ಗಣಿ ಹಗರಣ : ಬಿಎಸ್ವೈಗೆ ಜೂ.13 ಬ್ಯಾಡ್ ಡೇ
ಯಡಿಯೂರಪ್ಪ ಹಾಗೂ ನಾಲ್ವರು ಸಹ ಆರೋಪಿಗಳಿಗೂ ಜಾಮೀನು ಮಂಜೂರಾಗಿಲ್ಲ. ಹೀಗಾಗಿ ಯಾವುದೇ ಕ್ಷಣದಲ್ಲಾದರೂ ಯಡಿಯೂರಪ್ಪ ಅವರನ್ನು ಬಂಧಿಸುವ ಸಾಧ್ಯತೆಯಿದೆ.
ಸಿಬಿಐ ನ್ಯಾಯಾಲಯ ಜಾಮೀನು ನಿರಾಕರಿಸಿರುವುದರಿಂದ ಯಡಿಯೂರಪ್ಪ ಅವರನ್ನು ಸಿಬಿಐ ತಕ್ಷಣವೇ ಬಂಧಿಸುವ ಸಾಧ್ಯತೆಗಳು ದಟ್ಟವಾಗಿದೆ. ಕಿಕ್ ಬ್ಯಾಕ್ ಪ್ರಕರಣದಲ್ಲಿ ಯಡಿಯೂರಪ್ಪ ಅವರಿಗೆ ನಿರೀಕ್ಷಣಾ ಜಾಮೀನು ಸಿಗದಿರುವುದು ಯಡಿಯೂರಪ್ಪ ಅವರ ಆಪ್ತರು ಚಿಂತಿತರಾಗಿದ್ದು, ನಮ್ಮ ಸರದಿ ಯಾವಾಗ ಎಂದು ಪರಸ್ಪರ ಪ್ರಶ್ನಿಸಿಕೊಳ್ಳುವಂತಾಗಿದೆ.
ಸಿಬಿಐ ವಿಶೇಷ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಯಡಿಯೂರಪ್ಪ ಅವರು ಹೈಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಬಹುದು. ಆದರೆ, ಅದಕ್ಕೂ ಮುನ್ನ ಸಿಬಿಐ ತಂಡ ಯಡಿಯೂರಪ್ಪ ಅವರನ್ನು ತಮ್ಮ ವಶಕ್ಕೆ ತೆಗೆದುಕೊಂಡು ಕೂಲಂಕುಷವಾಗಿ ತನಿಖೆ ನಡೆಸುವ ಸಾಧ್ಯತೆಯಿದೆ.
ಜಾಮೀನು ಕಷ್ಟವಾಗಿದ್ದು ಹೇಗೆ: ಸಿಬಿಐ ಪರ ವಕೀಲ ಅಶೋಕ್ ಬಾನ್ ಅವರು ಮಂಡಿಸಿದ ವಾದದ ಪ್ರಕಾರ ಗಣಿ ಕಂಪನಿಗಳಿಂದ ಸರ್ಕಾರಿ ಸ್ವಾಮ್ಯದ ಮೈಸೂರು ಮಿನರಲ್ ಲಿ ಗೆ ಬರಬೇಕಿರುವ 917ಕ್ಕೂ ಅಧಿಕ ಕೋಟಿ ರು ಮೊತ್ತ ಇನ್ನೂ ಬಾಕಿ ಇದೆ.
ಗಣಿ ಗುತ್ತಿಗೆ ಅವ್ಯವಹಾರ ಎಲ್ಲವೂ ನಕಲಿ ದಾಖಲೆ, ನಕಲಿ ಕಂಪನಿಗಳ ಹೆಸರಿನಲ್ಲಿ ನಡೆದಿರುವುದರಿಂದ ಸರ್ಕಾರಕ್ಕೆ ಸಿಗಬೇಕಾದ ತೆರಿಗೆ, ರಾಜಸ್ವ ಮೊತ್ತ ತಲುಪಿಲ್ಲ. ಡಿನೋಟಿಫಿಕೇಷನ್ ಪ್ರಕರಣದಲ್ಲೂ ದಾಖಲೆಗಳನ್ನು ತಿದ್ದಿ, ನಕಲಿ ಮಾಡಿ ವ್ಯವಹಾರ ಮುಗಿಸಲಾಗಿದೆ.
ಹೀಗಾಗಿ ಸಿಬಿಐ ಹೆಚ್ಚಿನ ತನಿಖೆ ನಡೆಸದಿದ್ದರೆ ಸರ್ಕಾರಕ್ಕೆ ಇನ್ನಷ್ಟು ನಷ್ಟವಾಗುತ್ತದೆ. ಹಾಗೂ ಯಡಿಯೂರಪ್ಪ ಅವರ ಕಾಲದ ಅಕ್ರಮದ ಅಸಲಿ ಮೊತ್ತ ತಿಳಿಯುತ್ತದೆ. ಜಾಮೀನು ನೀಡಿದರೆ ಸಾಕ್ಷ್ಯ ನಾಶಪಡಿಸುವ ಸಾಧ್ಯತೆಯಿದೆ ಎಂದು ವಾದಿಸಿದ್ದರು.
ಆದರೆ, ಸಿಬಿಐ ಪರ ವಕೀಲರ ವಾದವನ್ನು ಯಡಿಯೂರಪ್ಪ ಅವರ ಪರ ವಕೀಲ ಅಶೋಕ್ ಹಾರನಹಳ್ಳಿ ಅಲ್ಲಗೆಳೆದು, ಯಡಿಯೂರಪ್ಪ ಅವರು ಯಾವುದೇ ಅಕ್ರಮ ಎಸೆಗಿಲ್ಲ ಎಂದು ಕೋರ್ಟಿನಲ್ಲಿ ವಾದಿಸಿದ್ದರು.
ಯಡಿಯೂರಪ್ಪ ಅವರ ಅಕ್ರಮದ ಮೊತ್ತ ತಿಳಿಯದ ಕಾರಣ, ಹೀಗಾಗಿ ಜಾಮೀನು ಅರ್ಜಿಯನ್ನು ತಿರಸ್ಕರಿಸಿ, ಸಿಬಿಐ ವಶಕ್ಕೆ ಯಡಿಯೂರಪ್ಪ ಅವರನ್ನು ವಹಿಸುವ ಸಾಧ್ಯತೆ ಹೆಚ್ಚಾಗಿತ್ತು.
ಯಡಿಯೂರಪ್ಪ ಅವರ ಡೈರಿಯಲ್ಲಿ ಸಿಕ್ಕ ಮಾಹಿತಿ ಪ್ರಕಾರ, ಯಡಿಯೂರಪ್ಪ ಅವರ ಮಕ್ಕಳು ನಡೆಸುವ ಪ್ರೇರಣಾ ಎಜುಕೇಷನ್ ಹಾಗೂ ಸೋಷಿಯಲ್ ಟ್ರಸ್ಟ್ ಗೆ 20 ಕೋಟಿ ರು ನೀಡಲಾಗಿದೆ. ನಂತರ ಹಣವನ್ನು ವಿವೇಕಾನಂದ ಟ್ರಸ್ಟ್ ಗೆ ವರ್ಗಾಯಿಸಲಾಗಿದೆ. ಯಡಿಯೂರಪ್ಪ ಅವರು ಈ ಟ್ರಸ್ಟ್ ನ ಪ್ರಮುಖ ಟ್ರಸ್ಟಿಯಾಗಿರುವುದು ಗಮನಾರ್ಹ ಸಂಗತಿ.
ಭ್ರಷ್ಟಾಚಾರ, ಸಂಚು, ವಂಚನೆ, 1991ರ ಭೂ ಕಾಯಿದೆ ಉಲ್ಲಂಘನೆ ಮುಂತಾದ ಆರೋಪ ಹೊತ್ತಿರುವ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಅವರ ಮಕ್ಕಳು, ಅಳಿಯಂದಿರುಗಳ ಮೇಲೆ ಹೆಚ್ಚಿನ ತನಿಖೆ ನಡೆಯಬೇಕಿದೆ ಎಂದು ಸಿಬಿಐ ವಕೀಲ ಅಶೋಕ್ ವಾದಿಸಿದರು.
ಸದಾನಂದ ಪಡೆಗೆ ಖುಷಿ: ಪರಿಷತ್ ಚುನಾವಣೆ ನಂತರ ಸಂಪುಟ ವಿಸ್ತರಣೆ ಗ್ಯಾರಂಟಿ ಎಂದಿರುವ ಸದಾನಂದ ಗೌಡರು, ಕೆಲ ಸಚಿವರಿಗೆ ಕೊಕ್ ನೀಡುವುದಾಗಿ ಘೋಷಿಸಿದ ಬೆನ್ನಲ್ಲೇ ಈ ತೀರ್ಪು ಹೊರಬಿದ್ದಿದೆ. ಯಡಿಯೂರಪ್ಪ ಬೆಂಬಲಿತ ಶಾಸಕ, ಸಚಿವರ ಉಪದ್ರವಕ್ಕೆ ಫುಲ್ ಸ್ಟಾಪ್ ಬೀಳುವ ಸಾಧ್ಯತೆಯಿದೆ. ರಾಜ್ಯದಾದ್ಯಂತ ಪ್ರವಾಸ, ಹೊಸ ಪಕ್ಷ ಸೇರ್ಪಡೆ, ಬೇರೆ ಪಕ್ಷಕ್ಕೆ ಬೆಂಬಲ ಇತ್ಯಾದಿ ಸುದ್ದಿಗಳು ಸದ್ಯಕ್ಕೆ ನಿದ್ದೆ ಮಾಡುತ್ತಿದೆ.
ಐಪಿಸಿ ಸೆಕ್ಷನ್ 120 (b), 409, 420 ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯಡಿ ಸೆಕ್ಷನ್ 7, 13 (2), 13(1) (c) (d) ಹಾಗೂ ಕರ್ನಾಟಕ ಭೂ ಕಾಯಿದೆ (ವರ್ಗಾವಣೆ ನಿಯಂತ್ರಣ) ಸೆಕ್ಷನ್ 9ರ ಅಡಿ ಸುಪ್ರೀಂಕೋರ್ಟ್ ನಿರ್ದೇಶನದಂತೆ ಸಿಬಿಐ ಯಡಿಯೂರಪ್ಪ ಅವರನ್ನು A1 ಎಂದು ಗುರುತಿಸಿ, ಕೇಸು ದಾಖಲಿಸಿಕೊಳ್ಳಲಾಗಿತ್ತು.