ್ ಸಮೂಹಗಳಿಗೆ ನೆರವು ನೀಡುತ್ತಾ ದೇಶದ ಆರ್ಥಿಕತೆ ಪಾತಾಳ ಕಾಣುವಂತೆ ಮಾಡಿದ ಪ್ರಣಬ್ ಅವರನ್ನು ರಾಷ್ಟ್ರಪತಿಯಾಗಿ ಕಾಣುವುದು ಕಷ್ಟಕರ. ಸುಮಾರು 1500 ಬಿಲಿಯನ್ ಯುಎಸ್ ಡಾಲರ್ ಕಾಳಧನವನ್ನು ಭಾರತಕ್ಕೆ ವಾಪಸ್ ತರಿಸುವ ಭರವಸೆ ನೀಡಿ ಮೋಸ ಮಾಡಿದ್ದಾರೆ. ಈ ಮೊತ್ತ ಭಾರತದ ಬಡತನ ನೀಗಿಸಲು ಸಾಕಾಗುತ್ತಿತ್ತು ಎಂದು ಜೇಠ್ಮಲಾನಿ ಅಭಿಪ್ರಾಯಪಟ್ಟಿದ್ದಾರೆ.
ಯುಪಿಎ ಸಂಪುಟದ ಪ್ರಮುಖ ಸದಸ್ಯರ ಐಟಿ ರಿಟರ್ನ್ಸ್ ಬಗ್ಗೆ ಯುಪಿಎ ಚೇರ್ಮನ್ ಸೋನಿಯಾ ಗಾಂಧಿ ಅವರು ಮೌನ ವಹಿಸಿರುವುದಾದರೂ ಏಕೆ? ಸೋನಿಯಾ ಅವರೇ ಅನಗತ್ಯವಾಗಿ ವಿದೇಶಗಳಲ್ಲಿ ಪ್ರವಾಸ ಮಾಡುತ್ತಿದ್ದು, ಆಸ್ಪತ್ರೆ ಖರ್ಚು, ವೈದ್ಯಕೀಯ ವೆಚ್ಚ ಎಂದು ಹೇಳಿದ್ದು ಎಷ್ಟರಮಟ್ಟಿಗೆ ಸರಿ ಎಂದು ಜೇಠ್ಮಲಾನಿ ಪ್ರಶ್ನಿಸಿದ್ದಾರೆ.
ಆಗಸ್ಟ್ ನಲ್ಲಿ ಪ್ರಣಬ್ ರಾಷ್ಟ್ರಪತಿ ಕಚೇರಿ ಹೊಕ್ಕರೆ ಪಶ್ಚಿಮ ಬಂಗಾಳದ ದಿಗ್ಗಜರಾದ ಬಂಕಿಮ್ ಚಂದ್ರ ಚಟರ್ಜಿ, ಸ್ವಾಮಿ ವಿವೇಕಾನಂದ, ಚಿತ್ತರಂಜನ್ ದಾಸ್ ಹಾಗೂ ಶ್ರೀ ಅರವಿಂದೋ ಅವರ ಘನತೆ ಅಗೌರವಪೂರ್ವಕವಾಗಿ ನಡೆದುಕೊಂಡಂತೆ ಎಂದು ಜೇಠ್ಮಲಾನಿ ಹೇಳಿದರು.












Click it and Unblock the Notifications