ಬಾಲಕಿ ಹರ್ಷಿತಾ ಅತ್ಯಾಚಾರ,ವಾಮಾಚಾರಕ್ಕೆ ಬಲಿ ಅಲ್ಲ?
ಬಾಲಕಿಯನ್ನು ಅತ್ಯಾಚಾರ ಮಾಡಿ ವಾಮಾಚಾರಿಗಳು ಕೊಲೆಗೈದಿದ್ದಾರೆ ಎಂದು ಶಂಕಿಸಲಾಗಿತ್ತು. ಆದರೆ, ಶುಕ್ರವಾರ(ಜೂ.29) ತನಿಖಾ ಪ್ರಗತಿ ಬಗ್ಗೆ ಮಾತನಾಡಿದ ಡಿಸಿಪಿ ಡಾ. ರಮೇಶ್, 'ವಾಮಾಚಾರಕ್ಕೆ ಹರ್ಷಿತಾ ಬಲಿಯಾಗಿಲ್ಲ' ಎಂದಿದ್ದಾರೆ.
ಮಗುವಿನ ತಲೆ ಹತ್ತಿರ ಮಣ್ಣಿನ ಹೆಂಟೆಗಳು, ಕಲ್ಲು ಬಿದ್ದಿದೆ. ಹೆಂಟೆಗಳಿಂದ ತಲೆಗೆ ಹೊಡೆದು ಸಾಯಿಸಲಾಗಿದೆ. ಮೇಲ್ನೋಟಕ್ಕೆ ಇದು ವಾಮಚಾರವಲ್ಲದೆ ಬೇರೆ ಕಾರಣಕ್ಕೆ ಕೊಲೆಯಾಗಿರಬಹುದು ಎಂದು ಕಂಡು ಬರುತ್ತದೆ ಎಂದು ಡಿಸಿಪಿ ರಮೇಶ್ ಹೇಳಿದ್ದಾರೆ.
ಹರ್ಷಿತಾಳ ಕೊಲೆ ನಡೆದಿರುವುದು ಒಂದು ಕಡೆಯಾದರೆ, ಶವವನ್ನು ಬಂದು ಹಾಕಿರುವುದು ಇನ್ನೊಂದು ಕಡೆ, ಸುಳಿವು ಸಿಗದಿರುವಂತೆ ಮಾಡಲು ದುಷ್ಕರ್ಮಿಗಳು ಈ ರೀತಿ ಮಾಡಿದ್ದಾರೆ. ಆದರೆ, ಹರ್ಷಿತಾ ಕೊಲೆ ಪ್ರಕರಣದ ತನಿಖೆಗೆ ಮೂರು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ.
ಹುಣಸಮಾರನಹಳ್ಳಿಯಲ್ಲಿರುವ ಅಶ್ವಥರೆಡ್ಡಿ ಅವರ ಮೊದಲ ಪುತ್ರಿ ಅನಿತಾ ಎಂಬುವರ ಮೊದಲ ಮಗಳು ಹರ್ಷಿತಾ (4). ಅನಿತಾ ಅವರು ತವರಿಗೆ ಎರಡನೇ ಮಗು ಹೆರಿಗೆಗೆ ಬಂದಿದ್ದರು. ಜೂ.25ರ ಬೆಳಗ್ಗೆ ಮನೆಯ ಮುಂದೆ ಆಟವಾಡುತ್ತಿದ್ದ ಹರ್ಷಿತಾ ನಾಪತ್ತೆಯಾಗಿದ್ದಳು.
ಪೋಷಕರು ಯಲಹಂಕ ಠಾಣೆಯಲ್ಲಿ ದೂರು ನೀಡಿದ್ದರು. ನಂತರ ದನ ಕಾಯುವ ಹುಡುಗರು ಸಮೀಪದ ಕೆರೆಯೊಂದರಲ್ಲಿ ಬಾಲಕಿಯ ಶವ ಪತ್ತೆಯಾಗಿದೆ ಎಂದು ಪೊಲೀಸರಿಗೆ ವಿಷಯ ತಿಳಿಸಿದರು. ಅನಿತಾ ಕುಟುಂಬದವರು ಬಾಲಕಿಯ ಶವವನ್ನು ಗುರುತಿಸಿದ್ದರು.
ಹರ್ಷಿತಾಳ ತಾಯಿ ಹೇಳಿಕೆ ಪ್ರಕಾರ ಬುಡುಬುಡಿಕೆ ದಾಸಯ್ಯನೇ ಬಾಲಕಿಯನ್ನು ಕೊಂದಿದ್ದಾನೆ ಎಂದು ದೂರಿದ್ದಾರೆ. ಸೋಮವಾರ ಮನೆ ಮುಂದೆ ಬಂದು ನಿಲ್ಲುತ್ತಿದ್ದ ಬುಡುಬುಡಿಕೆ ದಾಸಯ್ಯನದ್ದೇ ಕೃತ್ಯ. ಭಿಕ್ಷೆ ಬೇಡುವ ನೆಪದಲ್ಲಿ ಬಾಲಕಿಯ ಬಟ್ಟೆ ನೀಡುವಂತೆ ಪೀಡಿಸುತ್ತಿದ್ದ. ಬಾಲಕಿಯ ಹಳೆ ಬಟ್ಟೆ ಯಾವುದು ಇಲ್ಲ ಎಂದು ಹೇಳಿದೆ.
ಆತ ಮುಂದಕ್ಕೆ ಹೋಗಿ ಸ್ವಲ್ಪದರಲ್ಲೇ ಹರ್ಷಿತಾ ನಾಪತ್ತೆಯಾಗಿದ್ದಾಳೆ. ಆಲ್ಲದೆ ಶವವನ್ನು ಪರೀಕ್ಷಿಸಿದಾಗ ಆಕೆಯ ಹೆಬ್ಬರಳು ಕತ್ತರಿಸಿದೆ. ಹೀಗಾಗಿ ವಾಮಾಚಾರಕ್ಕಾಗಿ ಮಗುವನ್ನು ಬಲಿಕೊಡಲಾಗಿದೆ ಎಂದು ಅನಿತಾ ಹೇಳಿದ್ದಾರೆ.
ಇನ್ನೊಂದು ಅಂಶದ ಪ್ರಕಾರ ಮಗುವಿನ ದೇಹದ ಮೇಲೆ ಅನೇಕ ಕಡೆ ಗಾಯದ ಗುರುತುಗಳಿದೆ. ಅತ್ಯಾಚಾರ ಎಸೆಗಿದ ದುಷ್ಕರ್ಮಿಗಳು ನಂತರ ಕೊಲೆ ಮಾಡಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ಅದರೆ, ಇನ್ನೂ ಹರ್ಷಿತಾ ಸಾವಿನ ನಿಖರ ಕಾರಣ ತಿಳಿದು ಬಂದಿಲ್ಲ.