ರಾಷ್ಟ್ರಪತಿ ಚುನಾವಣೆ: ಪ್ರಣಬ್ v/s ಸಂಗ್ಮಾ
ಇಂದು ರಾಷ್ಟ್ರಪತಿ ಆಯ್ಕೆ ಸಂಬಂಧ ಸಭೆ ಸೇರಿದ ಬಿಜೆಪಿ ನಾಯಕರು ಲೋಕಸಭೆಯ ಮಾಜಿ ಸ್ಪೀಕರ್ ಪಿಎ ಸಂಗ್ಮಾ ಅವರನ್ನು ಕಣಕ್ಕೆ ಇಳಿಸುವ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಇದರಿಂದಾಗಿ ಬಹುಶಃ ಮೊದಲ ಬಾರಿಗೆ ರಾಷ್ಟ್ರಪತಿ ಆಯ್ಕೆಗಾಗಿ ಚುನಾವಣೆ ಏರ್ಪಟ್ಟಿದೆ. ಜುಲೈ 19ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದೆ.
ಗಮನಾರ್ಹವೆಂದರೆ ಬಿಜೆಪಿಯ ಮಿತ್ರಕೂಟವಾದ ಜೆಡಿಯು ಮತ್ತು ಶಿವ ಸೇನೆ ಈಗಾಗಲೇ ಬೆಂಗಾಲಿ ಬಾಬು ಪ್ರಣಬ್ ಗೆ ಬೆಂಬಲ ಸೂಚಿಸಿಯಾಗಿದೆ. ಆದರೆ ಜಯಲಲಿತಾರ ಅಣ್ಣಾ ಡಿಎಂಕೆ ಸಂಗ್ಮಾರತ್ತ ಒಲವು ತೋರಿದೆ.
'ಕಾಂಗ್ರೆಸ್ಸಿಗೆ ಸುಲಭ ಜಯ ಸಿಗಲಾರದು. ಇಲ್ಲಿ ಸೋಲು-ಗೆಲವು ಮುಖ್ಯವಲ್ಲ. ಆದರೂ ಕೊನೆಯವರೆಗೂ ಸ್ಪರ್ಧೆವೊಡ್ಡುತ್ತೇವೆ' ಎಂದು ಸಂಗ್ಮಾ ಅಭ್ಯರ್ಥಿಯನ್ನು ಪ್ರಕಟಿಸಿದ ಲೋಕಸಭೆ ಪ್ರತಿಪಕ್ಷದ ನಾಯಕಿ, ಬಿಜೆಪಿಯ ಸುಷ್ಮಾ ಸ್ವರಾಜ್ ಘೋಷಿಸಿದ್ದಾರೆ.
ಸದ್ಯದ ಸಂಖ್ಯಾಬಲದಲ್ಲಿ ಕಾಂಗ್ರೆಸ್ ವಿರುದ್ಧ ಸೋಲು ಖಚಿತ ಎಂಬುದು ತಿಳಿದಿದ್ದರೂ ಮುಂದಿನ ಲೋಕಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಪಕ್ಷವು ಕಾಂಗ್ರೆಸ್ಸಿಗೆ ಪೈಪೋಟಿ ನೀಡುವುದು ಅನಿವಾರ್ಯ ಎಂಬ ಲೆಕ್ಕಾಚಾರದಲ್ಲಿದೆ.