ಕೊಲೆ ಕೇಸ್ ತಪ್ಪಿಸಿಕೊಳ್ಳಲು ಸಕತ್ ಕತೆ ಕಟ್ಟಿದ

ಕ್ಷುಲ್ಲಕ ವಿಚಾರಕ್ಕೆ ಪತ್ನಿಯನ್ನು ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದ ಆರೋಪಿ ತಿಪ್ಪಣ್ಣ, ಪತ್ನಿ ಸಾವನ್ನಪ್ಪಿದ ರೀತಿಯ ಬಗ್ಗೆ ಸೂಕ್ಷ್ಮವಾಗಿ ಕತೆ ಹೆಣೆದಿದ್ದ. ಚಿಂತಾಮಣಿ ತಾಲೂಕಿನ ಪೊಲೀಸ್ ಠಾಣಾ ವ್ಯಾಪ್ತಿಯ ಮುಂಗಾನಹಳ್ಳಿ ಗ್ರಾಮದ ನಿವಾಸಿ ತಿಪ್ಪಣ್ಣ ತನ್ನ ಪತ್ನಿ ನಾಗಮ್ಮಳೊಂದಿಗೆ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಬಳಿಕ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದನು.
ಘಟನೆಯಿಂದ ಭಯಭೀತಗೊಂಡ ತಿಪ್ಪಣ್ಣ ತನ್ನ ಮಗ ಶ್ರೀನಿವಾಸ್ನನ್ನು ತಕ್ಷಣವೇ ಬಟ್ಲಹಳ್ಳಿ ಪೊಲೀಸ್ ಠಾಣೆಗೆ ಕಳಿಸಿದ್ದಾನೆ.
ಠಾಣೆಗೆ ಬಂದ ಶ್ರೀನಿವಾಸ್ ತನ್ನ ತಾಯಿ ಹೊಲದಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಹಾವು ಕಚ್ಚಿ ಹೊಲದಲ್ಲಿಯೇ ಸಾವನ್ನಪ್ಪಿರುವುದಾಗಿ ವಿವರಿಸಿದ್ದಾನೆ. ಗ್ರಾಮಾಂತರ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ವೆಂಕಟಾಚಲಪತಿಗೆ ಅನುಮಾನ ಬಂದು, ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ.
ತಿಪ್ಪಣ್ಣ ತನ್ನ ಬಣ್ಣ ಬಯಲಾಗುವ ಶಂಕೆ ವ್ಯಕ್ತವಾದ್ದರಿಂದ ಮಗನ ಹೇಳಿಕೆಯನ್ನು ತಿರುಚಿ, ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಹಾವು ಕಂಡು ಬೆಚ್ಚಿಬಿದ್ದಿದ್ದಾಳೆ. ಭಯದಲ್ಲಿ ಹಿಂದೆ ಸರಿಯುತ್ತಿದ್ದಾಗ ಕಾಲು ಚಾರಿ ಕೆಳಗೆ ಬಿದ್ದಿದಾಳೆ. ತಲೆಯ ಹಿಂಭಾಗಕ್ಕೆ ಕಲ್ಲು ಬಡಿದ ಪರಿಣಾಮ ಸಾವನ್ನಪ್ಪಿದ್ದಾಲೆ ಎಂದಿದ್ದಾನೆ.
ಮರಣೋತ್ತರ ಪರೀಕ್ಷೆ ನಡೆಸಿದಾಗ ನಾಗಮ್ಮಳ ಹಿಂಭಾಗದ ತಲೆಗೆ ಬಲವಾದ ಪೆಟ್ಟು ಬಿದ್ದಿರುವ ಬಗ್ಗೆ ವೈದ್ಯರು ಸ್ಪಷ್ಟಪಡಿಸಿ ವರದಿ ನೀಡಿದ್ದಾರೆ. ಪೊಲೀಸರು ಕೊಲೆ ಪ್ರಕರಣವನ್ನು ದಾಖಲು ಮಾಡಿಕೊಂಡು ನಂತರ ಮಗ ಮತ್ತು ತಂದೆಯನ್ನು ವಿಚಾರಣೆಗೆ ಒಳಪಡಿಸಲು ಮುಂದಾಗಿದ್ದಾರೆ.
ಪೊಲೀಸರು ಬರುತ್ತಿರುವ ಸುದ್ದಿ ತಿಳಿದು ಬಂಧನ ಭೀತಿಯಿಂದ ತಿಪ್ಪಣ್ಣ ವಿಷ ಕುಡಿದು ಆತ್ನಹತ್ಯೆಗೆ ಯತ್ನಿಸಿದ್ದಾನೆ. ಆತನನ್ನು ಗ್ರಾಮಸ್ಥರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ, ಜೀವ ಉಳಿಸಿದ್ದಾರೆ.
ಕೊನೆಗೆ ಆಸ್ಪತ್ರೆ ಬೆಡ್ ಮೇಲೆ ಕೂತು, ಪತ್ನಿಯನ್ನು ಕಲ್ಲಿನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ ಎಂದು ಬಟ್ಲಹಳ್ಳಿ ಪಿಎಸ್ಐ ಸೂರ್ಯಪ್ರಕಾಶ್ ಹೇಳಿದ್ದಾರೆ.












Click it and Unblock the Notifications