ಸಿಕ್ಕಿಬಿದ್ದ ಆರ್ ಟಿ ನಗರ ATM ದರೋಡೆಕೋರರು
ಆರ್ ಟಿ ನಗರ ATM ದರೋಡೆ ಪ್ರಕರಣವನ್ನು ಬೆಂಗಳೂರು ಉತ್ತರ ವಿಭಾಗದ ಪೊಲೀಸರು ಸರಿಯಾಗಿ ಒಂದು ತಿಂಗಳಲ್ಲಿ ಬೇಧಿಸಿದ್ದಾರೆ. ಬಂಧಿತರು ಮುಂಬೈನ ಫಜಿಲ್ ಅಹಮದ್ ಷೇಕ್ (26), ಹೊಸಕೋಟೆಯ ಕರುಣಾಕರ @ ರವಿಕಾಂತ ಪೂಜಾರಿ (ದಯೂ ದಮನ್ ನಿವಾಸಿ), ಜಯ್ ಪ್ರಕಾಶ್ @ ಜೆಪಿ, ದಕ್ಷಿಣ ಕನ್ನಡದ ಸಂತೋಷ್ ಕುಮಾರ್ @ ಪರುಷೋತ್ತಮ್ (37), ಕೊಡಗುವಿನ ಮಹೇಶ್ (30). ಬಂಧಿತರಿಂದ ನಗದು, ಚಿನ್ನಾಭರಣ, ದರೋಡೆಗೆ ಬಳಸಿದ್ದ ಟವೇರಾ ವಾಹನ ವಶಪಡಿಸಿಕೊಳ್ಳಲಾಗಿದೆ ಎಂದು ಮಗರ ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ತಿಳಿಸಿದ್ದಾರೆ.
ಮೇ 14 ರಂದು ಏನಾಗಿತ್ತೆಂದರೆ ನಾನಾ ಬ್ಯಾಂಕ್ ಎಟಿಎಂಗಳಿಗೆ ಹಣ ತುಂಬುವ ಗುತ್ತಿಗೆ ಪಡೆದಿರುವ CMS Securites Limited ಖಾಸಗಿ ಟವೇರಾ ಕ್ರೀಡಾವಾಹನವನ್ನು (KA 03 C 2428) ಬಾಡಿಗೆಗೆ ಪಡೆದಿತ್ತು. ನಿಗದಿಯಂತೆ ಸಂಸ್ಥೆಯ ನಾಲ್ಕು ಮಂದಿ ಆರ್ ಟಿ ನಗರದಲ್ಲಿ ATMಗೆ ಹಣ ಭರ್ತಿ ಮಾಡಲು ವಾಹನದಿಂದ ಕೆಳಗಿಳಿದು ಹೋಗಿದ್ದರು.
ಆಗ 2 ಕಾರುಗಳಲ್ಲಿ ದಿಢೀರನೆ ಪ್ರತ್ಯಕ್ಷರಾದ 14-15 ಮುಸುಕುಧಾರಿ ದರೋಡೆಕೋರರು ವಾಹನದ ಮೇಲೆ ಮುಗಿಬಿದ್ದರು. ಮಾರಕ ಆಯುಧಗಳನ್ನು ಝಳಪಿಸುತ್ತಾ ಕ್ಷಣಾರ್ಧದಲ್ಲಿ ಕೋಟ್ಯಂತರ ರೂ. ದೋಚಿ ಪರಾರಿಯಾಗಿದ್ದರು.
ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿ ಸ್ಕೆಚ್: ಯಾವುದೇ ಸುಳಿವೂ ದೊರಕದೆ ಪರದಾಡಿದ ಪೊಲೀಸರು ಹೈದರಾಬಾದ್, ಮುಂಬೈ, ಗುಜರಾತ್, ಚೆನ್ನೈ ಮತ್ತು ದಮನ್ ಗಳಲ್ಲಿ ಜಾಲಾಡಿದ್ದರು. 'ಈ ಭಾಗಗಳಲ್ಲಿ ಹಳೆಯ ಬ್ಯಾಂಕ್ ದರೋಡೆ ಪ್ರಕರಣಗಳನ್ನು ಕೆದಕಿದಾಗ ಈ ಖದೀಮರ ಮೇಲೆ ಗುಮಾನಿ ನೆಟ್ಟಿತು. ಇದರಿಂದ ನಮ್ಮ ಮುಂದಿನ ಕೆಲಸ ಸಲೀಸಾಯಿತು' ಎಂದು ಪೊಲೀಸ್ ಆಯುಕ್ತ ಮಿರ್ಜಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
2008-10ರ ಅವಧಿಯಲ್ಲಿ ಈ ದರೋಡೆಕೋರರ ಗ್ಯಾಂಗ್ ನಾನಾ ಅಪರಾಧಗಳಲ್ಲಿ ಮುಂಬೈನ ಆರ್ಥರ್ ರೋಡ್ ಜೈಲುಪಾಲಾಗಿದ್ದರು. ಅಲ್ಲಿ ಕೂಡಿಕೊಂಡ ಈ ಖದೀಮರು ಭವಿಷ್ಯದಲ್ಲಿ ಇಂತಹ ದರೋಡೆಗಳಿಗೆ ಕೈಹಾಕುವ ಬಗ್ಗೆ ಮಂತ್ರಾಲೋಚನೆ ನಡೆಸಿದ್ದರು. ಜಾಮೀನು ಮೇಲೆ ಹೊರಬಂದವರೇ ಬೆಂಗಳೂರು ಆರ್ ಟಿ ನಗರಕ್ಕೆ ದಾಳಿಯಿಟ್ಟರು. ಇದಕ್ಕಾಗಿ ಮೂರು ತಿಂಗಳು ಅವರು ಹೊಂಚು ಹಾಕಿದ್ದರು' ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.