ಸುರೇಶ್‌ಗೆ ಬಂದ ಕಷ್ಟ ಕಂಡು ಗದ್ಗದಿತರಾದ ರಾಮದಾಸ್

Should Suresh Kumar resign?
ಬೆಂಗಳೂರು, ಜೂ. 23 : ಒಬ್ಬ ನಿರ್ವಿವಾದಿತ ರಾಜಕಾರಣಿ ಯಾವುದೋ ವಿವಾದದಲ್ಲಿ ಸಿಲುಕಿ ರಾಜೀನಾಮೆ ನೀಡಿದಾಗ ಪಕ್ಷಭೇದ ಮರೆತು ವಿರೋಧ ಪಕ್ಷದ ರಾಜಕಾರಣಿಗಳು ಕೂಡ ಅವರ ಬೆಂಬಲಕ್ಕೆ ನಿಂತಿರುವುದು ಮತ್ತು ಕಾರ್ಯಕರ್ತರು ಹಾಗು ಸಾರ್ವಜನಿಕರು ಅವರು ರಾಜೀನಾಮೆ ನೀಡಬಾರದೆಂದು ಬೀದಿಗಿಳಿದಿರುವುದು ಭಾರತದ ರಾಜಕಾರಣದಲ್ಲಿ ತೀರ ಅಪರೂಪ.

ಅಕ್ರಮವಾಗಿ ಬಿಡಿಎ ನಿವೇಶನವನ್ನು ಪಡೆದಿದ್ದಾರೆಂದು ಭಾಸ್ಕರನ್ ಎಂಬುವವರು ಆರೋಪಿಸಿರುವ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಎಸ್ ಸುರೇಶ್ ಕುಮಾರ್ ಅವರ ಪರವಾಗಿ ಸಂತಾಪದ ಸುರಿಮಳೆಯೇ ಹರಿದುಬರುತ್ತಿದೆ. ಸುರೇಶ್ ಕುಮಾರ್ ರಾಜೀನಾಮೆ ನೀಡಬಾರದು, ವಾಪಸ್ ಪಡೆಯಬೇಕು ಎಂದು ಒಕ್ಕೊರಲಿನಿಂದ ಕೂಗುತ್ತಿದ್ದಾರೆ.

ಗಳಗಳನೆ ಅತ್ತ ರಾಮದಾಸ್ : ಸುರೇಶ್ ಅಂತಹ ಪ್ರಮಾಣಿಕ ರಾಜಕಾರಣಿಯ ಮೇಲೆ ಇಂತಹ ಅಪವಾದ ಬಂದಿರುವುದಕ್ಕೆ ಕಣ್ಣೀರು ಹರಿಸಿರುವ ವೈದ್ಯಕೀಯ ಸಚಿವ ಎ ರಾಮದಾಸ್ ಅವರು, ಸುರೇಶ್ ಕುಮಾರ್ ಅವರು ಕಳೆದ 30 ವರ್ಷಗಳಿಂದ ಕಳಂಕಮುಕ್ತ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಅವರ ಮೇಲೆ ಸಲ್ಲದ ಆರೋಪ ಹೊರಿಸುವುದು ಸರ್ವಥಾ ಸಲ್ಲ ಎಂದು ಗದ್ಗದಿತರಾಗಿ ಕಣ್ಣೀರುಗರೆದರು.

ಒಂದು ಸಣ್ಣ ಆರೋಪ ಬಂದ ಕೂಡಲೆ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡುವ ಸುರೇಶ್ ಅಂಥವರ ಸಜ್ಜನ ರಾಜಕಾರಣಿಗಳ ಬಣ ಒಂದೆಡೆಯಾದರೆ, ಮೈತುಂಬ ಆರೋಪಗಳನ್ನು ಹೊತ್ತರೂ ಕೂಡ ರಾಜೀನಾಮೆ ನೀಡಲು ನಿರಾಕರಿಸುವಂತಹ ದುರ್ಜನ ರಾಜಕಾರಣಿಗಳ ಬಣ ಇನ್ನೊಂದೆಡೆ ನಮ್ಮ ದೇಶದಲ್ಲಿ ಇದೆ ಎಂದು ರಾಮದಾಸ್ ಪರೋಕ್ಷವಾಗಿ ಭ್ರಷ್ಟ ರಾಜಕಾರಣಿಗಳ ವಿರುದ್ಧ ಮಾತಿನ ಪ್ರಹಾರ ಮಾಡಿದರು.

ಸುರೇಶ್ ಅಂತಹ ಸರಳ, ಸಜ್ಜನ ರಾಜಕಾರಣಿಯ ಸೇವೆ ನಾವು ಕಳೆದುಕೊಳ್ಳುವಂತೆ ಆಗಬಾರದು. ಅವರು ಸಲ್ಲಿಸಿರುವ ರಾಜೀನಾಮೆ ಯಾವುದೇ ಕಾರಣಕ್ಕೂ ಸ್ವೀಕರಿಸಬಾರದು. ಪ್ರಾಮಾಣಿಕತೆಯ ಹೆಮ್ಮರಕ್ಕೆ ಕೊಡಲಿ ಏಟು ಹಾಕಬೇಡಿ ಎಂದು ರಾಮದಾಸ್ ಅವರು, ಇಂತಹ ಹಗರಣವನ್ನು ಕೆಣಕುತ್ತಿರುವವರಿಗೆ ಮನವಿ ಮಾಡಿಕೊಂಡರು.

ಸುರೇಶ್ ಬೆಂಬಲಿಸಿ ಸಹಿ ಸಂಗ್ರಹ : ಈ ನಡುವೆ, ತಮ್ಮ ರಾಜಾಜಿನಗರ ಕ್ಷೇತ್ರದಲ್ಲಿ ಅಪಾರ ಜನಪ್ರಿಯತೆ ಗಳಿಸಿರುವ ಸುರೇಶ್ ಕುಮಾರ್ ಅವರು ರಾಜೀನಾಮೆ ನೀಡಬಾರದೆಂದು ಅವರನ್ನು ಬೆಂಬಲಿಸುತ್ತಿರುವ ಕಾರ್ಯಕರ್ತರು ಸಾರ್ವಜನಿಕರಿಂದ ಸಹಿ ಸಂಗ್ರಹಕ್ಕೆ ಮುಂದಾಗಿದ್ದಾರೆ. ಅವರ ಮನೆಯತ್ತ ಧಾವಿಸಿ ಅವರ ಬೆಂಬಲಕ್ಕೆ ನಿಂತಿದ್ದಾರೆ. ಪ್ರಾಮಾಣಿಕತೆಯ ಪ್ರತೀಕವಾಗಿರುವ ಸುರೇಶ್ ಕುಮಾರ್ ಮಾತ್ರ ತಮ್ಮ ಮನೆಯಲ್ಲಿ ಕುಳಿತಿದ್ದು, ಯಾವುದೇ ಕಾರಣಕ್ಕೂ ರಾಜೀನಾಮೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದ್ದಾರೆ. ಆದರೆ, ಯಾವುದೇ ಗಲಾಟೆ ಮಾಡಬಾರದು, ಸಂಯಮದಿಂದ ಇರಬೇಕು ಎಂದು ಸುರೇಶ್ ಅವರು ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ.

ಅಕ್ರಮ ಗಣಿಗಾರಿಕೆಯಲ್ಲಿ ಸಿಲುಕಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದ ಬಲವಂತವಾಗಿ ರಾಜೀನಾಮೆ ಪಡೆದ ಬಳಿಕ ರಾಜ್ಯದ ಚುಕ್ಕಾಣಿ ಯಾರ ಕೈಗೆ ಕೊಡಬೇಕು ಎಂದು ಸಾಕಷ್ಟು ಚರ್ಚೆ ನಡೆಸಲಾಗಿತ್ತು. ಆಗ ಒನ್ಇಂಡಿಯಾ ಕನ್ನಡದಲ್ಲಿ ನಡೆಸಲಾಗಿದ್ದ ಮತದಾನದಲ್ಲಿ ಎಲ್ಲ ಏಳೆಂಟು ರಾಜಕಾರಣಿಗಳನ್ನು ಹಿಂದಿಕ್ಕಿ, ಸುರೇಶ್ ಕುಮಾರ್ ಅವರೇ ಮುಖ್ಯಮಂತ್ರಿಯಾಗಬೇಕು ಎಂದು ಅಭಿಮತ ವ್ಯಕ್ತಪಡಿಸಿದ್ದರು. ಓದುಗರೆ, ಈಗ ನೀವೇ ಹೇಳಿ ಸುರೇಶ್ ಕುಮಾರ್ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕಾ, ವಾಪಸ್ ಪಡೆಯಬೇಕಾ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+