ಯುವ ಅಥ್ಲೀಟ್ ರೇಪ್; ಆಟೋ ಚಾಲಕನ ಬಂಧನ
ಯುವ ಅಥ್ಲೀಟ್ ಮೇಲೆ ಅತ್ಯಾಚಾರ ನಡೆದಿರುವ ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿದೆ. ಆದ್ದರಿಂದ ಆರೋಪಿ ರಂಜಿತ್ ದಾಸ್ ಎಂಬ 28 ವರ್ಷದ ಆಟೋ ಡ್ರೈವರನನ್ನು ಪೊಲೀಸರು ಸೋಮವಾರ ಸಂಜೆ ಬಂಧಿಸಿದ್ದಾರೆ.
25 ವರ್ಷದ ಬಾಧಿತ ಯುವ ಅಥ್ಲೀಟ್, ರಾಯ್ ಗಂಜಿನಿಂದ ಹೇಮತಾಬಾದಿನಲ್ಲಿರುವ ತನ್ನ ಮನೆಗೆ ಭಾನುವಾರ ರಾತ್ರಿ ವಾಪಸಾಗುತ್ತಿದ್ದಾಗ ಈ ಘಟನೆ ನಡೆದಿದೆ. ಇತರೆ ಪ್ರಯಾಣಿಕರೊಂದಿಗೆ ಈ ಬಾಧಿತ ಯುವ ಅಥ್ಲೀಟ್ ಸಹ ಆಟೋದಲ್ಲಿ ಪ್ರಯಾಣಿಸುತ್ತಿದ್ದಳು.
ಆದರೆ ಮಾರ್ಗ ಮಧ್ಯೆ, ಸದರಿ ಯುವತಿ ಮೂಕಿ ಮತ್ತು ಕಿವುಡಿ ಎಂಬುದನ್ನ ಅರಿತ ಆರೋಪಿ ರಂಜಿತ್ ದಾಸ್ ಉಳಿದ ಪ್ರಯಾಣಿಕರನ್ನು ಅವರವರ ಸ್ಥಳಗಳಲ್ಲಿ ಬಿಟ್ಟ ಮೇಲೆ ಈಕೆಯನ್ನು ತನ್ನ ಮನೆಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ.
ಮಾರನೆಯ ದಿನ ಸೀದಾ ಪೊಲೀಸ್ ಠಾಣೆಗೆ ಹೋದ ಬಾಧಿತ ಯುವ ಅಥ್ಲೀಟ್ ಹಾಳೆಯ ಮೇಲೆ ಬರೆದು ಪೊಲೀಸರಿಗೆ ತನ್ನ ದುಃಸ್ಥಿತಿಯನ್ನು ವಿವರಿಸಿದ್ದಾಳೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಘಟನೆಗೆ ಸ್ಪಂದಿಸಿರುವ ಮಾಜಿ ಸಚಿವ ಕಾಂತಿ ಗಂಗೂಲಿ ಅವರು ಆರೋಪಿಗೆ ಕಠಿನ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
2006ರಲ್ಲಿ ನಡೆದ ಪ್ಯಾರಾ ಅಥ್ಲೇಟಿಕ್ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಬಾಧಿತ ಯುವ ಅಥ್ಲೀಟ್ ಚಿನ್ನದ ಪದಕ ಗಳಿಸಿದ್ದರು. ಕಳೆದ ವರ್ಷ ಡಿಸೆಂಬರ್ 3 ರಂದು ಅಂತಾರಾಷ್ಟ್ರೀಯ ವಿಕಲಾಂಗ ದಿನಾಚರಣೆಯ ಅಂಗವಾಗಿ ರಾಜ್ಯಪಾಲ ಎಂಕೆ ನಾರಾಯಣನ್ ಅವರು 'ಮಾದರಿ ಅಥ್ಲೀಟ್' ಎಂದು ಗೌರವಿಸಿ, ಸನ್ಮಾಸಿದ್ದರು.