ಸುರೇಶ್ ಕುಮಾರ್ ಪತ್ರಿಕಾಗೋಷ್ಠಿ ಸಂಪೂರ್ಣ ವಿವರ

Suresh Kumar press conference details
ಬೆಂಗಳೂರು, ಜೂ. 21 : ಬೆಳ್ಳಂಬೆಳಿಗ್ಗೆ 6 ಗಂಟೆಗೆ ತಮ್ಮ ವಿರುದ್ಧ ಅಕ್ರಮವಾಗಿ ನಿವೇಶನ ಪಡೆದ ಸುದ್ದಿ ಪತ್ರಿಕೆಯಲ್ಲಿ ಓದುತ್ತಿದ್ದಂತೆ 7 ಗಂಟೆಗೆಲ್ಲ ರಾಜೀನಾಮೆ ಪತ್ರ ಬರೆದು 8.30ರ ಹೊತ್ತಿಗೆ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿಗೆ ಸಲ್ಲಿಸಿ, ನನ್ನ ಆತ್ಮಸಾಕ್ಷಿಗೆ ತೋಚಿದಂತೆ ನಿರ್ಧಾರ ಕೈಗೊಂಡಿದ್ದೇನೆ, ಮುಂದಿನದು ನಿಮಗೆ ಬಿಟ್ಟಿದ್ದು ಎಂದು ವಿನಮ್ರವಾಗಿ ನಿಂತವರು ನಗರಾಭಿವೃದ್ಧಿ ಮತ್ತು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಸುರೇಶ್ ಕುಮಾರ್ ಅವರು.

ಅವರು ರಾಜೀನಾಮೆ ಸಲ್ಲಿಸಿದ್ದು, ಅವರನ್ನು ಬೆಂಬಲಿಸುವ ಪಕ್ಷದ ಸಹೋದ್ಯೋಗಿಗಳನ್ನು ಮಾತ್ರವಲ್ಲ ವಿರೋಧ ಪಕ್ಷದ ನಾಯಕರನ್ನು ಕೂಡ ದಂಗುಬಡಿಸಿದೆ. ರಾಜೀನಾಮೆ ನೀಡಿ ಇತರ ರಾಜಕಾರಣಿಗಳಿಗೆ ಮಾದರಿಯಾಗಬೇಕು ಎಂದು ಅನ್ನುವವರದು ಒಂದು ಗುಂಪಾದರೆ, ಇಂಥ ಸತ್ಯಸಂಥ ರಾಜಕಾರಣಿಗಳನ್ನು ಕರ್ನಾಟಕ ಕಳೆದುಕೊಳ್ಳಬಾರದು, ಅವರ ರಾಜೀನಾಮೆ ಸ್ವೀಕರಿಸಬಾರದು ಎನ್ನುವವರದು ಮತ್ತೊಂದು ಗುಂಪು. ಇದೇ ಸಂದರ್ಭದಲ್ಲಿ ತಾವು ನಡೆದುಕೊಂಡಿದ್ದನ್ನು ಸಮರ್ಥಿಸಿಕೊಂಡು, ಈ ನಿವೇಶನದ ಹಿಂದಿನ ಕಥೆಯನ್ನು ಸುರೇಶ್ ಕುಮಾರ್ ಅವರು ತಮ್ಮ ಸ್ವಗೃಹದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಬಿಚ್ಚಿಟ್ಟಿದ್ದಾರೆ. ಅದರ ವಿವರ ಇಲ್ಲಿದೆ.

"ನನ್ನ ತಾಯಿ ನಿವೃತ್ತ ಶಿಕ್ಷಕಿ. ತಾನು ಕೂಡಿಸಿಟ್ಟ ಹಣ ಮತ್ತು ಅವರಿಗೆ ಬಂದ ನಿವೃತ್ತ ಧನವನ್ನು ಬಳಸಿಕೊಂಡು 1994ರಲ್ಲಿ ರಾಮಮನೋಹರಪುರ ರೈಲ್ವೆ ಪ್ಯಾರಲಲ್ ರಸ್ತೆಯಲ್ಲಿ ಒಂದು ಮನೆಯನ್ನು ಕೊಂಡಿದ್ದರು. ನಾನು ಕೂಡ ಅದೇ ಮನೆಯಲ್ಲಿ ವಾಸವಾಗಿದ್ದೆ. 2007ರಲ್ಲಿ ಬಿಎಂಪಿ ಮತ್ತು 2009ರಲ್ಲಿ ಬಿಬಿಎಂಪಿಯಿಂದ ರಸ್ತೆ ಅಗಲೀಕರಣದ ನೋಟೀಸ್ ಬಂದಿತ್ತು. ರಸ್ತೆ ಅಗಲೀಕರಣದಿಂದ ಮನೆ ಕಳೆದುಕೊಳ್ಳುವ ಪರಿಸ್ಥಿತಿ ಬಂದಿತ್ತು.

ಇದು ಅಂದಿನ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರ ಗಮನಕ್ಕೆ ಬಂದು 2003-04ರಲ್ಲಿ ಬದಲಿ ನಿವೇಶನ ಕೊಡುವುದಾಗಿ ಹೇಳಿದ್ದರು. ಆದರೆ, ವಿಧಾನಸಭೆ ಸದಸ್ಯನಾಗಿದ್ದ ನಾನು ಜಿ ಕೆಟಗರಿ ನಿವೇಶನ ಅಗತ್ಯವಿಲ್ಲ ಎಂದು ಅದನ್ನು ತಿರಸ್ಕರಿಸಿದ್ದೆ. ಆದರೆ, 2009ರಲ್ಲಿ ಬಿಬಿಎಂಪಿಯಿಂದ ಮತ್ತೆ ನೋಟೀಸ್ ಬಂದ ನಂತರ ಯಡಿಯೂರಪ್ಪನವರಿಗೆ ತಮ್ಮ ಕೋಟಾದಡಿ ಒಂದು ನಿವೇಶನ ಕೊಡುವಂತೆ ಮನವಿ ಪತ್ರ ಕೊಟ್ಟಿದ್ದೆ.

ನನ್ನ ಮನವಿ ಮನ್ನಿಸಿ 2009ರ ಜೂನ್‌ನಲ್ಲಿ ನಾಗರಭಾವಿಯಲ್ಲಿ ನಿವೇಶನ ಕೊಟ್ಟರು. ಆಗ ಬಿಡಿಎಗೆ ಪ್ರಮಾಣಪತ್ರ ಕೊಟ್ಟಿದ್ದು ನಿಜ. ಬಿಡಿಎ ವ್ಯಾಪ್ತಿಯಲ್ಲಿ ನನಗಾಲಿ, ನನ್ನ ಹೆಂಡತಿ ಅಥವಾ ಅವಲಂಬಿತ ಮಕ್ಕಳಾಗಲಿ ಯಾವುದೇ ನಿವೇಶನ ಮನೆ ಮಾಲಿಕತ್ವ ಇಲ್ಲ. ಬಿಡಿಎ ವ್ಯಾಪ್ತಿಯಲ್ಲಿ, ಹೌಸಿಂಗ್ ಸೊಸೈಟಿ ಅಥವಾ ಯಾವುದೇ ಗೃಹ ನಿರ್ಮಾಣ ಮಂಡಳಿಯಿಂದ ನಿವೇಶನ ಮಂಜೂರಾಗಿಲ್ಲ ಎಂದು ಅಫಿಡವಿಟ್ ಸಲ್ಲಿಸಿದ್ದು ನಿಜ.

ಆ ನಿವೇಶನ 2009ರ ಜೂನ್ 22ರಂದು ನಾಗರಭಾವಿಯಲ್ಲಿ 50X80 ಮಂಜೂರಾಯಿತು. ಅದು 2010ರ ಜನವರಿ 23ರಂದು ನೊಂದಾವಣಿಯಾಯಿತು. ಮುಂದೆ ಆರೇ ತಿಂಗಳಲ್ಲಿ 2010ರ ಜೂನ್ 2ರಂದು ಡಿನೋಟಿಫೈ ಮಾಡಲಾಯಿತು. ಎಸ್‌ಬಿಐನಿಂದ ಮನೆ ಸಾಲ ಪಡೆದಿದ್ದ ನಾನು, ನಿವೇಶನ ಡಿನೋಟಿಫೈ ಆಗಿದ್ದರೂ ತಿಂಗಳಿಗೆ 45 ಸಾವಿರ ರು. ಹಣ ಇಎಮ್ಐ ಆಗಿ ಪಾವತಿಸುತ್ತಿದ್ದೆ. ನಂತರ ಸೈಟ್ ಕಳೆದುಕೊಂಡರೂ ಹಣ ಪಾಪತಿಸುತ್ತಿದ್ದೆ.

ವಸ್ತುಸ್ಥಿತಿಯನ್ನು ವಿವರಿಸಿ ಯಡಿಯೂರಪ್ಪನವರಿಗೆ ಸೈಟ್ ಕಳೆದುಕೊಂಡ ಬಗ್ಗೆ ಮತ್ತೊಂದು ಪತ್ರ ಬರೆದೆ. ಆಗ 2011ರ ಏಪ್ರಿಲ್ 6ರಂದು ಲೊಟ್ಟೆಗೊಲ್ಲನಹಳ್ಳಿಯಲ್ಲಿ ಮತ್ತೊಂದು ನಿವೇಶನ ಮಂಜೂರಾಯಿತು. ನಾನು ಲೋಕಾಯುಕ್ತರಿಗೆ ಸಂಪೂರ್ಣ ವಿವರ ಕೊಟ್ಟಿದ್ದೇನೆ. ನೆಲಮಂಗಲ ಯೋಜನಾ ಪ್ರಾಧಿಕಾರದ ವ್ಯಾಪ್ತಿಯಲ್ಲಿ, ಸತ್ಯನಾರಾಯಣ ಗೃಹನಿರ್ಮಾಣ ಸಹಕಾರ ಸಂಘ ವತಿಯಿಂದ ನನ್ನ ತಾಯಿ ಮತ್ತು ಸಂಬಂಧಿಕರೊಬ್ಬರು ಹೆಂಡತಿ ಸಿಸ್ಟರ್ 30X40 ಸೈಟನ್ನು ಡಿಸೆಂಬರ್ 7ರಂದು ತೆಗೆದುಕೊಂಡಿರುವುದು ಬಿಡಿಎ ವ್ಯಾಪ್ತಿಯ ಆಚೆ. ಅದನ್ನೂ ಮುಚ್ಚಿಟ್ಟಿಲ್ಲ. ಸೈಟನ್ನು ದೊಡ್ಡಮ್ಮ ನನ್ನ ಮಗಳಿಗೆ ವರ್ಗಾಯಿಸಿದರು. ನನ್ನ ಆಸ್ತಿ ತೆರಿಗೆ ವಿವರದಲ್ಲಿ ಎಲ್ಲವನ್ನೂ ಸಂಪೂರ್ಣವಾಗಿ ತಿಳಿಸಿದ್ದೇನೆ.

ಈಗ ಆ ಯಾವ ನಿವೇಶನವೂ ಇಲ್ಲ. ರೈಲ್ವೆ ಪ್ಯಾರಲಲ್ ರಸ್ತೆಯಲ್ಲಿ ಮತ್ತು ನೆಲಮಂಗಲದಲ್ಲಿದ್ದ ನಿವೇಶನವನ್ನು ಮಾರಾಟ ಮಾಡಿ ಈಗಿನ ಮನೆಯನ್ನು 2011ರ ಸೆಪ್ಟೆಂಬರ್‌ನಲ್ಲಿ ಕೊಂಡುಕೊಳ್ಳಲಾಗಿದೆ. ಇಷ್ಟು ಬಿಟ್ಟರೆ ನನಗಾಗಲಿ, ನನ್ನ ಕುಟುಂಬದವರಿಗಾಗಲಿ ಯಾವುದೇ ಜಿ ಕೆಟಗರಿ ನಿವೇಶನ ನೀಡಲಾಗಿಲ್ಲ. ಸತ್ಯಕ್ಕೆ ಅಪಚಾರವಾಗುವಂತೆ ಅಫಿಡವಿಟ್ ಸಲ್ಲಿಸಿಲ್ಲ. ಕಳೆದ 29 ವರ್ಷಗಳಿಂದ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿದ್ದೇನೆ. ಈಗ ನನ್ನ ವಿರುದ್ಧ ಮಾಡುತ್ತಿರುವ ಆರೋಪದಿಂದ ತುಂಬಾ ನೊಂದಿದ್ದೇನೆ."

ಇದನ್ನೆಲ್ಲ ಮುಖ್ಯಮಂತ್ರಿಗಳ ಗಮನಕ್ಕೂ ತಂದಿದ್ದೇನೆ. ತನಿಖೆ ನಡೆಯಲಿ, ಸತ್ಯ ಹೊರಗೆ ಬರಲಿ. ಆದರೆ, ಪಕ್ಷಕ್ಕೆ ಕೆಟ್ಟ ಹೆಸರು ಬರಬಾರದು ಮತ್ತು ಮುಜುಗರ ಉಂಟಾಗಬಾರದು ಎಂದು ರಾಜೀನಾಮೆ ನೀಡಿದ್ದೇನೆ. ಮತ್ತೆ ಪ್ರಮಾಣ ಮಾಡುತ್ತೇನೆ ಕರ್ನಾಟಕ ಮಾತ್ರವಲ್ಲ ದೇಶದ ಯಾವುದೇ ಸ್ಥಳದಲ್ಲಿ ಯಾವುದೇ ಸಂಸ್ಥೆಯಿಂದ ರಿಯಾಯಿತಿ ನಿವೇಶನ ಮಂಜೂರಾಗಿಲ್ಲ. ಇದು ನೂರಕ್ಕೆ ಮುನ್ನೂರರಷ್ಟು ಸತ್ಯ. ಖಂಡಿತ ಲೋಪ ಎಸಗಿಲ್ಲ. ಮುಖ್ಯಮಂತ್ರಿ ತಿಳಿದ ರೀತಿಯಲ್ಲಿ ಸತ್ಯಾಸತ್ಯತೆ ಕಂಡುಕೊಳ್ಳಲಿ."

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+