ಶಿಕ್ಷಕ, ಪದವೀಧರ ಕ್ಷೇತ್ರ : 6 ರಲ್ಲಿ 5 ಕಡೆ ಅರಳಿದ ಕಮಲ
ಬೆಂಗಳೂರು, ನೈರುತ್ಯ, ಈಶಾನ್ಯ ಪದವೀಧರರ ಕ್ಷೇತ್ರ ಹಾಗೂ ಆಗ್ನೇಯ, ನೈರುತ್ಯ, ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಒಟ್ಟು 61 ಅಭ್ಯರ್ಥಿಗಳು ಕಣದಲ್ಲಿದ್ದರು.
ಇದೀಗ ಬಂದ ಸುದ್ದಿ(ಸಮಯ 8.20) : ಭಾರಿ ಕುತೂಹಲ ಕೆರಳಿಸಿದ್ದ ಬೆಂಗಳೂರು ಪದವೀಧರ ಕ್ಷೇತ್ರ ಫಲಿತಾಂಶ ಗುರುವಾರ(ಜೂ.14) ಬೆಳಗ್ಗೆ ಅಧಿಕೃತವಾಗಿ ಪ್ರಕಟವಾಗಿದೆ. ಬುಧವಾರ ಬೆಳಗ್ಗೆ 8 ಗಂಟೆಗೆ ಆರಂಭವಾದ ಮತ ಎಣಿಕೆ ಕಾರ್ಯ ಗುರುವಾರ ಬೆಳಗ್ಗೆ 8.45ಕ್ಕೆ ಮುಕ್ತಾಯವಾಯಿತು. ಬಿಜೆಪಿಯ ರಾಮಚಂದ್ರಗೌಡರಿಗೆ ಭರ್ಜರಿ ಪೈಪೋಟಿ ನೀಡಿದ ಜೆಡಿಎಸ್ ನ ಎ ದೇವೇಗೌಡ ಅವರು ಕೇವಲ 200 ಮತಗಳ ಅಂತರದಿಂದ ಸೋಲೊಪ್ಪಿಕೊಂಡಿದೆ.
ಈಶಾನ್ಯ ಪದವೀಧರ ಕ್ಷೇತ್ರದ ಫಲಿತಾಂಶ ಬುಧವಾರ ತಡರಾತ್ರಿ ಹೊರಬಿದ್ದಿದ್ದು, ಬಿಜೆಪಿಯ ಅಮರನಾಥ್ ಪಾಟೀಲ್ ಅವರು 4676 ಮತಗಳ ಅಂತರದಿಂದ ಡಾ. ಶಿವಾನಂದ ಎಸ್ ಭೀಮಳ್ಳಿ ಅವರನ್ನು ಸೋಲಿಸಿ ವಿಜಯ ಸಾಧಿಸಿದ್ದಾರೆ.
ಬೆಂಗಳೂರು ಪದವೀಧರ ಕ್ಷೇತ್ರದ ಮತ ಎಣಿಕೆ ನಗರದ ಸರಕಾರ ಕಲಾ ಕಾಲೇಜಿನಲ್ಲಿ ನಡೆಯಿತು. ನೈಋತ್ಯ ಪದವಿಧರ ಕ್ಷೇತ್ರದ ಮತ ಎಣಿಕೆ ಮೈಸೂರಿನ ಜೆಎಸ್ಎಸ್ ಕಾಲೇಜಿನಲ್ಲಿ, ಈಶಾನ್ಯ ಪದವಿಧರ ಕ್ಷೇತ್ರದ ಮತ ಎಣಿಕೆ ಗುಲ್ಬರ್ಗ ವಿಶ್ವ ವಿದ್ಯಾಲಯದಲ್ಲಿಯಲ್ಲಿ ನಡೆಯಿತು.
ದಕ್ಷಿಣ ಹಾಗೂ ನೈಋತ್ಯ ಶಿಕ್ಷಕರ ಕ್ಷೇತ್ರದ ಮತ ಎಣಿಕೆ ಮೈಸೂರಿನ ಜೆಎಸ್ಎಸ್ ಕಾಲೇಜಿನಲ್ಲಿ ಹಾಗೂ ಆಗ್ನೇಯ ಶಿಕ್ಷಕರ ಕ್ಷೇತ್ರದ ಮತ ಎಣಿಕೆ ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ನಡೆಯಿತು. ಮತ ಎಣಿಕೆ ಕೇಂದ್ರ ಸುತ್ತ ಅಗತ್ಯ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಮತ ಎಣಿಕೆ ಕೇಂದ್ರದ ಸುತ್ತಮುತ್ತಲ 2 ಕಿಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು.
ಬಿಜೆಪಿಗೆ ನಿರೀಕ್ಷಿತ ಜಯ: ಬಿಜೆಪಿ ಅಭ್ಯರ್ಥಿ ಡಿಎಚ್ ಶಂಕರಮೂರ್ತಿ(ಐದನೇ ಬಾರಿ ಆಯ್ಕೆ), ಕ್ಯಾಪ್ಟನ್ ಗಣೇಶ್ ಕಾರ್ಣಿಕ್(ಎರಡನೇ ಬಾರಿ ಆಯ್ಕೆ), ಅಮರನಾಥ್ ಪಾಟೀಲ್ ಹಾಗೂ ವೈಎ ನಾರಾಯಣಸ್ವಾಮಿ ಜಯಭೇರಿ ಬಾರಿಸಿದ್ದಾರೆ. ಮಾಜಿ ಸಚಿವ ರಾಮಚಂದ್ರೇಗೌಡ ಅವರು ಅತ್ಯಲ್ಪ ಅಂತರದಿಂದ ಸೀಟು ಉಳಿಸಿಕೊಂಡಿದ್ದಾರೆ.
ನೈಋತ್ಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯ ಡಿಎಚ್ ಶಂಕರಮೂರ್ತಿ ಅವರು ಕಾಂಗ್ರೆಸ್ಸಿನ ಎಸ್ ಪಿ ದಿನೇಶ್ 2,600 ಮತಗಳ ಅಂತರದಿಂದ ಭರ್ಜರಿ ಜಯ ದಾಖಲಿಸಿದ್ದಾರೆ.
ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವೈಎ ನಾರಾಯಣ ಸ್ವಾಮಿ ಅವರು ಬಿಜೆಪಿ ಟಿಕೆಟ್ ನಲ್ಲಿ ಸ್ಪರ್ಧಿಸಿ ಜೆಡಿಎಸ್ ನ ಆರ್ ಚೌಡ ರೆಡ್ಡಿ ವಿರುದ್ಧ 3,000ಕ್ಕೂ ಅಧಿಕ ಮತಗಳಿಂದ ಜಯ ಗಳಿಸಿದ್ದಾರೆ.
ನೈಋತ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿಯ ಕ್ಯಾ. ಗಣೇಶ್ ಕಾರ್ಣಿಕ್ ಅವರು ಜೆಡಿಎಸ್ ನ ಸಿಎಂ ಪಂಚಾಕ್ಷರಯ್ಯ ಅವರ ವಿರುದ್ಧ 400 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.
ಕ್ಷೇತ್ರ | ಗೆದ್ದ ಅಭ್ಯರ್ಥಿ(ಪಕ್ಷ) | ಸೊತ ಅಭ್ಯರ್ಥಿ(ಪಕ್ಷ) | ಸೊತ ಅಭ್ಯರ್ಥಿ(ಪಕ್ಷ) |
ಬೆಂಗಳೂರು ಪದವೀಧರ ಕ್ಷೇತ್ರ |
ರಾಮಚಂದ್ರೇಗೌಡ
(ಬಿಜೆಪಿ) | ಎ ದೇವೇಗೌಡ (ಜೆಡಿಎಸ್) | ಅಶ್ವಿನ್ ಮಹೇಶ್ (ಲೋಕಸತ್ತ ಪಕ್ಷ) |
ಆಗ್ನೇಯ ಶಿಕ್ಷಕರ ಕ್ಷೇತ್ರ | ವೈಎ ನಾರಾಯಣ ಸ್ವಾಮಿ (ಬಿಜೆಪಿ) | ಆರ್ ಚೌಡ ರೆಡ್ಡಿ (ಜೆಡಿಎಸ್ ) | ಕೆಬಿ ರಾಮಲಿಂಗಪ್ಪ (ಕಾಂಗ್ರೆಸ್) |
ನೈಋತ್ಯ ಪದವೀಧರ ಕ್ಷೇತ್ರ | ಡಿಎಚ್ ಶಂಕರಮೂರ್ತಿ(ಬಿಜೆಪಿ) | ಎಸ್ ಪಿ ದಿನೇಶ್ (ಕಾಂಗ್ರೆಸ್) | ಭೋಜೇಗೌಡ (ಜೆಡಿಎಸ್) |
ನೈಋತ್ಯ ಶಿಕ್ಷಕರ ಕ್ಷೇತ್ರ | ಕ್ಯಾ. ಗಣೇಶ್ ಕಾರ್ಣಿಕ್ (ಬಿಜೆಪಿ) | ಮಂಜುನಾಥ ಕುಮಾರ್ (ಪಕ್ಷೇತರ) | ಸಿಎಂ ಪಂಚಾಕ್ಷರಯ್ಯ (ಜೆಡಿಎಸ್) |
ದಕ್ಷಿಣ ಶಿಕ್ಷಕರ ಕ್ಷೇತ್ರ | ಮರಿತಿಬ್ಬೇಗೌಡ (ಜೆಡಿಎಸ್) | ಎಂ ಲಕ್ಷಣ(ಐಎನ್ ಸಿ) | ಗುರುನಂಜಯ್ಯ ಎಸ್ ಎಂ (ಬಿಜೆಪಿ) |
ಈಶಾನ್ಯ ಪದವೀಧರ ಕ್ಷೇತ್ರ | ಅಮರನಾಥ್ ಪಾಟೀಲ್ (ಬಿಜೆಪಿ) | ಡಾ, ಶಿವಾನಂದ ಎಸ್ ಭೀಮಳ್ಳಿ (ಐಎನ್ ಸಿ) | ಶರಣಪ್ಪ ಮಟ್ಟೂರು (ಪಕ್ಷೇತರ) |