ರಾಷ್ಟ್ರಪತಿ ಚುನಾವಣೆ:ಕುತೂಹಲಕ್ಕೆ ತೆರೆಯೆಳೆದ ದೇವೇಗೌಡ
ಪ್ರಣಬ್ ಮುಖರ್ಜಿ ಯುಪಿಎ ಅಭ್ಯರ್ಥಿಯೆಂದು ಕೋರ್ ಕಮಿಟಿ ಸಮಿತಿ ಸಭೆಯಲ್ಲಿ ಅಂತಿಮಗೊಂಡ ನಂತರ ಅವರು ನನಗೆ ದೂರವಾಣಿ ಕರೆಮಾಡಿ ನಮ್ಮ ಪಕ್ಷದ ಬೆಂಬಲ ಕೇಳಿದ್ದಾರೆ. ನಮ್ಮ ಪಕ್ಷ ಪ್ರಣಬ್ ಮುಖರ್ಜಿಗೆ ಬೆಂಬಲ ನೀಡಲಿದೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಹೇಳಿದ್ದೇನೆ. ಸಾರ್ವಜನಿಕವಾಗಿ ಪಕ್ಷದ ನಿರ್ಧಾರ ಪ್ರಕಟಿಸುವಂತೆ ಪ್ರಣಬ್ ಮುಖರ್ಜಿ ಕೇಳಿಕೊಂಡಿದ್ದಾರೆ ಹಾಗಾಗಿ ನಮ್ಮ ನಿರ್ಧಾರವನ್ನು ಪ್ರಕಟಿಸುತ್ತಿದ್ದೇವೆ ಎಂದು ದೇವೇಗೌಡ ಹೇಳಿದ್ದಾರೆ.
ನಮ್ಮದೊಂದು ಸಣ್ಣ ಪ್ರಾದೇಶಿಕ ಪಕ್ಷ. ನಮ್ಮ ಪಕ್ಷದ ನಿರ್ಧಾರದಿಂದ ಚುನಾವಣೆಯ ಫಲಿತಾಂಶದಲ್ಲಿ ಯಾವುದೇ ಏರುಪೇರು ಆಗುವುದಿಲ್ಲ. ನಾವು ಮೂರು ಜನ ಲೋಕಸಭಾ ಸದಸ್ಯರನ್ನು ಮತ್ತು 26 ಶಾಸಕರನ್ನು ಮಾತ್ರ ಹೊಂದಿದ್ದೇವೆ ಎಂದು ಹೇಳಲು ದೇವೇಗೌಡ ಮರೆಯಲಿಲ್ಲ.
ಪಿ ಎ ಸಂಗ್ಮಾ ಎನ್ ಡಿ ಎ ಅಭ್ಯರ್ಥಿಯಾಗಿ ಘೋಷಣೆಯಾದ ನಂತರ ರಾಷ್ಟ್ರಪತಿ ಗಾದಿಗಾಗಿ ಸಂಗ್ಮಾ ಮತ್ತು ಪ್ರಣಬ್ ಮುಖರ್ಜಿ ಮಧ್ಯೆ ಸ್ಪರ್ಧೆ ಏರ್ಪಟ್ಟಿದೆ. ತೃಣಮೂಲ ಕಾಂಗ್ರೆಸ್ ನಾಯಕಿ ದೀದಿ ಮಮತಾ ಬ್ಯಾನರ್ಜಿ ತಮ್ಮ ನಿಲುವನ್ನು ಇನ್ನೂ ಸ್ಪಷ್ಟಪಡಿಸಲಿಲ್ಲ. ಸಂಗ್ಮಾ ಪರವಾಗಿ ಮತ ಹಾಕಲಿದ್ದಾರೆಯೇ ಅಥವಾ ಚುನಾವಣೆ ಬಹಿಷ್ಕರಿಸಲಿದ್ದಾರೆಯೇ ಎನ್ನುವುದು ಕೂತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ತಮಿಳುನಾಡಿನಲ್ಲಿ ವಿಜಯಕಾಂತ್ ನೇತೃತ್ವದ ಡಿಎಂಡಿಕೆ ರಾಷ್ಟ್ರಪತಿ ಚುನಾವಣೆ ಬಹಿಸ್ಕರಿಸಲಿದ್ದಾರೆಂದು ವರದಿಯಾಗಿದೆ.