ಸ್ವಾಮಿ ನಿತ್ಯಾನಂದನಿಗೆ ಜಾಮೀನು ಮಂಜೂರು
ಜಾಮೀನು ಅರ್ಜಿ ಸಲ್ಲಿಸಿದ್ದ ಸ್ವಾಮಿ ನಿತ್ಯಾನಂದ ಅವರ ಅರ್ಜಿ ವಿಚಾರಣೆ ನಡೆಸಿದ ರಾಮನಗರ ಜೆಎಂಎಫ್ ಸಿ ನ್ಯಾಯಾಲಯ ಬಿಡದಿ ಆಶ್ರಮದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.
50 ಸಾವಿರ ಬಾಂಡ್ ಹಾಗೂ ಇಬ್ಬರ ಶ್ಯೂರಿಟಿ ನೀಡಿದ ಮೇಲೆ ನಿತ್ಯಾನಂದನನ್ನು ಬಿಡುಗಡೆಗೊಳಿಸುವಂತೆ ಆದೇಶಿಸಲಾಗಿದೆ. ಅದರಂತೆ, ನರೇಂದ್ರನ್, ಕೃಷ್ಣನ್ ಎಂಬುವರು ಶ್ಯೂರಿಟಿ ನೀಡಿದ ನಂತರ ನಿತ್ಯಾನಂದ ಕೋರ್ಟಿನಿಂದ ಆಶ್ರಮದ ಕಡೆಗೆ ಹೊರಟಿದ್ದಾರೆ.
ಲಘು ಲಾಠಿ ಪ್ರಹಾರ: ಜಾಮೀನು ಪಡೆದು ಕೋರ್ಟ್ ನಿಂದ ಹೊರ ಬಿದ್ದ ಕಾಷಾಯ ವಸ್ತ್ರಧಾರಿ ನಿತ್ಯಾನಂದ ಹೊರಬೀಳುತ್ತಿದ್ದಂತೆ, ಸಾರ್ವಜನಿಕರು ರೊಚ್ಚಿಗೆದ್ದು ಕಲ್ಲು ತೂರಾಟ ನಡೆಸಿದರು. ಉದ್ರಿಕ್ತ ಜನರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.
ಚನ್ನಪಟ್ಟಣದ ಪೊಲೀಸ್ ತರಬೇತಿ ಕೇಂದ್ರದಲ್ಲಿ ನಿತ್ಯಾನಂದನನ್ನು ಇರಿಸಲಾಗಿತ್ತು, ಗುರುವಾರ ಮಧ್ಯಾಹ್ನ ಕೋರ್ಟಿಗೆ ಹಾಜರುಪಡಿಸಲಾಯಿತು,
ರಾಮನಗರ ಜಿಲ್ಲಾ ಪೊಲೀಸರು ಬಿಡದಿ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ ಸೆಕ್ಷನ್ 143(ಕಾನೂನು ಬಾಹಿರವಾಗಿ ಗುಂಪು ಕಟ್ಟುವುದು), ಸೆಕ್ಷನ್ 341(ನಿರ್ಬಂಧಿತ ಪ್ರದೇಶದಲ್ಲಿ ಪ್ರವೇಶ), ಸೆಕ್ಷನ್ 323(ಸ್ವಯಂ ಹಾನಿ), 504(ಶಾಂತಿ ಭಂಗ) 506(ಪ್ರಾಣ ಭಯ) ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ, ಎಲ್ಲವೂ ಕಾಗ್ನಿಜೇಬಲ್ ಅಪರಾಧವಾಗಿದ್ದು, ನ್ಯಾಯಾಲಯದಿಂದ ಜಾಮೀನು ಪಡೆಯಬಹುದಾಗಿದೆ.
ಸರ್ಕಾರಕ್ಕೆ ನಿತ್ಯಾ ಸವಾಲ್ : ಈ ನಡುವೆ ಕುತೂಹಲಕರ ಬೆಳವಣಿಗೆಯೊಂದರಲ್ಲಿ ನಿತ್ಯಾನಂದ ಸ್ವಾಮಿ ಮುಖ್ಯಮಂತ್ರಿ ಸದಾನಂದರ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಬಿಡದಿಯ ನಿತ್ಯಾನಂದ ಸ್ವಾಮಿಯ ಧ್ಯಾನಪೀಠಂ ಆಶ್ರಮದ ಅಕ್ರಮಗಳ ವಿರುದ್ಧ ತನಿಖೆಗೆ ಆಜ್ಞಾಪಿಸಿದ್ದ ನಾಡಿನ ದೊರೆ ಸದಾನಂದ ಗೌಡರ ವಿರುದ್ಧ ನಿತ್ಯಾನಂದ ಸ್ವಾಮಿ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ಗುರುವಾರ ಹೈಕೋರ್ಟಿನಲ್ಲಿ ಈ ಸಂಬಂಧ ತನ್ನ ವಕೀಲರ ಮೂಲಕ ರಿಟ್ ಅರ್ಜಿ ಗುಜರಾಯಿಸಿದ ನಿತ್ಯಾನಂದ ಸ್ವಾಮಿ, 10 ಕೋಟಿ ರು. ಪರಿಹಾರವನ್ನೂ ಕೋರಿದ್ದಾನೆ. ಬಿಡದಿ ಆಶ್ರಮಕ್ಕೆ ಬೀಗಮುದ್ರೆಗೆ ಆದೇಶಿಸಿದ್ದ ಮುಖ್ಯಮಂತ್ರಿ ಸದಾನಂದ ಗೌಡರು, ನಿತ್ಯಾನಂದನನ್ನು ಬಂಧಿಸುವಂತೆಯೂ ಪೊಲೀಸರಿಗೆ ಆದೇಶಿಸಿದ್ದರು.
ಸಾಕ್ಷ್ಯಾಧಾರವಿಲ್ಲದೆ ಮುಖ್ಯಮಂತ್ರಿಯೇ ಇಂತಹ ಆದೇಶ ನೀಡುವ ಮೂಲಕ ತಮ್ಮ ಭಕ್ತರಿಗೆ ನೋವುಂಟು ಮಾಡಿದ್ದಾರೆ ಎಂಬುದು ಸದಾನಂದ ವಿರುದ್ಧ ನಿತ್ಯಾನಂದನ ಪ್ರಮುಖ ದೂರಾಗಿದೆ. ಮುಖ್ಯಮಂತ್ರಿಯ ಇಂತಹ ಆದೇಶ ಹಾಸ್ಯಾಸ್ಪದವಾಗಿದೆ. ಆದರೆ ಇದರಿಂದ ನನ್ನ ಭಕ್ತರ ಭಾವನೆಗಳಿಗೆ ಪೆಟ್ಟುಬಿದ್ದಿದೆ ಎಂದು ನಿತ್ಯಾನಂದ ಅಲವತ್ತುಕೊಂಡಿದ್ದಾನೆ.
ಯೋಗಿ ಬಚಾವ್ ?: ಡಿಕೆ ಶಿವಕುಮಾರ್ ಅವರು ಸ್ವಾಮಿ ನಿತ್ಯಾನಂದನ ಪ್ರಮುಖ ಭಕ್ತರಲ್ಲಿ ಒಬ್ಬರು. ಬಿಡದಿ ಆಶ್ರಮ ಹಾಗೂ ನಿತ್ಯಾನಂದ ಖರ್ಚು ವೆಚ್ಚಗಳಿಗೆ ಡಿಕೆಶಿ ನೀಡಿರುವ ದಾನದ ದುಡ್ಡೇ ಆಧಾರ. ನಿಯಮಿತವಾಗಿ ಧ್ಯಾನಪೀಠಂಗೆ ದೇಣಿಗೆ ನೀಡುತ್ತಾ ಬಂದಿದ್ದಾರೆ.
ನಿತ್ಯಾನಂದನಿಗೆ 10 ಲಕ್ಷ ರು. ದೇಣಿಗೆ ನೀಡಿರುವುದಕ್ಕೆ ನನ್ನ ಬಳಿ ವಿಡಿಯೋ ಸಾಕ್ಷಿ ಇದೆ. ಧ್ಯಾನಪೀಠಂ ಜೊತೆ ನಿರಂತರವಾಗಿ ಒಡನಾಟ ಹೊಂದಿದ್ದ ಡಿಕೆ ಶಿವಕುಮಾರ್ ಅವರು ಎಷ್ಟು ದೇಣಿಗೆ ನೀಡಿದ್ದಾರೆ, ಯಾವ ಯಾವ ರೀತಿ ಸಹಾಯ ಮಾಡಿದ ಎಂಬುದರ ಬಗ್ಗೆ ತನಿಖೆಯಾಗಬೇಕಿದೆ ಎಂದು ಯೋಗೇಶ್ವರ್ ಹೇಳಿದ್ದಾರೆ.
ಆದರೆ, ಯೋಗೇಶ್ವರ್ ಆಗಲಿ, ಡಿಕೆ ಶಿವಕುಮಾರ್ ವಿರುದ್ಧವಾಗಲಿ ಯಾವುದೇ ಹೋರಾಟಕ್ಕೆ ಸದ್ಯಕ್ಕೆ ನಿತ್ಯಾನಂದ ಮುಂದಾಗಿಲ್ಲ. ಮುಂದಿನ ದಿನಗಳಲ್ಲಿ ನಿತ್ಯಾನಂದ ಸ್ವಾಮೀಜಿ ವಿರುದ್ಧ ಬೀದಿಗಿಳಿದವರ ಮೇಲೆ ಕಾನೂನು ಸಮರ ಸಾರುವುದಾಗಿ ನಿತ್ಯಾ ಪರ ವಕೀಲರು ಹೇಳಿದ್ದಾರೆ.