ನಿರಾಣಿ, ಬಿಎಸ್ ವೈ ಕೊರಳಿಗೆ ಮತ್ತೆ ಭೂ ಚಕ್ರ

ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಉದ್ಯಮಿಯೊಬ್ಬರಿಗೆ ಮಂಜೂರಾಗಿದ್ದ ಭೂಮಿಯನ್ನು ರದ್ದುಪಡಿಸಿದ ಆರೋಪವನ್ನು ಯಡಿಯೂರಪ್ಪ, ಮುರುಗೇಶ್ ನಿರಾಣಿ ಸೇರಿದಂತೆ ಐವರ ಮೇಲೆ ಹೊರೆಸಲಾಗಿದೆ.
ಉದ್ಯಮಿ ಎ.ಆಲಂ ಪಾಷ ಸಲ್ಲಿಸಿದ್ದ ಖಾಸಗಿ ದೂರಿನ ವಿಚಾರಣೆ ನಡೆಸಿದ ಲೋಕಾಯುಕ್ತ ವಿಶೇಷ ನ್ಯಾಯಾಲಯ, ಯಡಿಯೂರಪ್ಪ ಸೇರಿದಂತೆ ಐವರ ವಿರುದ್ಧ ತನಿಖೆ ನಡೆಸಿ, ವರದಿ ಸಲ್ಲಿಸುವಂತೆ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಿಗೆ ನ್ಯಾಯಾಲಯ ಆದೇಶಿಸಿದೆ.
ಮುರುಗೇಶ್ನಿರಾಣಿ, ಯಡಿಯೂರಪ್ಪ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಹಿಂದಿನ ಪ್ರಧಾನ ಕಾರ್ಯದರ್ಶಿ ವಿ.ಪಿ.ಬಳಿಗಾರ್, ಇಲಾಖೆಯ ಹಿಂದಿನ ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ, ಕರ್ನಾಟಕ ಉದ್ಯೋಗ ಮಿತ್ರದ ಉಪ ನಿರ್ದೇಶಕ ಗಂಗಾಧರಯ್ಯ ವಿರುದ್ಧ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಬೆಂಗಳೂರು ನಗರ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಿಗೆ ಆದೇಶ ನೀಡಲಾಗಿದೆ.
ದೇವನಹಳ್ಳಿಯ ಹಾರ್ಡ್ವೇರ್ ಪಾರ್ಕಿನಲ್ಲಿ ತನಗೆ ಮಂಜೂರಾಗಿದ್ದ 26 ಎಕರೆ ಭೂಮಿಯನ್ನು ಆರೋಪಿಗಳು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ರದ್ದು ಪಡಿಸಿದ್ದಾರೆ ಎಂದು ಆಲಂ ಪಾಷ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು.
ಜಿಮ್ ಎಫೆಕ್ಟ್: 2010ರ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶದ ಫಲವಾಗಿ ಅಪಾರ ಹಣ ಹರಿದು ಬರಲಿದೆ ಎನ್ನುತ್ತಿದ್ದ ಮುರುಗೇಶ್ ನಿರಾಣಿ ಈಗ ಮತ್ತೊಮ್ಮೆ ಕೋರ್ಟು, ಕಚೇರಿ ಎಂದು ಅಲೆದಾಡಬೇಕಿದೆ.
ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಉದ್ಯಮಿ ಅಲಂಪಾಷಾ ಅವರ ಮಿ.ಪಾಷಾ ಸ್ಪೇಸ್ ಇಂಟರ್ ನ್ಯಾಷನಲ್ ಪ್ರೈ.ಲಿ ಕಂಪನಿ ಪ್ರಸ್ತಾವಿತ ದೇವನಹಳ್ಳಿ ಹಾರ್ಡ್ ವೇರ್ ಪಾರ್ಕ್ ಯೋಜನೆ ಮಂಜೂರಾಗಿತ್ತು.
ಆದರೆ, ಅಲಂಪಾಷಾ ಕಂಪನಿಗೆ ಮಂಜೂರಾಗಿದ್ದ 26 ಎಕರೆ ಭೂಮಿಯನ್ನು ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ತನ್ನ ಕಂಪನಿ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಮಂಜೂರಾಗಿದ್ದ ಜಮೀನನ್ನು ರದ್ದುಪಡಿಸಿದ್ದಾರೆ. ಇದರಿಂದ ನಮ್ಮ ಕಂಪನಿಗೆ ಕೋಟ್ಯಾಂತರ ರುಪಾಯಿ ನಷ್ಟವಾಗಿದೆ ಎಂದು ಪಾಷಾ ಆರೋಪಿಸಿದ್ದಾರೆ.
ಲೋಕಾಯುಕ್ತ ವಿಶೇಷ ನ್ಯಾ. ಎನ್ ಕೆ ಸುಧೀಂದ್ರ ರಾವ್ ಅವರು ನೀಡಿದ ಆದೇಶಕ್ಕನುಸಾರವಾಗಿ ಲೋಕಾಯುಕ್ತ ಎಸ್ ಪಿ ಪಿಕೆ ಶಿವಶಂಕರ್ ಅವರು ಆರೋಪಿಗಳ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿಯಲ್ಲಿ ಎಫ್ ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಕೆಐಎಡಿಬಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ಆರೋಪ ಹೊತ್ತಿದ್ದ ಬೃಹತ್ ಕೈಗಾರಿಕಾ ಸಚಿವ ಮರುಗೇಶ್ ನಿರಾಣಿ ಅವರು ಕ್ಲೀನ್ ಚಿಟ್ ಪಡೆದಿರುವುದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications