ರೇಣು ವಿರುದ್ಧ ತನಿಖೆ : ವರದಿ ಅಲ್ಲಗಳೆದ ಸರಕಾರ
ಈ ಹಗರಣದ ಬಗ್ಗೆ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರು ಅಬಕಾರಿ ಆಯುಕ್ತ ಅರವಿಂದ್ ಜನ್ನು ಅವರಿಂದ ವರದಿ ಆಗ್ರಹಿಸಿದ್ದಾರೆಯೇ ಹೊರತು, ಅಬಕಾರಿ ಸಚಿವರ ವಿರುದ್ಧ ತನಿಖೆ ನಡೆಸಬೇಕೆಂದು ಎಲ್ಲೂ ಹೇಳಿಲ್ಲ ಎಂದು ಅಬಕಾರಿ ಆಯುಕ್ತರೇ ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಪತ್ರಿಕೆಯೊಂದರಲ್ಲಿ 'ದಳ ದೂರು - ರೇಣು ವಿರುದ್ಧ ತನಿಖೆ' ಎಂಬ ವರದಿ ಪ್ರಕಟವಾಗಿದ್ದಕ್ಕೆ ಈ ಸ್ಪಷ್ಟೀಕರಣವನ್ನು ನೀಡಲಾಗಿದೆ. ಮುಖ್ಯಮಂತ್ರಿ ಸದಾನಂದ ಗೌಡರು ದಕ್ಷಿಣ ಕನ್ನಡ ಉಪ ಆಯುಕ್ತರ ಸ್ಪೆಷಲ್ ಸ್ಕ್ವಾಡ್ನ ಕಾರ್ಯವೈಖರಿ ಬಗ್ಗೆ ವಿವರಣೆ ಕೇಳಿದ್ದಾರೆಯೇ ಹೊರತು ರೇಣುಕಾಚಾರ್ಯ ವಿರುದ್ಧ ಎಲ್ಲೂ ತನಿಖೆಗೆ ಆದೇಶಿಸಿಲ್ಲ ಎಂದು ಅಬಕಾರಿ ಆಯುಕ್ತರು ಹೇಳಿದ್ದಾರೆ.
ಆಗಿದ್ದೇನೆಂದರೆ, ದಕ್ಷಿಣ ಕನ್ನಡ ಜಿಲ್ಲೆಯ ಜನತಾ ದಳ (ಜಾತ್ಯತೀತ) ಪಕ್ಷದ ಪ್ರಧಾನ ಕಾರ್ಯದರ್ಶಿ ಆರ್ ಧನರಾಜ್ ಎಂಬುವವರು, ಹಾಸನದಲ್ಲಿದ್ದ ಅಬಕಾರಿ ಉಪ ನಿರೀಕ್ಷಕರು ದಕ್ಷಿಣ ಕನ್ನಡ ಜಿಲ್ಲೆಗೆ ಅಬಕಾರಿ ಉಪ ಆಯುಕ್ತರ ಸ್ಪೆಷಲ್ ಸ್ಕ್ವಾಡ್ಗೆ ನಿಯೋಜಿತರಾಗಿ ಬಂದಿದ್ದು, ಜಿಲ್ಲೆಯ 30 ವೈನ್ ಶಾಪ್ ಮೇಲೆ ದಾಳಿ ಮಾಡಿ, ಸುಳ್ಳು ಕೇಸ್ ದಾಖಲಿಸಿ ಅವರಿಂದ 25 ಸಾವಿರ ರು. ಲಂಚ ಕೇಳುತ್ತಿದ್ದಾರೆಂದು ದೂರಿದ್ದರು.
ರಾಜ್ಯದಲ್ಲಿರುವ ಅಬಕಾರಿ ಉಪ ಆಯುಕ್ತರ ಸ್ಪೆಷಲ್ ಸ್ಕ್ವಾಡ್ ಭ್ರಷ್ಟಾಚಾರ ನಡೆಸುತ್ತಿದ್ದು, ಭ್ರಷ್ಟ ಅಧಿಕಾರಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಮೇ 25ರಂದು ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ಆಗ್ರಹಿಸಿದ್ದರು. ಇದಕ್ಕೆ ಸ್ಪಂದಿಸಿದ್ದ ಡಿವಿ ಸದಾನಂದ ಗೌಡರು, ಮಂಗಳೂರು ಪ್ರಕರಣದ ಬಗ್ಗೆ ತನಿಖೆ ನಡೆಸಿ ಮೂರು ದಿನಗಳೊಳಗೆ ವರದಿ ನೀಡಬೇಕೆಂದು ಆದೇಶಿಸಿದ್ದರು. ಇದು, ಅಬಕಾರಿ ಸಚಿವರ ವಿರುದ್ಧವೇ ತನಿಖೆಗೆ ಮುಖ್ಯಮಂತ್ರಿ ಆದೇಶಿಸಿದ್ದಾರೆಂದು ಪತ್ರಿಕೆಯಲ್ಲಿ ವರದಿಯಾಗಿತ್ತು.
ಯಡಿಯೂರಪ್ಪನವರ ಬೆಂಗಾವಲಾಗಿ ನಿಂತಿರುವ ರೇಣುಕಾಚಾರ್ಯ ಮತ್ತು ಡಿವಿ ಸದಾನಂದ ಗೌಡರ ನಡುವೆ ಎಲ್ಲವೂ ಸರಿಯಿಲ್ಲ ಎಂಬುದು ಎಲ್ಲರಿಗೂ ತಿಳಿದ ವಿಷಯ. ಸದಾನಂದ ಗೌಡರನ್ನು ಮುಖ್ಯಮಂತ್ರಿ ಪಟ್ಟದಿಂದ ಕಿತ್ತೊಗೆಯಬೇಕು ಎಂಬು ಘಂಟಾಘೋಷವಾಗಿ ಸಾರುತ್ತಿರುವವರಲ್ಲಿ ರೇಣುಕಾಚಾರ್ಯ ಮೊದಲ ಸ್ಥಾನದಲ್ಲಿ ನಿಂತಿದ್ದಾರೆ. ಇಂತಹ ಸಂದರ್ಭದಲ್ಲಿ ರೇಣುಕಾಚಾರ್ಯರ ವಿರುದ್ಧವೇ ತನಿಖೆಗೆ ಸದಾನಂದ ಗೌಡರು ಆದೇಶಿಸಿದ್ದಾರೆಂದು ವರದಿಯಾಗಿದ್ದು, ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದಂತೆ ಆಗಿತ್ತು.
ಗಣಿ ಗುತ್ತಿಗೆ ನೀಡಲು ಲಂಚ ಪಡೆದಿದ್ದರೆಂದು ಆರೋಪ ಹೊತ್ತಿರುವ ಯಡಿಯೂರಪ್ಪ ಮತ್ತು ಅವರ ಮಕ್ಕಳು, ಅಳಿಯನಿಗೆ ಕರ್ನಾಟಕ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದ್ದು, ಸದ್ಯಕ್ಕೆ ರೇಣುಕಾಚಾರ್ಯ ಅವರು ಸಂತಸದಲ್ಲಿ ತೇಲಾಡುವಂತಾಗಿದೆ. ಕೋರ್ಟ್ ಕೇಸಿನಲ್ಲಿ ಯಡಿಯೂರಪ್ಪನವರಿಗೆ ನೈತಿಕವಾಗಿ ಜಯ ಸಿಕ್ಕಂತಾಗಿದೆ.