ಸಿಎಂ ಸದಾನಂದ ವಿರುದ್ಧವೇ ಕೇಸ್ ಜಡಿದ ನಿತ್ಯಾನಂದ!

ತಾಜಾ ಸುದ್ದಿ: ನಿತ್ಯಾನಂದ ಸ್ವಾಮಿಗೆ ರಾಮನಗರ ಜಿಲ್ಲಾ ಕೋರ್ಟ್ ಜಾಮೀನು ನೀಡಿದೆ.
ಗುರುವಾರ ಹೈಕೋರ್ಟಿನಲ್ಲಿ ಈ ಸಂಬಂಧ ತನ್ನ ವಕೀಲರ ಮೂಲಕ ರಿಟ್ ಅರ್ಜಿ ಗುಜರಾಯಿಸಿದ ನಿತ್ಯಾನಂದ ಸ್ವಾಮಿ, 10 ಕೋಟಿ ರು. ಪರಿಹಾರವನ್ನೂ ಕೋರಿದ್ದಾನೆ. ಬಿಡದಿ ಆಶ್ರಮಕ್ಕೆ ಬೀಗಮುದ್ರೆಗೆ ಆದೇಶಿಸಿದ್ದ ಮುಖ್ಯಮಂತ್ರಿ ಸದಾನಂದ ಗೌಡರು, ನಿತ್ಯಾನಂದನನ್ನು ಬಂಧಿಸುವಂತೆಯೂ ಪೊಲೀಸರಿಗೆ ಆದೇಶಿಸಿದ್ದರು.
ಸಾಕ್ಷ್ಯಾಧಾರವಿಲ್ಲದೆ ಮುಖ್ಯಮಂತ್ರಿಯೇ ಇಂತಹ ಆದೇಶ ನೀಡುವ ಮೂಲಕ ತಮ್ಮ ಭಕ್ತರಿಗೆ ನೋವುಂಟು ಮಾಡಿದ್ದಾರೆ ಎಂಬುದು ಸದಾನಂದ ವಿರುದ್ಧ ನಿತ್ಯಾನಂದನ ಪ್ರಮುಖ ದೂರಾಗಿದೆ. ಮುಖ್ಯಮಂತ್ರಿಯ ಇಂತಹ ಆದೇಶ ಹಾಸ್ಯಾಸ್ಪದವಾಗಿದೆ. ಆದರೆ ಇದರಿಂದ ನನ್ನ ಭಕ್ತರ ಭಾವನೆಗಳಿಗೆ ಪೆಟ್ಟುಬಿದ್ದಿದೆ ಎಂದು ನಿತ್ಯಾನಂದ ಅಲವತ್ತುಕೊಂಡಿದ್ದಾನೆ.
ನಿತ್ಯಾನಂದ ಸ್ವಾಮಿಯ ಕಾನೂನು ಹೋರಾಟದ ಮುಂದಿನ ಭಾಗವಾಗಿ ಪತ್ರಿಕೆಗಳು, ಮಾಧ್ಯಮಗಳ ವಿರುದ್ದವೂ ಕೇಸುಗಳನ್ನು ಹಾಕುವ ಸಾಧ್ಯತೆಗಳಿವೆ ಎಂಬ ಮಾತುಗಳೂ ಕೇಳಿಬರುತ್ತಿವೆ. ತಮ್ಮ ತೇಜೋವಧೆ ಮಾಡಿದ ಆರೋಪದ ಮೇಲೆ ಒಂದು ಖಾಸಗಿ ಚಾನೆಲ್ ವಿರುದ್ಧ ನಿತ್ಯಾನಂದ ಸ್ವಾಮಿ ಕಡೆಯಿಂದ ಈಗಾಗಲೇ ಮೊಕದ್ದಮೆ ಹೂಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಮುಂದಿನ ವಾರ ಪ್ರಕರಣ ವಿಚಾರಣೆಗೆ ಬರುವ ಸಾಧ್ಯತೆಯಿದೆ.
ಈ ಮಧ್ಯೆ, ನಿತ್ಯಾನಂದ ಆಶ್ರಮಕ್ಕೆ ಬೀಗ ಮುದ್ರೆ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ. ನಿತ್ಯಾನಂದ ಸ್ವಾಮಿಗೆ ರಾಜಕಾರಣಿಗಳ ಆಶಿರ್ವಾದ ಇದೆ. ಹಾಗಾಗಿ ಆತ ಈ ಪಾಟಿ ಆಸ್ತಿಪಾಸ್ತಿ ಮಾಡಿಕೊಂಡು ಮೆರೆಯುತ್ತಿದ್ದಾರೆ. ಅಷ್ಟಕ್ಕೂ ಆಶ್ರಮಕ್ಕೆಂದು ನಿತ್ಯಾನಂದ ಸ್ವಾಮಿಗೆ ಜಮೀನು ನೀಡಿರುವುದು ಅಂದಿನ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಎಂದು ಆರೋಪಿಸಲಾಗಿದೆ.
ಇನ್ನು ಅರಣ್ಯ ಸಚಿವ ಯೋಗೇಶ್ವರ್ ಅವರು ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ವಿರುದ್ಧ ಮತ್ತೊಂದು ಅಸ್ತ್ರ ಬಿಟ್ಟಿದ್ದಾರೆ. ಡಿಕೆಶಿಯು ಸ್ವಾಮಿ ನಿತ್ಯಾನಂದನ ಪ್ರಮುಖ ಭಕ್ತರಲ್ಲಿ ಒಬ್ಬರು. ಬಿಡದಿ ಆಶ್ರಮ ಹಾಗೂ ನಿತ್ಯಾನಂದ ಖರ್ಚು ವೆಚ್ಚಗಳಿಗೆ ಡಿಕೆಶಿ ನೀಡಿರುವ ದಾನದ ದುಡ್ಡೇ ಆಧಾರ. ನಿಯಮಿತವಾಗಿ ಧ್ಯಾನಪೀಠಂಗೆ ದೇಣಿಗೆ ನೀಡುತ್ತಾ ಬಂದಿದ್ದಾರೆ.'
'ನಿತ್ಯಾನಂದನಿಗೆ 10 ಲಕ್ಷ ರು. ದೇಣಿಗೆ ನೀಡಿರುವುದಕ್ಕೆ ನನ್ನ ಬಳಿ ವಿಡಿಯೋ ಸಾಕ್ಷಿ ಇದೆ. ಧ್ಯಾನಪೀಠಂ ಜೊತೆ ನಿರಂತರವಾಗಿ ಒಡನಾಟ ಹೊಂದಿದ್ದ ಡಿಕೆ ಶಿವಕುಮಾರ್ ಅವರು ಎಷ್ಟು ದೇಣಿಗೆ ನೀಡಿದ್ದಾರೆ, ಯಾವ ಯಾವ ರೀತಿ ಸಹಾಯ ಮಾಡಿದ ಎಂಬುದರ ಬಗ್ಗೆ ತನಿಖೆಯಾಗಬೇಕಿದೆ' ಎಂದು ಯೋಗೇಶ್ವರ್ ಹೇಳಿದ್ದಾರೆ.












Click it and Unblock the Notifications