ರಾಷ್ಟ್ರಪತಿ ಆಯ್ಕೆ ವಿಚಾರದಲ್ಲೂ ಈ ರಾಜಕೀಯ ಬೇಕಿತ್ತಾ

ಯುಪಿಎ ಕೆಲ ದಿನದ ಹಿಂದೆಯೇ ಪ್ರಣಬ್ ಮುಖರ್ಜಿ ಹೆಸರನ್ನು ಅಂತಿಮಗೊಳಿಸಿತ್ತು. ಹೆಸರು ಅಂತಿಮಗೊಳಿಸುವ ಮುನ್ನ ಸಾಕಷ್ಟು ಕಸರತ್ತು ನಡೆಸಬೇಕಾಗಿ ಬಂತು. ಆದರೂ ತನ್ನದೇ ಮೈತ್ರಿಕೂಟದ ಅಂಗಪಕ್ಷವಾದ ತೃಣಮೂಲ ಕಾಂಗ್ರೆಸ್ ಪಕ್ಷದ ವಿರೋಧ ಕಟ್ಟಿಕೊಳ್ಳಬೇಕಾಯಿತು. ದೀದಿ ಜೊತೆಗಿದ್ದ ಮುಲಾಯಂ ಕೊನೆಕ್ಷಣದಲ್ಲಿ ಸೋನಿಯಾ ಗಾಂಧೀ ಮೇಲೆ ನಿಯತ್ತು ತೋರಿಸಿಬಿಟ್ಟರು.
ಬೆಂಗಾಲಿ ಮೂಲದ ಹಿರಿಯ ಮುತ್ಸದ್ದಿ ಸೋಮನಾಥ್ ಚಟರ್ಜಿ ಅವರನ್ನು ಒಂದು ಹಂತದಲ್ಲಿ ಬೆಂಬಲಿಸುತ್ತಿದ್ದ ಮಮತಾ ಅದೇ ರಾಜ್ಯವನ್ನು ಪ್ರತಿನಿಧಿಸುವ ಪ್ರಣಬ್ ಮುಖರ್ಜಿ ಆಯ್ಕೆ ವಿರೋಧಿಸಲು ಯಾವ ರಾಜಕೀಯ ಕಾರಣಗಳಿವೆಯೋ? ಯುಪಿಎ ಸರಕಾರ ಅಧಿಕಾರಕ್ಕೆ ಬಂದ ನಂತರ ತಾನು ಹಿಡಿದ ಹಠ ಸಾಧಿಸಿಕೊಂಡೇ ಬರುತ್ತಿದ್ದ ದೀದಿಯ ಆಟಕ್ಕೆ ಈ ಬಾರಿ No.10, Janapath Road ಗೇಟ್ ತೆರೆಯಲೇ ಇಲ್ಲ.
ಯುಪಿಎ ಸರಕಾರವನ್ನು ಒಂದಲ್ಲಾ ಒಂದು ರೀತಿಯಲ್ಲಿ ತಮ್ಮ ಆವೇಶಭರಿತ ನಡುವಳಿಕೆಯಿಂದ ಮುಜುಗರಕ್ಕೆ/ ತರಾಟೆಗೆ ತೆಗೆದುಕೊಳ್ಳುತ್ತಿದ್ದ ಮಮತಾ ಈ ಬಾರಿ ಖುದ್ದು ಕಾಂಗ್ರೆಸ್ ಪಕ್ಷದಿಂದ ಮುಜುಗರಕ್ಕೆ ಒಳಗಾದರು. ಕಾಂಗ್ರೆಸ್ ಪಕ್ಷದ ನಿರ್ಧಾರವನ್ನು personally ತೆಗೆದುಕೊಂಡ ಹಾಗೆ ಕಾಣುವ ಮಮತಾ ಮೈತ್ರಿಕೂಟಕ್ಕೆ ಸದ್ಯದಲ್ಲೇ ಟಾಟಾ, ಬೈ ಹೇಳುವ ಮಾತನ್ನೂ ಆಡಿದ್ದಾರೆ. ಸದಾ ಆವೇಶದಿಂದಿರುವುದು ಆರೋಗ್ಯಕ್ಕೆ ಹಾನಿಕರ ಎನ್ನುವ ಶಾಶನ ವಿಧಿಸಿದ ಎಚ್ಚರಿಕೆ ಎನ್ನುವುದು ದೀದಿಗೆ ನಮ್ಮ ಕಡೆಯಿಂದ ಒಂದು ಕಿವಿಮಾತು.
ರಾಷ್ಟ್ರಪತಿ ಹುದ್ದೆಗೆ ಅವಿರೋಧ ಆಯ್ಕೆಯಾಗಬೇಕು, ಇಲ್ಲದಿದ್ದರೆ ಸ್ಪರ್ಧಿಸಿದರೆ ಜಯಸಿಗುವಂತಾದರೆ ಮಾತ್ರ ತಾನು ಉಮೇದುವಾರಿಕೆ ಸಲ್ಲಿಸುತ್ತೇನೆ, ಇಲ್ಲದಿದ್ದರೆ ಹುದ್ದೆಯ ಸಹವಾಸನೇ ಬೇಡ ಎಂದು ಸ್ಪರ್ಧೆಯಿಂದ ಹಿಂದಕ್ಕೆ ಸರಿದ ಅಬ್ದುಲ್ ಕಲಾಂ ಅವರ ನಿರ್ಧಾರ dignified step ಅಂದರೆ ತಪ್ಪಾಗಲಾರದು. ಈ ವಿಷಯದಲ್ಲಿ ಶಿವಸೇನೆ ತೆಗೆದುಕೊಂಡ ನಿರ್ಣಯ ಕೂಡಾ ಮೆಚ್ಚತಕ್ಕಂತದ್ದು.
ಇನ್ನು ಪ್ರಣಬ್ ಅವರನ್ನು ಬೆಂಬಲಿಸಿ ಹೇಳಿಕೆ ನೀಡಿದ ಯಡಿಯೂರಪ್ಪ ಅವರ ನಡೆಯ ಹಿಂದೆ ಅದೇನು ಮಹಾನ್ ರಾಜಕೀಯ ತಂತ್ರಗಾರಿಕೆ ಇದೆಯೋ ಯಡಿಯೂರು ಸಿದ್ದಲಿಂಗೇಶ್ವರನೇ ಬಲ್ಲ. ಪ್ರಣಬ್ ಬೆಂಬಲಿಸದ ಬೆನ್ನಲ್ಲೇ ಸಿಬಿಐ ಬಂಧನದ ಭಯದಿಂದ ಬಿಎಸ್ವೈ ಹೊರಬಂದಿದ್ದು ಕಾಕತಾಳೀಯವಾಗಿದ್ದರೂ ಆಗಿರಬಹುದು.
ಗೊಂದಲದ ಗೂಡಾಗಿ ಕೊನೆಗೂ ಸಂಗ್ಮಾ ಹೆಸರು ಅಂತಿಮಗೊಳಿಸಿದ ಯುಪಿಎ ಮೈತ್ರಿಕೂಟದ ನಿರ್ಧಾರಕ್ಕೆ ಶಿವಸೇನೆಯಿಂದ ಈಗಾಗಲೇ ಹಿನ್ನಡೆಯಾಗಿದ್ದರೂ ಹಿರಿಯ ತಲೆ ಆಡ್ವಾಣಿ ಮಾತಿಗೆ ಬೆಲೆಕೊಡದಷ್ಟು ಬಿಜೆಪಿ ಜೊತೆ ನಿಷ್ಟುರ ಕಟ್ಟುಕೊಂಡಿಲ್ಲ. ನರೇಂದ್ರ ಮೋದಿ ಮತ್ತು ನಿತೀಶ್ ಕುಮಾರ್ ನಡುವಣ ಶೀತಲ ಸಮರ ದಿಂದಾಗಿ ಎನ್ ಡಿ ಎ ಒಂದು ಗಟ್ಟಿ ನಿರ್ಧಾರಕ್ಕೆ ಬರಲು ಇಷ್ಟು ದಿನ ಕಾಲಾವಕಾಶ ತೆಗೆದುಕೊಳ್ಳ ಬೇಕಾಯಿತು ಎನ್ನುವುದು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿರುವ ಮಾತು. ಅಲ್ಲದೆ ನಿತೀಶ್ ತಮ್ಮ ಅಂತಿಮ ನಿರ್ಧಾರ ಪ್ರಕಟಿಸಿದ್ದು ಪ್ರಣಬ್ ಪರವಾಗಿ ಮತ ಚಲಾಯಿಸುವುದಾಗಿ ಹೇಳಿದ್ದಾರೆ.
ಆಖಾಡಕ್ಕೆ ಇಳಿಯುವ ಮುನ್ನವೇ ಅಪಜಯದ ಮಾತನ್ನು ಹೊರಬಿಡುತ್ತಿರುವ ಸುಷ್ಮಾ ಸ್ವರಾಜ್ ಕೊನೆಯ ಹಂತದವರೆಗೂ ಪೈಪೋಟಿ ನೀಡುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ. ಈ ಚುನಾವಣೆಯ ವಿಚಾರದಲ್ಲೇ ನಮ್ಮ ನಾಯಕರುಗಳ ನಡುವಳಿಕೆ ಹೀಗಾದರೆ ಇನ್ನು ಸಾಮಾನ್ಯ ಚುನಾವಣೆಯಲ್ಲಿ ಹೇಗಿರಬಹುದು. ಇನ್ನು ಸೋಲು ಹೆಚ್ಚುಕಮ್ಮಿ ಕಟ್ಟಿಟ್ಟಬುತ್ತಿ ಎಂದು ಗೊತ್ತಿದ್ದರೂ ಸಂಗ್ಮಾ ಯಾವ ಆಸೆ ಇಟ್ಟುಕೊಂಡು ಸ್ಪರ್ಧೆಗೆ ಇಳಿದಿದ್ದಾರೋ ತಿಳಿಯುತ್ತಿಲ್ಲ.
ಹಣದುಬ್ಬರ ನಿಯಂತ್ರಣಕ್ಕೆ ವಿತ್ತ ಸಚಿವಾಲಯ ವಿಫಲವಾಗಿರುವುದಕ್ಕೆ ವ್ಯಾಪಕವಾಗಿ ಕೇಳಿಬರುತ್ತಿರುವ ಟೀಕೆಗೆ ಒಂದು ರೀತಿಯಲ್ಲಿ ಸೋನಿಯಾ ಪ್ರಣಬ್ ಅವರನ್ನು ರಾಷ್ಟ್ರಪತಿ ಹುದ್ದೆಗೆ ಆರಿಸಿ ಇತ್ತ ಮಮತಾ ಬ್ಯಾನರ್ಜಿಗೆ ಮಣೆ ಹಾಕದೆ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಯನ್ನು ಹೊಡೆದರು ಎನ್ನುವ ಮಾತು ಕೂಡಾ ಕೇಳಿ ಬರುತ್ತಿದೆ.
ಇಲ್ಲಿ ಪ್ರಣಬ್ ಆಯ್ಕೆ ನಿಶ್ಚಿತ ಎಂದು ಸಿಂಪಲ್ ಲೆಕ್ಕಾಚಾರದ ನಡುವೆಯೂ ರಾಷ್ಟ್ರಪತಿ ಹುದ್ದೆಗೆ ಚುನಾವಣೆ ನಡೆಯುತ್ತಿರುವುದು ಒಂದು ರೀತಿಯಲ್ಲಿ ವಿಷಾದನೀಯವಲ್ಲವೇ? ಯಾಕೆಂದರೆ ಇಲ್ಲಿ ಹೇಸಿಗೆ ರಾಜಕೀಯ ಪ್ರವೇಶವಾಗದೆ ಎಲ್ಲಾ ಪಕ್ಷಗಳು ಕೂತು, ಚರ್ಚಿಸಿ ಸಮರ್ಥ ಅಭ್ಯರ್ಥಿಯನ್ನು ರಾಷ್ಟ್ರಪತಿಯಾಗಿ ಆಯ್ಕೆ ಮಾಡುವ ಜವಾಬ್ದಾರಿ ಹೊರಬೇಕಾಗಿತ್ತು. ಏನಂತೀರಿ?












Click it and Unblock the Notifications