ಕಾರ್ಪೊರೇಶನ್ ಬ್ಯಾಂಕ್ ಮುಖಾಂತರ ಪಟ್ಟಾಭಿಗೆ ಲಂಚ
ತಾಜಾ ಸಂಗತಿಯೆಂದರೆ ಜನಾರ್ದನ ರೆಡ್ಡಿಗೆ ಜಾಮೀನು ನೀಡಲು ಜಡ್ಜ್ ಪಟ್ಟಾಭಿ ಪಡೆದ ಲಂಚದ ವಿವರವನ್ನು ಸಿಬಿಐ ಲಕ್ಷ್ಮಿನಾರಾಯಣಗೆ ಒದಗಿಸಿರುವುದೂ ಇದೇ ಕರ್ನಾಟಕ ಮೂಲದ ಕಾರ್ಪೊರೇಶನ್ ಬ್ಯಾಂಕಿನ ಮ್ಯಾನೇಜರ್ ಬಿ. ಬುರಾ ನಾಯಕ್ ಅವರು!
ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಿಬಿಐ ಬಂಧನದಲ್ಲಿರುವ ಜನಾರ್ದನ ರೆಡ್ಡಿಗೆ ಜಾಮೀನು ನೀಡಲು ಆಂಧ್ರ ಹೈಕೋರ್ಟ್ ಜಡ್ಜ್ ಪಟ್ಟಾಭಿ ರಾಮರಾವ್ ಹೇಗೆಲ್ಲ ಲಂಚ ಸ್ವೀಕರಿಸಿದರು ಎಂಬ ಅಷ್ಟೂ ಲೆಕ್ಕವನ್ನು ನಿಖರವಾಗಿ ನೀಡಿ, ಸಿಬಿಐ ಮತ್ತು ಎಸಿಬಿಗೆ ನೆರವಾಗಿದ್ದಾರೆ.
ಕಾರ್ಪೊರೇಶನ್ ಬ್ಯಾಂಕಿನ ಮ್ಯಾನೇಜರ್ ಬಿ. ಬುರಾ ನಾಯಕ್ ಒದಗಿಸಿದ ಮಾಹಿತಿ ಹೀಗಿದೆ: ನಿನ್ನೆಯಷ್ಟೇ ಬಂಧನಕ್ಕೊಳಗಾದ ಪ್ರಕರಣದ ಮಧ್ಯವರ್ತಿ ನಿವೃತ್ತ ನ್ಯಾಯಮೂರ್ತಿ ಚಲಪತಿರಾವ್ ಅವರು ಕಾರ್ಪೊರೇಶನ್ ಬ್ಯಾಂಕಿನಲ್ಲಿ ಬರೋಬ್ಬರಿ 5 ಲಾಕರುಗಳನ್ನು ತೆರೆದಿದ್ದರು. ಮೇ 10ರಂದು ಚಲಪತಿರಾವ್ ತಮ್ಮ ಮತ್ತು ತಮ್ಮ ಪತ್ನಿಯ ಹೆಸರಿನಲ್ಲಿ ಒಂದು ಲಾಕರ್ ಖಾತೆ ತೆರೆದರು. ಮತ್ತೆ, ಮೇ 11ರಂದು ತಮ್ಮ ಪುತ್ರ ಸಂತೋಷ್ ಫಣಿ ಹೆಸರಿನಲ್ಲೂ ಒಂದು ಲಾಕರ್ ತೆರೆದರು.
ಆದರೆ ಲಾಕರ್ ಖಾತೆಗಳನ್ನು ಹೀಗೆ ತೆರೆಯುವಾಗ ಅರ್ಜಿ ಫಾರಂನಲ್ಲಿ ಪೂರ್ತಿ ಮಾಹಿತಿಯನ್ನು ಒದಗಿಸದೆ ಅರೆಬರೆ ಅರ್ಜಿಯನ್ನು ಚಲಪತಿರಾವ್ ಆತುರಾತುರವಾಗಿ ಸಲ್ಲಿಸಿದ್ದರು. ಮೇ 12ರಂದು ಚಲಪತಿರಾವ್ ಹೆಸರಿನಲ್ಲಿ ಮತ್ತೆ ಮೂರು ಲಾಕರುಗಳನ್ನು ತೆರೆಯಲಾಯಿತು. ಹೀಗೆ ಲಾಕರುಗಳ ಮೇಲೆ ಲಾಕರುಗಳನ್ನು ಪಡೆದು ಹಣ ಭರ್ತಿ ಮಾಡುತ್ತಾ ಹೋದ ಚಲಪತಿರಾವುಗಾರು ಬ್ಯಾಂಕ್ ಗೆ ಅಗತ್ಯವಾಗಿ ನೀಡಬೇಕಾಗಿದ್ದ ನಗದಿನ ಮೂಲವನ್ನು ತಿಳಿಸಲಿಲ್ಲ.
ಮೇ 12ರಂದು ಏನಾಯಿತೆಂದರೆ ಚಲಪತಿರಾವ್ ಅವರು ನಗದು ತುಂಬಿದ್ದ 2 ಸೂಟ್ ಕೇಸುಗಳನ್ನು ತಂದರು. ಸೀದಾ ಲಾಕರ್ ರೂಮಿಗೆ ತೆರಳಿದ ಚಲಪತಿರಾವ್ ಅಲ್ಲಿ ಹಣ ತುಂಬಿಸಿದರು. ಗಮನಾರ್ಹವೆಂದರೆ ಚಲಪತಿರಾವ್ ಈ ಟ್ರಾನ್ಸಾಕ್ಷನ್ ಅನ್ನು ಲಾಕರ್ ಪುಸ್ತಕದಲ್ಲೂ ದಾಖಲಿಸಲಿಲ್ಲ. ಆದರೆ ಅವರು ಗೌರವಾನ್ವಿತ ನ್ಯಾಯಾಧೀಶರು ಎಂಬ ಕಾರಣಕ್ಕೆ ಮ್ಯಾನೇಜರ್ ಬುರಾ ನಾಯಕ್ ಅವರು ಹೆಚ್ಚಿನ ವಿವರ ಕೇಳಲಿಲ್ಲ. ಅಷ್ಟಕ್ಕೂ ಮುಂದೆ ಅದು ದೊಡ್ಡ ಪ್ರಕರಣಕ್ಕೆ ಸಾಕ್ಷಿಯಾಗುತ್ತದೆ ಎಂದು ಅವರು ಊಹಿಸಿರಲಿಲ್ಲ.
ಮೇ 18ರಂದು ರವಿ ಎಂಬ ವ್ಯಕ್ತಿ ಮ್ಯಾನೇಜರ್ ಬುರಾ ನಾಯಕ್ ಅವರ ಬಳಿ ಬಂದು ತಾನು ನಿವೃತ್ತ ಜಡ್ಜ್ ಚಲಪತಿರಾವ್ ಅವರ ಪುತ್ರನೆಂದು ಪರಿಚಯಿಸಿಕೊಂಡರು. ಚಲಪತಿರಾವ್ ಅವರ ಹೆಸರಿನಲ್ಲಿರುವ ಲಾಕರುಗಳನ್ನು operate ಮಾಡಲು ತಾನು ಬಾಧ್ಯಸ್ಥ ಎಂದು ಹೇಳಿಕೊಂಡರು. ಆದರೆ ಮ್ಯಾನೇಜರ್ ಬುರಾ ನಾಯಕ್ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ಆಗ ತಕ್ಷಣ ಚಲಪತಿರಾವ್ ಗೆ ಫೋನಾಯಿಸಿದ ರವಿಯು 'ಅಪ್ಪಾ, ಮ್ಯಾನೇಜರ್ ನಾಯಕ್ ಅವರು ನನ್ನೊಂದಿಗೆ ಸಹಕರಿಸುತ್ತಿಲ್ಲ. ಲಾಕರುಗಳನ್ನು ತೆರೆಯುವುದಕ್ಕೆ ಅವಕಾಶ ನೀಡುತ್ತಿಲ್ಲ' ಎಂದು ತಿದಿಯೊತ್ತಿದ. ಲಾಕರ್ ಸುರಕ್ಷತೆಗಾಗಿ ತಾನು ತಮ್ಮ ಪುತ್ರ ರವಿ(ಚಂದ್ರ)ಗೆ ಅಧಿಕಾರ ನೀಡುರುವುದಾಗಿ ಚಲಪತಿರಾವ್ ತಿಳಿಸಿದ ಮೇಲೆ ಮ್ಯಾನೇಜರ್ ನಾಯಕ್ ಅವರು ರವಿಗೆ ಅವಕಾಶ ನೀಡಿದರು.
ಸೋಜಿಗದ ಸಂಗತಿ: ಹೀಗೆ ಸಾಗುತ್ತದೆ ಕಾರ್ಪೊರೇಶನ್ ಬ್ಯಾಂಕಿನ ಮ್ಯಾನೇಜರ್ ಬಿ. ಬುರಾ ನಾಯಕ್ ಅವರು ಸಿಬಿಐಗೆ ನೀಡಿದ ಮಹತ್ವದ ಮಾಹಿತಿಯ ವಿವರ. ಅಂತೂ ಕರ್ನಾಟಕ ಮೂಲದ ಕಾರ್ಪೊರೇಶನ್ ಬ್ಯಾಂಕ್ ಮೂಲಕವೇ ಕರ್ನಾಟಕದ ಮಾಜಿ ಮಂತ್ರಿಯ ಜಾಮೀನಿಗಾಗಿ ಲಂಚ ಸರಬರಾಜು ಆಗಿದ್ದು ವಿಪರ್ಯಾಸವೇ ಸರಿ.
'ಜಡ್ಜಿಗೇ ಲಂಚ ತಿನ್ನಿಸೋಕ್ಕೆ ಆಗುತ್ತದೇನ್ರೀ' ಎಂದು ಮಾಧ್ಯಮದ ಮಂದಿಯ ವಿಶಾಲ ಕಿವಿಗಳ ಮೇಲೆ ಲಾಲ್ ಬಾಗ್ ಇಟ್ಟಿದ್ದ ಬಳ್ಳಾರಿ ಶಾಸಕ, ಕೆಎಂಎಫ್ ಸೋಮಶೇಖರ ರೆಡ್ಡಿ ತಮ್ಮನಿಗೆ ಜಾಮೀನು ದೊರಕಿಸಲು ಕರ್ನಾಟಕದ ಬ್ಯಾಂಕನ್ನೇ ಆಯ್ಕೆ ಮಾಡಿಕೊಂಡಿರುವುದು ಸೋಜಿಗದ ಸಂಗತಿ.