ಕೋರ್ಟ್ ಆದೇಶ :ಯಡಿಯೂರಪ್ಪಗೆ ಮದುವೆ ಊಟ ಮಿಸ್
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರ ಪುತ್ರನ ವಿವಾಹ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಮಹಾರಾಷ್ಟ್ರದ ನಾಗಪುರಕ್ಕೆ ತೆರಳುವ ಕಾರ್ಯಕ್ರಮವನ್ನು ಯಡಿಯೂರಪ್ಪ ಆವರು ಅನಿವಾರ್ಯವಾಗಿ ರದ್ದುಗೊಳಿಸಬೇಕಾಗಿದೆ.
ಅಕ್ರಮ ಗಣಿ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಪಡೆದ ಯಡಿಯೂರಪ್ಪ ಅವರಿಗೆ ಅನುಮತಿ ಇಲ್ಲದೆ ಬೆಂಗಳೂರು ಬಿಟ್ಟು ಹೋಗುವಂತಿಲ್ಲ ಎಂದು ಹೈಕೋರ್ಟ್ ಷರತ್ತು ವಿಧಿಸಿದೆ. ಹೀಗಾಗಿ ಗಡ್ಕರಿ ಪುತ್ರ ಸಾರಂಗ್ ಮದುವೆಯಲ್ಲಿ ಪಾಲ್ಗೊಳ್ಳಲು ಆಗುತ್ತಿಲ್ಲ.
ಯಡಿಯೂರಪ್ಪ ಅವರು ತಮ್ಮ ಬೆಂಬಲಿಗರೊಂದಿಗೆ ನಾಗ್ಪುರದಲ್ಲಿ ನಡೆಯಲಿರುವ ಗಡ್ಕರಿ ಪುತ್ರನ ಮದುವೆಗೆ ತೆರಳಲು ಉದ್ದೇಶಿಸಿದ್ದರು. ಆದರೆ, ಕೋರ್ಟ್ ಆದೇಶ ಹೊರ ಬಿದ್ದಿದ್ದರಿಂದ ಸುಮ್ಮನಾಗಿದ್ದಾರೆ. ಆದರೆ, ಜು.2 ರಂದು ನವದೆಹಲಿಯಲ್ಲಿ ನಡೆಯುವ ಅರತಕ್ಷತೆಯಲ್ಲಿ ಭಾಗವಹಿಸುವ ಸಾಧ್ಯತೆಗಳಿದೆ. ಇದಕ್ಕಾಗಿ ಕೋರ್ಟ್ ಅನುಮತಿ ಪಡೆಯಲಿದ್ದಾರೆ ಎಂದು ಯಡಿಯೂರಪ್ಪ ಅವರ ಆಪ್ತರು ಹೇಳಿದ್ದಾರೆ.
ಜುಲೈ ಮೊದಲ ವಾರ ಯಡಿಯೂರಪ್ಪ ಅವರ ಬೇಡಿಕೆಗಳಿಗೆ ಹೈ ಕಮಾಂಡ್ ಸೊಪ್ಪು ಹಾಕದಿದ್ದರೆ, ಜುಲೈ ಅಂತ್ಯದ ವರೆಗೂ ಯಡಿಯೂರಪ್ಪ ಅವರಿಗೆ ಶುಭ ಸುದ್ದಿ ಸಿಗುವ ಲಕ್ಷಣಗಳಿಲ್ಲ. ಬಿಜೆಪಿ ರಾಷ್ಟ್ರೀಯ ನಾಯಕರು ರಾಷ್ಟ್ರಪತಿ ಚುನಾವಣೆಯಲ್ಲಿ ಮುಳುಗಲಿರುವ ಕಾರಣ, ಯಡಿಯೂರಪ್ಪ ಅವರ ಬೇಡಿಕೆ ಹಾಗೇ ಉಳಿಯಲಿದೆ.
ಜಿಂದಾಲ್ ನಲ್ಲಿ ರೆಸ್ಟ್ : ಇತ್ತೀಚಿನ ಬೆಳವಣಿಗೆಗಳಿಂದ ತೀವ್ರ ಆಯಾಸಗೊಂಡಿರುವ ಯಡಿಯೂರಪ್ಪ ಅವರು ವಿಶ್ರಾಂತಿಗಾಗಿ ಬೆಂಗಳೂರಿನ ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ದಾಖಲಾಗಿದ್ದಾರೆ ಮೂರು ದಿನಗಳ ಕಾಲ ಯಡಿಯೂರಪ್ಪ ಅವರು ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿಯೇ ವಿಶ್ರಾಂತಿ ಪಡೆಯಲಿದ್ದಾರೆ.
ಪಕ್ಷದ ರಾಜ್ಯಾಧ್ಯಕ್ಷ ನಿತಿನ್ ಗಡ್ಕರಿ ಅವರ ಪುತ್ರ ಸಾರಂಗ್ ಮದುವೆಗೆ ಯಡಿಯೂರಪ್ಪ ಅವರು ಗೈರು ಆದ ಬೆನ್ನಲ್ಲೇ ಖಾಸಗಿ ಕಾರಣವೊಡ್ಡಿ ಈಶ್ವರಪ್ಪನವರು ಚಕ್ಕರ್ ಹಾಕಿದ್ದಾರೆ. ಈಶ್ವರಪ್ಪ ಅವರು ಸೀದಾ ಜಿಂದಾಲಿಗೆ ತೆರಳಿ ಹಳೆ ಗೆಳೆಯ ಯಡಿಯೂರಪ್ಪ ಜತೆ ಮಾತುಕತೆ ನಡೆಸಿದ್ದಾರೆ.
ಪಕ್ಷದ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ ಅವರ ಪುತ್ರ ಸಾರಂಗ್ ಅವರ ಮದುವೆಗೆ ರಾಜ್ಯ ಬಿಜೆಪಿ ನಾಯಕರು ಪ್ರತ್ಯೇಕವಾಗಿ 2 ತಂಡಗಳಲ್ಲಿ ಭಾನುವಾರ ನಾಗಪುರಕ್ಕೆ ತೆರಳಿದ್ದಾರೆ. ಹಾಲಿ ಮುಖ್ಯಮಂತ್ರಿ ಮತ್ತು ಮಾಜಿ ಮುಖ್ಯಮಂತ್ರಿ ಎಂದು ಎರಡು ತಂಡಗಳಲ್ಲಿ ಪ್ರತ್ಯೇಕ ವಿಮಾನಗಳಲ್ಲಿ ಈ ನಾಯಕರು ಮದುವೆಗೆ ಹೋಗಿಬಂದಿದ್ದಾರೆ. ಗಡ್ಕರಿ ಪುತ್ರನ ಮದುವೆಗೆ ಬಿಜೆಪಿಯ ವರಿಷ್ಠ ನಾಯಕರು ಮತ್ತು ಮುಖ್ಯಮಂತ್ರಿ ಡಿ.ವಿ. ಸದಾನಂದ ಕೂಡ ಭಾಗವಹಿಸಲಿದ್ದಾರೆ. ಇಲ್ಲಿ ಮತ್ತೆ ರಾಷ್ಟ್ರೀಯ ನಾಯಕರೊಂದಿಗೆ ಮಾತುಕತೆ ನಡೆಸಬೇಕಾಗುತ್ತದೆ.